ಚಿಕ್ಕಮಗಳೂರು: ತಿರುಪತಿಗೆ ಹೊರಟಿದ್ದ ಹೊಸ ರೈಲಿಗೆ ವೃದ್ಧೆಯೊಬ್ಬರು ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ಭಕ್ತಭಾವ ಮೆರೆದರು.
ಚಿಕ್ಕಮಗಳೂರು–ತಿರುಪತಿ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮ ಚಿಕ್ಕಮಗಳೂರಿನ ರೈಲು ನಿಲ್ದಾಣದಲ್ಲಿ ಆಯೋಜನೆಗೊಂಡಿತ್ತು. ಅಲಂಕಾರಗೊಂಡಿದ್ದ ರೈಲಿನ ಮುಂದೆ ಹಳಿಗಳ ಮೇಲೆ ಇಳಿದ ಹಿರೇಮಗಳೂರಿನ ಭಾಗಲಕ್ಷ್ಮಿ ಅವರು ಮೂರು ಬಾರಿ ಅಡ್ಡಬಿದ್ದು ನಮಸ್ಕರಿಸಿದರು.
‘ತಿರುಪತಿ ವೆಂಕಟೇಶ್ವರ ನಮ್ಮ ಮನೆ ದೇವರು, ವರ್ಷಕ್ಕೆ ಮೂರು–ನಾಲ್ಕು ಬಾರಿ ಭೇಟಿ ನೀಡುತ್ತೇನೆ. ಈಗ ಚಿಕ್ಕಮಗಳೂರಿನಿಂದ ನೇರ ರೈಲು ಆರಂಭವಾಗಿರುವುದು ನನಗೆ ಅತೀವ ಸಂತಸವಾಗಿದೆ’ ಎಂದರು.
ವೃದ್ಧೆಯ ಈ ಭಕ್ತಿಗೆ ಪ್ರತಿಕ್ರಿಯಿಸಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಕಲ್ಪನೆಯಿಂದ ಇದು ಸಾಧ್ಯವಾಗಿದೆ. ತಿರುಪತಿಗೆ ರೈಲು ಆರಂಭವಾಗಿರುವುದಕ್ಕೆ ಈ ತಾಯಿಗೆ ಸಂತೋಷವಾಗಿದೆ. ತಿರುಪತಿ ತಿಮ್ಮಪ್ಪನಿಗೆ ಮಾಡಿದಷ್ಟೇ ನಮಸ್ಕಾರವನ್ನು ಈ ತಾಯಿಗೂ ಮಾಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.