ADVERTISEMENT

ದೇಶದ ಆರ್ಥಿಕತೆಗೆ ಹೋಟೆಲ್ ಉದ್ಯಮದ ಕೊಡುಗೆ ಅಪಾರ: ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಮೇ 2025, 16:15 IST
Last Updated 29 ಮೇ 2025, 16:15 IST
ನಗರದ ಎಫ್‌ಕೆಸಿಸಿಐನ ಸರ್‌ ಎಂ.ವಿ. ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಟಿಂಬರ್‌ಟೇಲ್‌ ರೆಸಾರ್ಟ್‌ ಮತ್ತು ಸ್ಪಾ ಅಧ್ಯಕ್ಷ ಜಗನ್ನಾಥ್ ಪೈ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಥಾವರಚಂದ್‌ ಗೆಹಲೋತ್‌, ಜಿ.ಕೆ. ಶೆಟ್ಟಿ, ನಿರ್ಮಲಾನಂದನಾಥ ಸ್ವಾಮೀಜಿ, ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ನಗರದ ಎಫ್‌ಕೆಸಿಸಿಐನ ಸರ್‌ ಎಂ.ವಿ. ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಟಿಂಬರ್‌ಟೇಲ್‌ ರೆಸಾರ್ಟ್‌ ಮತ್ತು ಸ್ಪಾ ಅಧ್ಯಕ್ಷ ಜಗನ್ನಾಥ್ ಪೈ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಥಾವರಚಂದ್‌ ಗೆಹಲೋತ್‌, ಜಿ.ಕೆ. ಶೆಟ್ಟಿ, ನಿರ್ಮಲಾನಂದನಾಥ ಸ್ವಾಮೀಜಿ, ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ಆರ್ಥಿಕತೆಗೆ ಹಾಗೂ ಪ್ರವಾಸೋದ್ಯಮದ ಬೆಳವಣಿಗೆಗೆ ಹೋಟೆಲ್ ಉದ್ಯಮದ ಕೊಡುಗೆ ಅಪಾರವಾಗಿದೆ’ ಎಂದು ಆದಿ ಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. 

ಗುರುವಾರ ನಡೆದ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ 70ನೇ ವಾರ್ಷಿಕೋತ್ಸವ ಹಾಗೂ ಆತಿಥ್ಯ ರತ್ನ, ಉದ್ಯಮ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಹೋಟೆಲ್‌ ಉದ್ಯಮ ಮಹತ್ವದ ಪಾತ್ರವಹಿಸುತ್ತಿದೆ. ಇದರಿಂದ ನಮ್ಮ ಸಂಸ್ಕೃತಿ, ಆಚಾರ–ವಿಚಾರಗಳು, ಸ್ಥಳೀಯ ಆಹಾರ ಪದ್ಧತಿಯನ್ನು ವಿಶ್ವಕ್ಕೆ ಪರಿಚಯಿಸಲಾಗುತ್ತಿದೆ. ಹೋಟೆಲ್‌ ಉದ್ಯಮದ ಎಲ್ಲ ರೀತಿಯ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ಈ ಉದ್ಯಮದಲ್ಲಿರುವವರಿಗೆ ಕೌಶಲ ತರಬೇತಿ ನೀಡಬೇಕು. ಹೋಟೆಲ್‌ ಉದ್ಯಮಕ್ಕೆ ಸಂಬಂಧಿಸಿದಂತೆ ಹಲವಾರು ಕೋರ್ಸ್‌ಗಳಿದ್ದು, ಆಸಕ್ತರು ಪ್ರವೇಶ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಮಾತನಾಡಿ, ‘ಹೋಟೆಲ್‌ ಉದ್ಯಮವು ರಾಜ್ಯದ ಧಾರ್ಮಿಕ, ಪ್ರವಾಸೋದ್ಯಮ ಕ್ಷೇತ್ರಗಳಿಗೆ ಬರುವ ಪ್ರವಾಸಿಗರಿಗೆ ಆತಿಥ್ಯ ನೀಡುವುದರ ಜೊತೆಗೆ ಇಲ್ಲಿನ ಆಹಾರ, ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸುತ್ತಿದೆ. ಇದು ರಾಜ್ಯದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಗತಿಗೆ ಕೊಡುಗೆ ನೀಡುತ್ತಿದೆ. ನಮ್ಮ ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದರು. 

ಇದೇ ಸಂದರ್ಭದಲ್ಲಿ ಟಿಂಬರ್‌ಟೇಲ್‌ ರೆಸಾರ್ಟ್‌ ಮತ್ತು ಸ್ಪಾ ಅಧ್ಯಕ್ಷ ಜಗನ್ನಾಥ್ ಪೈ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಾನ್ಸೆರಿ ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ)ಕೆ.ವಿ. ಕುಪ್ಪುರಾಜ್‌, ಈಶಾನ್ಯ ಕೇಕ್‌ವಾಲಾ–ತಾಜಾ ತಿಂಡಿ ಅಧ್ಯಕ್ಷ ಜಿ. ಶ್ರೀನಿವಾಸ್‌ ರಾವ್, ಪಾಕಶಾಲಾ ಅಧ್ಯಕ್ಷ ಕೆ.ಎನ್. ವಾಸುದೇವ ಅಡಿಗ, ಕನ್ನಿಕಾ ಇಂಟರ್‌ನ್ಯಾಷನಲ್‌ನ ಎಂ.ಡಿ ಬಿ.ಆರ್. ನಾಗೇಂದ್ರ ಪ್ರಸಾದ್, ವಿಷ್ಣು ಭವನ ಎಂ.ಡಿ ಸಿ. ನಾರಾಯಣ ಗೌಡ, ಮಥುರಾ ಹೋಟೆಲ್‌ನ ಎಂ.ಡಿ ಗೋಪಿನಾಥ್, ಹರಿಪ್ರಿಯ ಹೋಟೆಲ್‌ನ ಎಂ.ಡಿ ಸುಧಾಕರ್ ಶೆಟ್ಟಿ, ವಿಶ್ವನಾಥ ಪ್ಯಾಲೆಸ್‌ನ ಎಂ.ಡಿ ರಾಜೇಂದ್ರ ವಿ. ಶೆಟ್ಟಿ, ಸಾಗರ್‌ ಗ್ರೂಪ್‌ ಮತ್ತು ಗಾಯತ್ರಿ ವಿಹಾರ್‌ ಸಮೂಹದ ಅಧ್ಯಕ್ಷ ಪಂಕಜ್‌ ಕೊಠಾರಿ ಅವರಿಗೆ ‘ಆಥಿತ್ಯ ರತ್ನ’ ಪ್ರಶಸ್ತಿ ನೀಡಲಾಯಿತು. 1522 ಗ್ರೂಪ್‌ನ ಎಂ.ಡಿ ಚೇತನ್‌ ಹೆಗಡೆ, ಮೇಘನಾ ಫುಡ್ಸ್‌ನ ಎಂ.ಡಿ ಬಿ. ರಮೇಶ್, ಶುಭಶ್ರೀ ಗ್ರೂಪ್‌ನ ಎಂ.ಡಿ ಶಾಂತೇಶ್ ಕೆ., ಅವರಿಗೆ ಉದ್ಯಮ ರತ್ನ ಪ್ರಶಸ್ತಿ ಪ‍್ರದಾನ ಮಾಡಲಾಯಿತು. 

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.