ಚಿಕ್ಕಬಳ್ಳಾಪುರ: ಜಮೀನು ಖಾತೆ ಬದಲಾವಣೆ ಮಾಡಲು ₹ 7.50 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಮಂಗಳವಾರ ಸಂಜೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶಿಡ್ಲಘಟ್ಟದ ಕಂದಾಯ ನಿರೀಕ್ಷಕ ವಿಶ್ವನಾಥ್ ಮತ್ತು ಗ್ರಾಮ ಲೆಕ್ಕಿಗ ಗೋಕುಲ್ ಎಂಬುವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ನಾರಾಯಣಮೂರ್ತಿ ಎಂಬುವರು ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿಯಲ್ಲಿ ಕೆಲ ತಿಂಗಳ ಹಿಂದೆ 12 ಎಕರೆ ಜಮೀನು ಖರೀದಿಸಿದ್ದರು. ಆ ಜಮೀನಿನ ಖಾತೆ ಬದಲಾವಣೆಗೆ ವಿಶ್ವನಾಥ್ ಮತ್ತು ಗೋಕುಲ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ನಾರಾಯಣ ಮೂರ್ತಿ ಅವರು ಮಂಗಳವಾರ ಎಸಿಬಿ ಕಚೇರಿಗೆ ದೂರು ನೀಡಿದ್ದರು.
ಎಸಿಬಿ ಅಧಿಕಾರಿಗಳ ನಿರ್ದೇಶನದಂತೆ ಲಂಚಕ್ಕೆ ಬೇಡಿಕೆ ಇಟ್ಟ ಇಬ್ಬರು ಅಧಿಕಾರಿಗಳಿಗೆ ನಾರಾಯಣ ಮೂರ್ತಿ ಅವರು ಲಂಚದ ಹಣವನ್ನು ಮಂಗಳವಾರ ತಲುಪಿಸುವುದಾಗಿ ತಿಳಿಸಿದ್ದರು.
ಹಂಡಿಗನಾಳದ ಬಳಿ ಸಂಜೆ ಬಂದು ₹7.50 ಲಂಚದ ಹಣ ಪಡೆಯುತ್ತಿದ್ದಂತೆ ಎಸಿಬಿ ಡಿವೈಎಸ್ಪಿ ಗೋಪಾಲ್ ಅವರ ನೇತೃತ್ವದ ತಂಡ ವಿಶ್ವನಾಥ್ ಮತ್ತು ಗೋಕುಲ್ ಅವರನ್ನು ಬಂಧಿಸಿ, ಹಣ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.