ADVERTISEMENT

ಗುಂಡ್ಲುಪೇಟೆ | ಅತಿವೃಷ್ಟಿ: ಮೊಳಕೆ ಬಾರದೆ ಕೊಳೆತ ಆಲೂಗಡ್ಡೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 13:27 IST
Last Updated 19 ಜೂನ್ 2025, 13:27 IST
ಗುಂಡ್ಲುಪೇಟೆ ತಾಲ್ಲೂಕಿನ , ಶಿವಪುರ ಗ್ರಾಮದ ಸುತ್ತಮುತ್ತ ಬಿತ್ತನೆ ಮಾಡಿದ್ದ ಆಲೂಗಡ್ಡೆ ಕೊಳೆತಿರುವುದು
ಗುಂಡ್ಲುಪೇಟೆ ತಾಲ್ಲೂಕಿನ , ಶಿವಪುರ ಗ್ರಾಮದ ಸುತ್ತಮುತ್ತ ಬಿತ್ತನೆ ಮಾಡಿದ್ದ ಆಲೂಗಡ್ಡೆ ಕೊಳೆತಿರುವುದು   

ಗುಂಡ್ಲುಪೇಟೆ: ಕಳೆದ ವರ್ಷ ಅತಿವೃಷ್ಟಿಯಿಂದ ಆಲೂಗಡ್ಡೆ ಬೆಳೆ ನಾಶವಾಗಿ ನಷ್ಟ ಅನುಭವಿಸಿದ್ದ ಬೆಳೆಗಾರರು ಈ ವರ್ಷವೂ ಸಂಕಷ್ಟಕ್ಕೆ ಸಿಲುಕಿದ್ದಾರೆ. 20 ದಿನಗಳ ಹಿಂದೆ ಬಿತ್ತನೆ ಮಾಡಿದ್ದ ಆಲೂಗಡ್ಡೆ ಮೊಳಕೆಯೊಡೆಯದೆ ಬೆಳೆಗಾರರು ದಿಕ್ಕುತೋಚದಂತಾಗಿದ್ದಾರೆ.

ತಾಲ್ಲೂಕಿನ ಕಲ್ಲಿಗೌಡನಹಳ್ಳಿ, ಶಿವಪುರ ಗ್ರಾಮದ ಸುತ್ತಮುತ್ತ 2,500 ದಿಂದ 3,000 ಮೂಟೆಗಳಷ್ಟು ಬಿತ್ತನೆ ಮಾಡಿದ್ದ ಆಲೂಗಡ್ಡೆ ಬೂಸ್ಟ್ ಹಿಡಿದಿದೆ. ಬಿತ್ತನೆ ಮಾಡಿ ಹಲವು ದಿನ ಕಳೆದರೂ ಮೊಳಕೆ ಬಾರದ ಹಿನ್ನೆಲೆಯಲ್ಲಿ ಸಂಶಯಗೊಂಡ ರೈತರು ಭೂಮಿ ಅಗೆದು ನೋಡಿದಾಗ ಆಲೂಗಡ್ಡೆ ಸಂಪೂರ್ಣ ಹಾಳಾಗಿರುವುದು ಕಂಡುಬಂದಿದೆ.

ಈ ಭಾಗದ ಪ್ರಮುಖ ತರಕಾರಿ ಬೆಳೆಯಾಗಿರುವ ಆಲೂಗಡ್ಡೆಯನ್ನು ತಾಲ್ಲೂಕಿನಾದ್ಯಂತ 2,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಸಾಮಾನ್ಯವಾಗಿ ಬೆಕ್ಕಲು ಭೂಮಿಯಲ್ಲಿ ಮೇ ಅಂತ್ಯದಲ್ಲಿ ಹಾಗೂ ಜೂನ್‌ ಆರಂಭದಲ್ಲಿ ನಾಟಿ ಶುರುವಾಗುತ್ತದೆ. ಈ ಬಾರಿಯ ಹಂಗಾಮಿನ ಆರಂಭದಲ್ಲಿ ಬಿತ್ತನೆ ಮಾಡಿದ್ದ ಆಲೂಗಡ್ಡೆ ಮೊಳಕೆಯೊಡದಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ADVERTISEMENT

‘ಒಂದು ಎಕರೆ ಆಲೂಗಡ್ಡೆ ಬಿತ್ತನೆಗೆ ₹ 50,000 ಖರ್ಚಾಗಿದೆ. ‘ಬಿ’ ಮಾರ್ಕಿನ ಆಲೂಗಡ್ಡೆ ಮೊಳಕೆ ಹೊಡೆದಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ತೋಟಗಾರಿಕೆ ಇಲಾಖೆ ಪತ್ತೆ ಹಚ್ಚಿ ಪರಿಹಾರ ನೀಡಬೇಕು’ ಎಂದು ರೈತ ಮುಖಂಡ ಪುಟ್ಟಬುದ್ದಿ ಒತ್ತಾಯಿಸಿದ್ದಾರೆ.

‘ಮೊಳಕೆಯೊಡೆಯದ ಆಲೂಗಡ್ಡೆಗಳನ್ನು ಧಾರವಾಡ ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಂದ ಬಳಿಕ ಆಲೂಗಡ್ಡೆ ಯಾವ ಕಾರಣಕ್ಕೆ ಹಾಳಾಗಿದೆ ಎಂಬುದು ತಿಳಿಯಲಿದೆ. ನಿರಂತರ ಮಳೆಗೆ ಭೂಮಿಯೊಳಗೆ ತೇವಾಂಶ ಹೆಚ್ಚಾಗಿ ಬಿತ್ತನೆ ಆಲೂಗಡ್ಡೆ ಕೊಳೆತಿರಬಹುದು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.