ADVERTISEMENT

ಕಾಫಿನಾಡು: ಮುಂದುವರಿದ ಗಾಳಿ–ಮಳೆ

ಕಾಲು ಜಾರಿ ಹೊಂಡಕ್ಕೆ ಬಿದ್ದು ಒಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 12:15 IST
Last Updated 6 ಆಗಸ್ಟ್ 2020, 12:15 IST
ಕಳಸ ಸಮೀಪದ ಬಾಳಗಲ್ ಉದಯ ಜೈನ್ ಅವರ ಮನೆಯ ಮೇಲೆ ಮರ ಬಿದ್ದಿರುವುದು
ಕಳಸ ಸಮೀಪದ ಬಾಳಗಲ್ ಉದಯ ಜೈನ್ ಅವರ ಮನೆಯ ಮೇಲೆ ಮರ ಬಿದ್ದಿರುವುದು   

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ– ಗಾಳಿ ಮುಂದುವರಿದಿದೆ. ಮೂಡಿಗೆರೆ, ಕಳಸ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ವೃಕ್ಷಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಕೆಲವೆಡೆ ಸಂಚಾರಕ್ಕೆ ಅಡಚಣೆಯಾಗಿದೆ. ಬಾಳೆಹೊನ್ನೂರು ಬಳಿಯ ಅಂಡವಾನೆ ಗ್ರಾಮದ ಶಂಕರ್‌ (26) ಎಂಬಾತ ಗುರುವಾರ ಬೆಳಿಗ್ಗೆ ಗದ್ದೆ ಬದಿಯಲ್ಲಿ ಸಾಗುವಾಗ ಕಾಲುಜಾರಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ಧಾರೆ.

ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ಸಹಿತ ವಿವಿಧೆಡೆಗಳಲ್ಲಿ ವಿದ್ಯುತ್‌ ಪೂರೈಕೆ ಕಡಿತವಾಗಿದೆ. ಮಳೆ ಗಾಳಿಗೆ 200ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಮರಗಳು ಮನೆ ಮೇಲೆ ಬಿದ್ದು 100ಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ.

ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ಭಾಗದಲ್ಲಿ ಹೊಳೆ ನೀರು ನುಗ್ಗಿ ತೋಟಗಳು, ಗದ್ದೆಗಳು ಜಲಾವೃತವಾಗಿವೆ. ಗಾಳಿಗೆ ಅಡಿಕೆ ಮರಗಳು ನೆಲಕ್ಕುರುಳಿವೆ.

ADVERTISEMENT

ಕೊಟ್ಟಿಗೆಹಾರದಲ್ಲಿ ಒಂದೇ ದಿನ 38.5 ಸೆಂ.ಮೀ ಮಳೆಯಾಗಿದೆ. ಬೀರೂರು ಸಮೀಪ ಗಾಳಿಗೆ ತೆಂಗಿನ ಮರವೊಂದು ವಿದ್ಯುತ್ ಲೇನ್‌ ಮೇಲೆ ಬಿದ್ದು ಐದು ಕಂಬಗಳು ಧರೆಗುರುಳಿವೆ.

ವಿದ್ಯುತ್‌ ಪ್ರವಹಿಸಿ ವ್ಯಕ್ತಿ ಸಾವು: ಕಡೂರು ತಾಲ್ಲೂಕಿನ ಯಗಟಿ ಹೋಬಳಿಯ ಜಕ್ಕನಹಳ್ಳಿಯ ಜಮೀನಿನಲ್ಲಿ ವಿದ್ಯುತ್‌ ತಗುಲಿ ಪರಮೇಶ್ವರಪ್ಪ (38) ಬುಧವಾರ ಮೃತಪಟ್ಟಿದ್ದಾರೆ. ಗಾಳಿಗೆ ವಿದ್ಯುತ್‌ ಲೇನ್‌ ತಂತಿ ತುಂಡಾಗಿ ಬೇಲಿ ಮೇಲೆ ಬಿದ್ದಿದ್ದು, ಆ ಬೇಲಿಯ ತಂತಿ ಸ್ಪರ್ಶಿಸಿದ ಪರಿಣಾಮ ವಿದ್ಯುತ್‌ ಪ್ರವಹಿಸಿ ಸಾವಿಗೀಡಾಗಿದ್ದಾರೆ.

‘ಚಾರ್ಮಾಡಿ–ವಾಹನ ಸಂಚಾರಕ್ಕೆ ಅವಕಾಶ’
ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 7 ಗಂಟೆವರೆಗೆ ವಾಹನ ಸಂಚರಿಸಬಹುದಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾರ್ಗದಲ್ಲಿ ನಾಲ್ಕೈದು ಕಡೆ ಗುಡ್ಡದ ಮಣ್ಣು ರಸ್ತೆಗೆ ಕುಸಿದಿತ್ತು. ಅದನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.