
ಬೀದರ್: ‘ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಸೋಮವಾರದಿಂದ (ಜ.5) ಹುಲಿ ಹಾಗೂ ಮಾಂಸಾಹಾರಿ ಪ್ರಾಣಿಗಳ ಗಣತಿ ಪ್ರಕ್ರಿಯೆ ಆರಂಭಗೊಂಡಿದೆ’ ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಳಿ, ಭದ್ರಾ, ನಾಗರಹೊಳೆ, ಬಂಡೀಪುರ, ಬಿ.ಆರ್.ಟಿ. ಹುಲಿ ಸಂರಕ್ಷಿತ ಧಾಮ ಸೇರಿದಂತೆ ರಾಜ್ಯದ ಎಲ್ಲ ಅರಣ್ಯ ಪ್ರದೇಶದಲ್ಲಿ ಗಣತಿ ಆರಂಭವಾಗಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಾದ್ಯಂತ ಹುಲಿ ಅಂದಾಜು ಗಣತಿ ನಡೆಯುತ್ತಿದೆ ಎಂದರು.
ಈಗ ನಡೆಯುತ್ತಿರುವುದು ಆರನೇ ಗಣತಿ. ಈ ಹಿಂದೆ 2006, 2010, 2014, 2018 ಮತ್ತು 2022ರಲ್ಲಿ ಗಣತಿ ನಡೆದಿತ್ತು. ರಾಜ್ಯದಲ್ಲಿ ಸುಮಾರು 563 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ರಾಜ್ಯ ಹುಲಿ ಸಂಖ್ಯೆಯಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆದಿತ್ತು ಎಂದು ಹೇಳಿದರು.
ರಾಜ್ಯದ ಅರಣ್ಯ ಪ್ರದೇಶಗಳ ಪ್ರತಿ ವಲಯದಲ್ಲಿರುವ ಎಲ್ಲ 38 ಅರಣ್ಯ ವಿಭಾಗದ ಗಸ್ತುಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಕಳೆದ ಅಕ್ಟೋಬರ್ -ಡಿಸೆಂಬರ್ ನಲ್ಲಿ 5 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಪ್ರತ್ಯೇಕವಾಗಿ ಮತ್ತು ರಾಜ್ಯದ ಎಲ್ಲಾ 13 ಅರಣ್ಯ ವೃತ್ತಗಳ ಮುಂಚೂಣಿ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಮೂರು ದಿನಗಳ ಕಾಲ ರಾಜ್ಯದ ಎಲ್ಲ ಗಸ್ತಿನಲ್ಲಿ 3 ಜನರ ತಂಡ ಪ್ರತಿನಿತ್ಯ 5 ಕಿ.ಮೀ. ಕಾಡಿನಲ್ಲಿ ಸಂಚರಿಸಿ ಹುಲಿ, ಚಿರತೆ ಸೇರಿದಂತೆ ಎಲ್ಲ ಮಾಂಸಾಹಾರಿ ಪ್ರಾಣಿಗಳ ಮತ್ತು ಆನೆಯ ಕಾಲು ಗುರುತು, ಲದ್ದಿ, ಪ್ರತ್ಯಕ್ಷ ದರ್ಶನ ಇತ್ಯಾದಿ ವಿವರ ಕಲೆ ಹಾಕಲಿದೆ. ಜನವರಿ 15ರಿಂದ 17ರ ವರೆಗೆ 14 ಅರಣ್ಯ ವಿಭಾಗಗಳಲ್ಲಿ 2ನೇ ಹಂತದ ಗಣತಿ ಅಂದಾಜು ನಡೆಯಲಿದೆ. ಪ್ರತಿ ತಂಡ ಕಾಡಿನಲ್ಲಿ ಸಂಚರಿಸಿ ಜಿಂಕೆ, ಕಡವೆ, ಕಾಡೆಮ್ಮೆ, ಕಾಡುಕೋಣ ಸೇರಿದಂತೆ ಸಸ್ಯಹಾರಿ ಪ್ರಾಣಿಗಳ ಸಾಕ್ಷಾತ್ ದರ್ಶನದ ಮಾಹಿತಿ ಕಲೆ ಹಾಕಲಿದೆ. ಇದರಿಂದ ಎಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸಬೇಕು ಎಂಬುದನ್ನು ನಿರ್ಧರಿಸಲು ಅನುಕೂಲವಾಗುತ್ತದೆ ಎಂದರು.
ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಅವರನ್ನು ಎನ್.ಟಿ.ಸಿ.ಎ.ಗೆ ನೋಡಲ್ ಅಧಿಕಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ. ಇವರು ಈ ಅಂದಾಜಿನ ಉಸ್ತುವಾರಿ ವಹಿಸಲಿದ್ದಾರೆ. ಇವರಿಗೆ ಯಾವ ಪ್ರದೇಶದಲ್ಲಿ ಎಷ್ಟು ಹುಲಿ ಮತ್ತು ಇತರೆ ಮಾಂಸಾಹಾರಿ ಪ್ರಾಣಿಗಳಿವೆ. ಆ ವಿಭಾಗದಲ್ಲಿ ಎಷ್ಟು ಸಸ್ಯಾಹಾರಿ ಪ್ರಾಣಿಗಳಿವೆ ಎಂಬುದನ್ನು ಪಟ್ಟಿಮಾಡಿ, ಯಾವ ಅರಣ್ಯದಲ್ಲಿ ಎಷ್ಟು ಹುಲಿಗಳಿವೆ, ಅವುಗಳಿಗೆ ಅಗತ್ಯ ಆಹಾರವಾದ ಸಸ್ಯಾಹಾರಿ ಪ್ರಾಣಿಗಳು ಎಷ್ಟಿವೆ ಎಂದು ಗ್ರಹಿಸಿ ಕಾನನದ ಧಾರಣಾ ಸಾಮರ್ಥ್ಯ (ಕ್ಯಾರಿಯಿಂಗ್ ಕ್ಯಪಾಸಿಟಿ) ಗುರುತಿಸಲು ಸೂಚಿಸಲಾಗಿದೆ ಎಂದು ವಿವರಿಸಿದರು.
ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಡಿನಿಂದ ನಾಡಿಗೆ ಬರುತ್ತಿರುವುದನ್ನು ನೋಡಿದರೆ ಈ ಬಾರಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಗೋಚರಿಸುತ್ತಿದೆ. ಇದು ಗಣತಿಯಿಂದ ನಿಖರವಾಗಿ ತಿಳಿಯಲಿದೆ ಎಂದರು.
2,300 ಕ್ಯಾಮೆರಾ ಟ್ರ್ಯಾಪ್ ಅಳವಡಿಕೆ: 2ನೇ ಹಂತದ ಸಮೀಕ್ಷೆಯಲ್ಲಿ ಕಲೆ ಹಾಕಲಾದ ಮಾಂಸಾಹಾರಿ ಪ್ರಾಣಿಗಳ ದತ್ತಾಂಶ ಬಳಿಸಿಕೊಂಡು ಮೂರನೇ ಹಂತದಲ್ಲಿ ಸೂಕ್ತ ಸ್ಥಳಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಗಳನ್ನು ಅಳವಡಿಸಲಾಗುವುದು. 5 ಹುಲಿ ಮೀಸಲು ಪ್ರದೇಶಗಳಲ್ಲಿ 2,230 ಕ್ಯಾಮೆರಾ ಟ್ರ್ಯಾಪ್ ಗಳಿದ್ದು, ಎಲ್ಲಾ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಈ ಪೈಕಿ ನಾಗರಹೊಳೆ ಹುಲಿ ಮೀಸಲು ಪ್ರದೇಶ (600 ಕ್ಯಾಮೆರಾ ಟ್ರ್ಯಾಪ್), ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (550 ), ಬಿಆರ್.ಟಿ ಯಲ್ಲಿ (300), ಭದ್ರಾದಲ್ಲಿ (330), ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (450) ಕ್ಯಾಮೆರಾ ಟ್ರ್ಯಾಪ್ ಇವೆ ಎಂದು ವಿವರಿಸಿದರು.
ಹುಲಿ ಸಂರಕ್ಷಿತ ಪ್ರದೇಶದ ಹೊರಗೆ ಸಹ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲು ಕ್ರಮ ವಹಿಸಲಾಗಿದ್ದು, ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆ ಪೂರ್ಣಗೊಂಡಿರುವ ಹತ್ತಿರದ ಹುಲಿ ಮೀಸಲು ಪ್ರದೇಶಗಳು ಕ್ಯಾಮೆರಾ ಪೂರೈಸುತ್ತವೆ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.