ADVERTISEMENT

ಪುಸ್ತಕಗಳಿಗಿಂತ ದೊಡ್ಡ ಶಿಕ್ಷಕರಿಲ್ಲ:ರಮೇಶ್ ಅರವಿಂದ್

ಚಲನಚಿತ್ರ ನಟ ರಮೇಶ್ ಅರವಿಂದ್ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 16:50 IST
Last Updated 18 ಜನವರಿ 2023, 16:50 IST
ಸಪ್ನ ಬುಕ್‌ ಹೌಸ್‌ನ 21ನೇ ಮಳಿಗೆಯನ್ನು ರಮೇಶ್ ಅರವಿಂದ್ ಉದ್ಘಾಟಿಸಿದರು. ನಾಗತಿಹಳ್ಳಿ ಚಂದ್ರಶೇಖರ್, ಸಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಚಲನಚಿತ್ರ ನಟಿ ರಂಜನಿ ರಾಘವನ್ ಹಾಗೂ ವಿಶ್ವೇಶ್ವರ ಭಟ್ ಇದ್ದಾರೆ.
ಸಪ್ನ ಬುಕ್‌ ಹೌಸ್‌ನ 21ನೇ ಮಳಿಗೆಯನ್ನು ರಮೇಶ್ ಅರವಿಂದ್ ಉದ್ಘಾಟಿಸಿದರು. ನಾಗತಿಹಳ್ಳಿ ಚಂದ್ರಶೇಖರ್, ಸಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಚಲನಚಿತ್ರ ನಟಿ ರಂಜನಿ ರಾಘವನ್ ಹಾಗೂ ವಿಶ್ವೇಶ್ವರ ಭಟ್ ಇದ್ದಾರೆ.   

ಬೆಂಗಳೂರು: ‘ನಮ್ಮ ಮೇಲೆ ಪ್ರಭಾವ ಬೀರುವ ಮೇಷ್ಟ್ರುಗಳು ಕೆಲವೇ ವರ್ಷಗಳಲ್ಲಿ ನಮ್ಮಿಂದ ದೂರವಾಗುತ್ತಾರೆ. ಅದೇ ಪುಸ್ತಕವೆಂಬ ಮೇಷ್ಟ್ರು ಸದಾ ನಮ್ಮೊಂದಿಗೆ ಇರುತ್ತವೆ. ಪುಸ್ತಕಕ್ಕಿಂತ ದೊಡ್ಡ ಶಿಕ್ಷಕರು ಬೇರೆಯಿಲ್ಲ’ ಎಂದು ಚಲನಚಿತ್ರ ನಟ ರಮೇಶ್ ಅರವಿಂದ್ ಹೇಳಿದರು.

ಎಚ್‌ಎಸ್ಆರ್ ಬಡಾವಣೆಯಲ್ಲಿ ನಿರ್ಮಾಣವಾದ ಸಪ್ನ ಬುಕ್ ಹೌಸ್‌ನ 21ನೇ ಮಳಿಗೆಯನ್ನು ಬುಧವಾರ ಉದ್ಘಾಟಿಸಿದ ಅವರು, ‘ಸರಿಯಾದ ಪುಸ್ತಕವನ್ನು ಆಯ್ಕೆ ಮಾಡಿಕೊಂಡರೆ ನಮ್ಮ ಯೋಚನೆ, ಮನಸ್ಸು ಬದಲಾಗುತ್ತದೆ. ಸೂಕ್ಷ್ಮವಾಗಿ ಯೋಚನೆ ಮಾಡಬಲ್ಲ ಲೇಖಕ ಹಾಗೂ ಅಷ್ಟೇ ಸೂಕ್ಷ್ಮ ಮನಸ್ಸಿನ ಓದುಗನ ಸಂಯೋಜನೆ ಅದ್ಭುತವನ್ನು ಸೃಷ್ಟಿಸುತ್ತದೆ’ ಎಂದು ತಿಳಿಸಿದರು.

ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಪುಸ್ತಕಗಳಿಗೆ ಜಗತ್ತನ್ನು ಬದಲಾಯಿಸುವ ಶಕ್ತಿಯಿದೆ. ಆದ್ದರಿಂದ ಪುಸ್ತಕವನ್ನು ಭಾವನಾತ್ಮಕವಾಗಿ ನೋಡುವ ಜತೆಗೆ ವೃತ್ತಿಯಾಗಿಯೂ ಬೆಳೆಸಬೇಕು. ಒಂದು ಬಡಾವಣೆ, ಪ್ರದೇಶದ ಶ್ರೀಮಂತಿಕೆಯನ್ನು ಅಲ್ಲಿರುವ ಪುಸ್ತಕ ಭಂಡಾರಗಳ ಸಂಖ್ಯೆಯಿಂದ ಅಳೆಯಬೇಕು. ಪ್ರತಿ ಬಡಾವಣೆಗೂ ಪುಸ್ತಕ ಮಳಿಗೆ ಬರಬೇಕು’ ಎಂದು ಹೇಳಿದರು.

ADVERTISEMENT

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ‘ಇಡೀ ರಾಜ್ಯದಲ್ಲಿ 23 ಸಾವಿರ ಮದ್ಯದಂಗಡಿಗಳಿವೆ. ಆದರೆ, ಕೇವಲ 61 ಪುಸ್ತಕ ಮಳಿಗೆಗಳಿವೆ. ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿರುವ ಕೋಲಾರದಲ್ಲಿ ಒಂದೇ ಒಂದು ಪುಸ್ತಕ ಮಳಿಗೆ ಇಲ್ಲ. ಉತ್ತರ ಕನ್ನಡದಲ್ಲಿ ಒಂದೇ ಒಂದು ಪುಸ್ತಕದ ಮಳಿಗೆಯಿದೆ. ಬೆಂಗಳೂರಿನ ರಸ್ತೆ ರಿಪೇರಿಗೆ ವರ್ಷಕ್ಕೆ ₹ 800 ಕೋಟಿ ಖರ್ಚು ಮಾಡುವ ರಾಜ್ಯ ಸರ್ಕಾರ, ಪುಸ್ತಕ ಖರೀದಿಗೆ ₹ 15 ಕೋಟಿ ಅನುದಾನ ನೀಡುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.