ಕಲ್ಲಿ ತಾಂಡ (ಆಂಧ್ರಪ್ರದೇಶ): ಪಾಕಿಸ್ತಾನದ ಜೊತೆ ಗುಂಡಿನ ಕಾಳಗದಲ್ಲಿ ವೀರಮರಣ ಹೊಂದಿದ ಹುತಾತ್ಮ ಯೋಧ ಎಂ.ಮುರಳಿ ನಾಯ್ಕ್ (25) ಅಂತ್ಯಸಂಸ್ಕಾರ ಭಾನುವಾರ ಸ್ವಗ್ರಾಮ ಆಂಧ್ರಪ್ರದೇಶದ ಕಲ್ಲಿ ತಾಂಡಾದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಮುರುಳಿ ಹೆತ್ತವರು, ಸಂಬಂಧಿಕರು ಮತ್ತು ನೆರೆದಿದ್ದ ಸಾವಿರಾರು ಜನರು ಭಾರವಾದ ಹೃದಯದೊಂದಿಗೆ ಕಣ್ಣೀರ ವಿದಾಯ ಹೇಳಿದರು. ‘ಮುರಳಿ ನಾಯ್ಕ್ ಅಮರ್ ರಹೇ’ ಘೋಷಣೆಗಳು ಮುಗಿಲು ಮುಟ್ಟಿದವು.
ಪಾರ್ಥೀವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಸೇನಾ ಅಧಿಕಾರಿಗಳು ಮುರಳಿ ಪೋಷಕರಾದ ಜ್ಯೋತಿಬಾಯಿ ಮತ್ತು ಶ್ರೀರಾಮ ನಾಯ್ಕ್ ಅವರಿಗೆ ಹಸ್ತಾಂತರಿಸಿದರು. ಸೇನಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ಗೌರವ ಸಲ್ಲಿಸಿದರು.
ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಸಚಿವೆ ಸುನಿತಮ್ಮ ಅಂತಿಮ ನಮನ ಸಲ್ಲಿಸಿ, ಪೋಷಕರನ್ನು ಸಂತೈಸಿದರು. ಸತ್ಯಸಾಯಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮೊದಲು ಗ್ರಾಮದಲ್ಲಿ ನಡೆದ ಪಾರ್ಥೀವ ಶರೀರದ ಮೆರವಣಿಗೆ ಮತ್ತು ಅಂತ್ಯಕ್ರಿಯೆಯಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕದಿಂದ ಬಂದಿದ್ದ ಸಾವಿರಾರು ಜನರು ಪಾಲ್ಗೊಂಡು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.