ಚಾಮರಾಜನಗರ:ವಿಧಾನಪರಿಷತ್ ಚುನಾವಣೆಮೈಸೂರು-ಚಾಮರಾಜಗರ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಬುಧವಾರ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆ ಜಿಲ್ಲೆಗಳಲ್ಲಿ ಹೊಂದಾಣಿಕೆ ಬಗ್ಗೆ ಮಾಹಿತಿ ಇಲ್ಲ.ಹೊಂದಾಣಿಕೆ ಮಾಡುವುದು ಆಯಾ ಜಿಲ್ಲೆಯ ಅಧ್ಯಕ್ಷರು ಹಾಗು ಉಸ್ತುವಾರಿಗೆ ಬಿಟ್ಟಿದ್ದು.ಮೈಸೂರು ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಘು (ಕೌಟಿಲ್ಯ) ಅವರಿಗೆ ಮಾತ್ರ ಒಂದೇ ಒಂದು ಪ್ರಾಶಸ್ತ್ಯ ಮತ ನೀಡಲು ಕೇಳುತ್ತಿದ್ದೇವೆ’ ಎಂದರು.
ಧ್ರುವನಾರಾಯಣಗೆ ಎಬಿಸಿಡಿ ಗೊತ್ತಿಲ್ಲ: ಕೆಜಿಎಫ್ ಬಾಬು ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರು ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಧ್ರುವನಾರಾಯಣಗೆ ಎಬಿಸಿಡಿ ಗೊತ್ತಿಲ್ಲ.ಕೆಜಿಎಫ್ ಬಾಬು ವಿರುದ್ದ 60 ಎಫ್ಐಆರ್ಗಳು ದಾಖಲಾಗಿವೆ.ಸ್ವತಃ ಅವರ ಪತ್ನಿ ಹಾಗೂ ಮಗಳೇ ದೂರು ನೀಡಿದ್ದಾರೆ. ಅಧಿಕೃತ ಮಾಹಿತಿ ಇಲ್ಲದೆ ನಾನು ಮಾತನಾಡುವುದಿಲ್ಲ’ ಎಂದರು.
‘ಧ್ರುವನಾರಾಯಣ ಅವರಿಗೆಕೆಜಿಎಫ್ ಬಾಬು ಬಗ್ಗೆ ಏನು ಗೊತ್ತಿದೆ?ನನ್ನ ಮೊಬೈಲ್ನಲ್ಲಿಯೇ 24 ಎಫ್ಐಆರ್ಗಳಿವೆ. ಧ್ರುವನಾರಾಯಣ ಅವರಿಗೆ ಬೇಕಿದ್ದರೆ ಕಳುಹಿಸುತ್ತೇನೆ. ಅದನ್ನು ಓದಿದ ನಂತರ ಧ್ರುವನಾರಾಯಣ ಹೇಳಲಿ.ಅವರಿಗೆ ಬೆಂಗಳೂರು ರಾಜಕೀಯದ ಬಗ್ಗೆ ಗೊತ್ತಿಲ್ಲ. ಮೈಸೂರು ರಾಜಕೀಯ ಮಾತ್ರ ಗೊತ್ತಷ್ಟೇ’ ಎಂದರು.
ಪತ್ರ ತಲುಪಿಲ್ಲ: ಜೆಡಿಎಸ್ ಅಭ್ಯರ್ಥಿಮಂಜೇಗೌಡ ಅವರು ಕಿಡ್ನಿ ಮಾರಾಟ ಮಾಡುತ್ತಾರೆ ಎಂದು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಂಜೇಗೌಡ ಬರೆದಿರುವ ಯಾವುದೇ ಪತ್ರ ನನಗೆ ತಲುಪಿಲ್ಲ.ಪತ್ರ ಬಂದ ಮೇಲೆ ಉತ್ತರಿಸುತ್ತೇನೆ. ಅವರ ಎಲ್ಲ ಪ್ರಶ್ನೆಗಳಿಗೂ ಸಮರ್ಥವಾಗಿ ಉತ್ತರಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಸೋಮಶೇಖರ್ ಅವರು ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.