ADVERTISEMENT

ಬೀದರ್‌ | ಬೆಳೆ ವಿಮೆ ಬಿಜೆಪಿ ಪ್ರಾಯೋಜಿತ ಗೋಲ್ಮಾಲ್: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 12:30 IST
Last Updated 15 ಡಿಸೆಂಬರ್ 2025, 12:30 IST
   

ಬೀದರ್‌: ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದಂತೆ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಮತ್ತು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ನಡುವೆ ಆರೋಪ–ಪ್ರತ್ಯಾರೋಪ, ಪರಸ್ಪರ ಟೀಕೆ–ಟಿಪ್ಪಣಿ ಹೆಚ್ಚಿದೆ.

ಬಿಜೆಪಿ ಪ್ರಾಯೋಜಿತ ಗೋಲ್ಮಾಲ್–ಖಂಡ್ರೆ:

ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ರೈತರು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪಾವತಿಸಿರುವ ಕಂತಿನ ಹಣ ಎಷ್ಟು? ಈವರೆಗೆ ರೈತರಿಗೆ ನೀಡಿರುವ ಪರಿಹಾರ ಎಷ್ಟು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಆಗ್ರಹಿಸಿದ್ದಾರೆ.

ಸದನದಲ್ಲಿ ಬೆಳೆ ವಿಮೆ ಯೋಜನೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾಗಿ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಯೋಜನೆ ಬಗ್ಗೆ ಶ್ವೇತಪತ್ರ ಹೊರಡಿಸಿದರೆ ಖಾಸಗಿ ವಿಮಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಹೇಗೆ ಲಾಭ ಮಾಡಿಕೊಡುತ್ತಿದೆ ಎಂಬುದು ಬಟಾ ಬಯಲಾಗಲಿದೆ ಎಂದಿದ್ದಾರೆ.

ADVERTISEMENT

ದೇಶದಾದ್ಯಂತ ಬೆಳೆ ವಿಮೆ ಯೋಜನೆ ಜಾರಿಯಾದ ದಿನದಿಂದ ಈವರೆಗೆ ವಿಮಾ ಕಂಪನಿಗಳು ಉದ್ದಾರ ಆಗಿದೆಯೇ ಹೊರತು ರೈತರಲ್ಲ. ಇದೊಂದು ಬಿಜೆಪಿ ಪ್ರಾಯೋಜಿತ ಪಕ್ಕಾ ಗೋಲ್ಮಾಲ್ ಯೋಜನೆ ಎಂದು ಆರೋಪಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಜನರು ಆಕ್ಸಿಜನ್ ಸಿಗದೇ ರೆಮಿಡಿಸಿವರ್ ಚುಚ್ಚುಮದ್ದು ಸಿಗದೇ, ಉದ್ಯೋಗವೂ ಇಲ್ಲದೆ ಹಸಿವಿನಿಂದ ಬಳಲುತ್ತಿದ್ದಾಗ ಮನೆಯಲ್ಲಿ ಬಾಗಿಲು ಮುಚ್ಚಿ ಕುಳಿತಿದ್ದ ಖೂಬಾ ಈಗ ಬೀದಿಯಲ್ಲಿ ನಿಂತು ವೀರಾವೇಷದಿಂದ ಮಾತನಾಡಿದರೆ ಜನ ನಂಬುವುದಿಲ್ಲ. ಅವರಿಗೆ ಸತ್ಯದ ಅರಿವಿದೆ. ಖೂಬಾಗೆ ಮಾಡಲು ಕೆಲಸವಿಲ್ಲ; ಈಗ ನಿರುದ್ಯೋಗಿಯಾಗಿದ್ದಾರೆ ಮಾಧ್ಯಮ ಹೇಳಿಕೆ ನೀಡುತ್ತಾ, ಕಾಲ ತಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಹುಳುಕು ಹುಡುಕುತ್ತಿರುವ ಈಶ್ವರ ಖಂಡ್ರೆ–ಖೂಬಾ

ಬೀದರ್‌: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಬೆಳೆ ವಿಮೆ ಯೋಜನೆಯಿಂದ ಜಿಲ್ಲೆಯ ರೈತರಿಗೆ ಸರಿಯಾಗಿ ಲಾಭ ಕೊಡಿಸುವುದರಲ್ಲಿ ವಿಫಲರಾಗಿದ್ದಾರೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಯೋಜನೆ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಕುಣಿಯಲು ಬಾರದವ ನೆಲ ಡೊಂಕು ಎನ್ನುವವರಂತೆ ಮಾತನಾಡುತ್ತಿರುವುದು ನಾಚಿಕೆಗೇಡು’ ಎಂದು ಕೇಂದ್ರದ  ಮಾಜಿ ಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಟೀಕಿಸಿದ್ದಾರೆ.

ನಾನು ಸಂಸದನಿದ್ದಾಗ 7 ವರ್ಷದಲ್ಲಿ ₹600 ಕೋಟಿಗೂ ಅಧಿಕ ಪರಿಹಾರ ಜಿಲ್ಲೆಯ ರೈತರಿಗೆ ಕೊಡಿಸಿದ್ದೆ. ಇವಾಗ ನಿಮ್ಮಿಂದ (ಖಂಡ್ರೆ) ಮತ್ತು ನಿಮ್ಮ ಮಗನಿಂದ (ಸಾಗರ್‌ ಖಂಡ್ರೆ) ಯಾಕೆ ಕೊಡಿಸಲು ಆಗುತ್ತಿಲ್ಲ? ಇದು ನಿಮ್ಮ ವೈಫಲ್ಯವೋ? ನಿಮ್ಮ ಕುತಂತ್ರವೋ? ಅಥವಾ ನಿಮ್ಮ ರೈತ ವಿರೋಧಿ ನೀತಿಯೋ ಎಂದು ಖೂಬಾ ಪ್ರಶ್ನಿಸಿದ್ದಾರೆ.

ಈ ವರ್ಷ ಕಲಬುರಗಿ ಜಿಲ್ಲೆಗೆ ಸುಮಾರು ₹565 ಕೋಟಿಗೂ ಅಧಿಕ ಪರಿಹಾರ ಬರುವ ನಿರೀಕ್ಷೆಯಿದೆ. ಖಂಡ್ರೆ ಅವರು ಯೋಜನೆ ಪ್ರಾರಂಭವಾದಾಗಿನಿಂದ ಇದರ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಾ, ರೈತರಿಗೆ ಲಾಭ ಸಿಗದಂತೆ ಷಡ್ಯಂತ್ರ ಮಾಡುತ್ತಿದ್ದಾರೆ. ತಂದೆ - ಮಗ ಅಧಿಕಾರದಲ್ಲಿದ್ದುಕೊಂಡು ಬೆಳೆ ವಿಮೆ ಯೋಜನೆ ವಿಫಲಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಖಂಡ್ರೆ ಸದನದ ದುರುಪಯೋಗ ಪಡಿಸಿಕೊಂಡು ಪಿ.ಎಮ್.ಎಫ್.ಬಿ.ವೈ ಯೋಜನೆಯ ನ್ಯೂನತೆ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದು ಮೊಸರಲ್ಲಿ ಕಲ್ಲು ಹುಡುಕುವ ಹಾಗಿದೆ ಎಂದಿದ್ದಾರೆ.

ಇವರು ಅರಣ್ಯ ಮಂತ್ರಿಯಾದ ಮೇಲೆ ಅರಣ್ಯದಲ್ಲಿರುವ ಪ್ರಾಣಿಗಳ ಜೀವಕ್ಕೂ ಕುತ್ತು ಬಂದಿದೆ. ಹುಲಿಗಳ, ಜಿಂಕೆಗಳ, ಕೃಷ್ಣಮೃಗಗಳ, ಆನೆಗಳ ಸಾವು ಹೆಚ್ಚಾಗಿದೆ. ಇದನ್ನು ಸದನದಲ್ಲಿ ಪ್ರಶ್ನಿಸಿದರೆ, ಕೋವಿಡ್ ನಲ್ಲಿ ಸತ್ತ ಜನಕ್ಕೆ ಬಿಜೆಪಿ ಕಾರಣವಾ ಎಂದು ಮರು ಪ್ರಶ್ನಿಸುತ್ತಾರೆ. ಮೋದಿಯಂತಹ ಪ್ರಧಾನಿಗಳು ಈ ದೇಶದಲ್ಲಿ ಇರೋದ್ರಿಂದ ಕೋವಿಡ್‌ನಿಂದ ನಮ್ಮ ಜನ ಸುರಕ್ಷಿತವಾಗಿದ್ದಾರೆ ಎಂದು ತಿರುಗೇಟು ನೀಡಿದ್ಧಾರೆ.

ಬೆಳೆ ವಿಮೆ ನೋಂದಣಿಗೆ ಡಿ. 31 ಕೊನೆ ದಿನ

ಬೀದರ್‌: 2025-26ನೇ ಸಾಲಿನ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಡಲೆ (ಮಳೆಯಾಶ್ರಿತ) ಹಾಗೂ ಹೋಬಳಿ ಮಟ್ಟದ ಬೆಳೆಗಳಾದ ಗೋಧಿ (ನೀರಾವರಿ), ಜೋಳ (ನೀರಾವರಿ), ಕಡಲೆ (ನೀರಾವರಿ) ಬೆಳೆಗಳಿಗೆ ನೋಂದಣಿ ಪ್ರಾರಂಭವಾಗಿದ್ದು, ಡಿ.31 ಕೊನೆ ದಿನವಾಗಿದೆ ಎಂದು ಬೀದರ್‌ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಳೆ ನಷ್ಟ ಪರಿಸ್ಥಿತಿಯಲ್ಲಿ ರೈತರು ಅನುಕೂಲ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರೂ ಸಹ ಪಾಲ್ಗೊಳ್ಳಬಹುದಾಗಿದೆ. ಈ ಯೋಜನೆ ಅನುಷ್ಠಾನಗೊಳಿಸಲು ಬೆಂಗಳೂರಿನ ಯೂನಿವರ್ಸಲ್‌ ಸೋಂಪೊ ಜನರಲ್ ಇನ್‍ಶೂರೆನ್ಸ್ ಕಂಪನಿ ಲಿಮಿಟೆಡ್ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಅಥವಾ ಸಂಬಂಧಪಟ್ಟ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.