ಓಟ
ಕೆ.ಆರ್ಪುರ: ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಭಾರತೀಯ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ಹಾಗೂ ಸೈನಿಕರ ಧೈರ್ಯ, ಸಾಹಸ ಹಾಗೂ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಹೆಣ್ಣೂರು-ಬಾಣಸವಾಡಿ ಕಾಸ್ಮೋಪಾಲಿಟನ್ ಕ್ಲಬ್ ಆಶ್ರಯದಲ್ಲಿ ‘ಯುನಿಟಿ ರನ್’ ಓಟವನ್ನು ಆಯೋಜಿಸಲಾಗಿತ್ತು.
ಕ್ಲಬ್ ಆವರಣದಿಂದ ಬೆಳಿಗ್ಗೆ 6.30 ಗಂಟೆಗೆ ಓಟ ಆರಂಭವಾಯಿತು. ಕಲ್ಯಾಣನಗರ ಮತ್ತು ಎಚ್.ಆರ್.ಬಿ.ಆರ್ ಮುಖ್ಯರಸ್ತೆಯ ಮುಖಾಂತರ ಕಲ್ಯಾಣನಗರದ ಓಂ ಶಕ್ತಿ ದೇವಸ್ಥಾನದ ಮಾರ್ಗವಾಗಿ 3 ಮತ್ತು 6 ಕಿಲೋಮೀಟರ್ ದೂರದವರೆಗೆ ಸಂಚರಿಸಿ, 8 ಗಂಟೆಗೆ ಮತ್ತೆ ಕ್ಲಬ್ನ ಆವರಣಕ್ಕೆ ಆಗಮಿಸಿತು. ಓಟದಲ್ಲಿ 800ಕ್ಕೂ ಹೆಚ್ಚು ಮಂದಿ ಭಾಗವಹಿಸಿ ದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಕ್ಲಬ್ನ ಅಧ್ಯಕ್ಷ ಹಾಗೂ ಅಂತರರಾಷ್ಟ್ರೀಯ ಹಾಕಿ ಆಟಗಾರ ಎ.ಬಿ.ಸುಬ್ಬಯ್ಯ, ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಭಾರತೀಯ ಸಶಸ್ತ್ರ ಪಡೆಗೆ ಗೌರವ ಸಲ್ಲಿಸಲು ಮತ್ತು ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸುವುದರ ಜೊತೆಗೆ ಸೈನಿಕರಿಗೆ ಇನ್ನಷ್ಟು ಸ್ಫೂರ್ತಿ ನೀಡಲು ಮತ್ತು ನಾಗರಿಕರಲ್ಲಿ ಹುರುಪು ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಯುನಿಟಿ ರನ್
ಆಯೋಜಿಸಲಾಗಿತ್ತು.
ಓಟದಲ್ಲಿ 6ರಿಂದ 70 ವರ್ಷದವರೆಗಿನ ವಯೋಮಾನದವರು ಉತ್ಸಾಹದಿಂದ ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಶಾಸಕ ಧೀರಜ್ ಮುನಿರಾಜು, ಕ್ಲಬ್ನ ಉಪಾಧ್ಯಕ್ಷ ಅಂಥೋಣಿ ಎಸ್.ಎಲ್, ಕಾರ್ಯದರ್ಶಿ ಕೆ.ಪ್ರಶಾಂತ್ ರೆಡ್ಡಿ, ಖಜಾಂಚಿ ಕೆ.ಬಿ.ರತ್ನಾಕರರೆಡ್ಡಿ, ಮಾಜಿ ಅಧ್ಯಕ್ಷ ಕೆ.ಸಿ.ಜಗನ್ನಾಥರೆಡ್ಡಿ, ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ನಾಗರಾಜು, ಎಸಿಪಿ ರಂಗಪ್ಪ, ಬಿಬಿಎಂಪಿ ವಿರೋಧಪಕ್ಷದ ಮಾಜಿ ನಾಯಕ ಪದ್ಮನಾಭ ರೆಡ್ಡಿ, ನಗರಸಭೆ ಮಾಜಿ ಸದಸ್ಯ ಕೆ.ಸಿ.ಗಣೇಶ್ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.