ಬೀದರ್: ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೂರನೇ ದಿನವಾದ ಗುರುವಾರವೂ ಮಳೆ ಮುಂದುವರೆದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಂಗಳವಾರ ಆರಂಭಗೊಂಡಿರುವ ಮಳೆ ಎಡೆಬಿಡದೆ ಹಗಲು-ರಾತ್ರಿ ಧಾರಾಕಾರವಾಗಿ ಸುರಿಯುತ್ತಿದೆ. ಬುಧವಾರ ಮಳೆಯಲ್ಲೇ ಜನ ಹಬ್ಬದ ಖರೀದಿ ಮಾಡಿ, ಗಣೇಶನ ಪ್ರತಿಷ್ಠಾಪನೆ ಮಾಡಿದ್ದರು. ಸಾರ್ವಜನಿಕ ಗಣೇಶ ಕೂಡ ಪ್ರತಿಷ್ಠಾಪಿಸಲಾಗಿತ್ತು.
ಮುಂಜಾಗೃತಾ ಕ್ರಮವಾಗಿ ಗುರುವಾರ (ಆ. 28ರಂದು) ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ಶಾಲೆ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ರಾತ್ರಿಯಿಂದ ಮಳೆಯ ತೀವ್ರತೆ ಜಾಸ್ತಿಯಾಗಿದೆ. ಅನೇಕ ಕಡೆ ಸೇತುವೆಗಳು ಮುಳುಗಿ ಹೋಗಿ ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಉದಗೀರ್ಗೆ ಹೋಗುವ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಎಕಂಬಾ ಬಳಿ ಸೇತುವೆ ಮೇಲಿನಿಂದ ನೀರು ಹರಿಯುತ್ತಿರುವುದರಿಂದ ಜನ-ಜಾನುವಾರು ಓಡಾಟ ಸ್ಥಗಿತವಾಗಿದೆ. ಕೆಲ ಕಡೆ ಅಗ್ನಿಶಾಮಕ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿರುವುದರಿಂದ ರೈತರು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ ಎಂದು ಔರಾದ್ ತಹಶೀಲ್ದಾರ್ ಮಹೇಶ ಪಾಟೀಲ ಪ್ರಜಾವಾಣಿಗೆ ತಿಳಿಸಿದ್ದಾರೆ.
ಬೀದರ್–ಕಲಬುರಗಿ ರೈಲು ರದ್ದು
ಸತತ ಮಳೆಯ ಹಿನ್ನೆಲೆಯಲ್ಲಿ ಬೀದರ್–ಕಲಬುರಗಿ ನಡುವೆ ನಿತ್ಯ ಸಂಚರಿಸುವ ಡೆಮು ರೈಲು ಸಂಚಾರವನ್ನು ಶುಕ್ರವಾರ (ಆ.29) ರದ್ದುಗೊಳಿಸಲಾಗಿದೆ.
‘ಹವಾಮಾನ ವೈಪರೀತ್ಯದ ಕಾರಣದಿಂದ ಬೀದರ್–ಕಲಬುರಗಿ (ಗಾಡಿ ಸಂಖ್ಯೆ: 77631) ಹಾಗೂ ಕಲಬುರಗಿ–ಬೀದರ್ (ಗಾಡಿ ಸಂಖ್ಯೆ: 77632) ನಡುವೆ ನಿತ್ಯ ಸಂಚರಿಸುವ ರೈಲಿನ ಸಂಚಾರ ರದ್ದುಪಡಿಸಲಾಗಿದೆ’ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.