ADVERTISEMENT

ಚಾಮರಾಜನಗರ: ಮೇ 4ರವರೆಗೆ ಮಾದಪ್ಪನ ಕ್ಷೇತ್ರ ಭಕ್ತರಿಗೆ ಬಂದ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 4:39 IST
Last Updated 21 ಏಪ್ರಿಲ್ 2021, 4:39 IST
ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಾಲಯ
ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಾಲಯ   

ಚಾಮರಾಜನಗರ: ರಾಜ್ಯದಲ್ಲಿ ಕೋವಿಡ್‌ 2ನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ, ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರದಿಂದ (ಏಪ್ರಿಲ್‌ 21) ಮೇ 4ರ ಬೆಳಿಗ್ಗೆ 6 ಗಂಟೆಯವರೆಗೆ ಸಾರ್ವಜನಿಕರು, ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಕರ್ತವ್ಯ ನಿಮಿತ್ತ ಪ್ರಾಧಿಕಾರದ ಅನುಮತಿ ಮೇರೆಗೆ ಬರುವ ಅಧಿಕಾರಿ ಸಿಬ್ಬಂದಿ ಹಾಗೂ ಗಣ್ಯರಿಗೆ ಅವಕಾಶ ಇದೆ ಎಂದು ಕ್ಷೇತ್ರ ಅಬಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವಸ್ವಾಮಿ ಅವರು ತಿಳಿಸಿದ್ದಾರೆ.

ದೇವಾಲಯಕ್ಕೆ ಬರುವ ಭಕ್ತರ ವಾಹನಗಳಿಗೆ ತಾಳಬೆಟ್ಟದ ನಂತರ ಪ್ರವೇಶ ನಿರಾಕರಿಸಲಾಗಿದೆ. ಸ್ಥಳೀಯರು ಹಾಗೂ ರಾಜ್ಯ ಹೆದ್ದಾರಿ ಮೂಲಕ ತಮಿಳುನಾಡಿಗೆ ತೆರಳಲು ನಿರ್ಬಂಧವಿಲ್ಲ.

ADVERTISEMENT

ದೇವಾಲಯದಲ್ಲಿ ದಾಸೋಹ, ಲಾಡು ಪ್ರಸಾದ, ತೀರ್ಥ, ನೈವೇದ್ಯ ಪ್ರಸಾದ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಚಿನ್ನದ ತೇರಿನ ಸೇವೆ ಹಾಗೂ ಇತರೆ ವಾಹನಗಳ ಸೇವೆಗಳು ಸಾರ್ವಜನಿಕರಿಗೆ ಮುಕ್ತ ಇಲ್ಲ. ಆನ್‌ಲೈನ್ ಬುಕಿಂಗ್ ಮಾಡುವುದಕ್ಕೆ ಅವಕಾಶ ಇದೆ.

ಭಕ್ತಾದಿಗಳು ವಸತಿ ಗೃಹ,‌ ಕಾಟೇಜು, ಡಾರ್ಮಿಟರಿ ಹಾಗೂ ಯಾವುದೇ ತೆರೆದ ಸ್ಥಳಗಳಲ್ಲಿ ತಂಗುವುದನ್ನು ಪ್ರಾಧಿಕಾರ ನಿಷೇಧಿಸಿದೆ.

ಅಭಿಷೇಕ ಮತ್ತು ಇತರೆ ಸೇವೆಗಳನ್ನು (ಚಿನ್ನದ‌ತೇರು, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ವಾಹನ, ಅಭಿಷೇಕ ಇತ್ಯಾದಿ) ಭಕ್ತರು ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದರೆ, ಅವರ ಹೆಸರಿನಲ್ಲಿ ಅವರ ಅನುಪಸ್ಥಿತಿಯಲ್ಲಿ ಪೂಜೆ/ಸೇವೆ ನೆರವೇರಿಸಲಾಗುವುದು. ಆದರೆ ಕಳಸ/ಲಾಡು ಇತ್ಯಾದಿ‌‌ ಕಳಿಸಲಾಗುವುದಿಲ್ಲ ಎಂದು ಜಯ ವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಸೇವೆಗಳನ್ನು‌ ಕಾಯ್ದಿರಿಸಲುwww.mmhillstemple.comಗೆ ಭೇಟಿ ನೀಡಬಹುದು. ಮಾಹಿತಿಗೆ ಸಹಾಯವಾಣಿ1860 425 4350 ಗೆಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.