
ಕಡೂರು ತಾಲ್ಲೂಕು ಚೌಳಹಿರಿಯೂರಿನಲ್ಲಿರುವ ಕೆಪಿಎಸ್ ಪದವಿಪೂರ್ವ ಕಾಲೇಜು
ಕಡೂರು: ನಿತ್ಯವೂ ನೂರಾರು ವಿದ್ಯಾರ್ಥಿಗಳಿಂದ ತುಂಬಿರುವ ಚೌಳಹಿರಿಯೂರು ಕೆಪಿಎಸ್ ಕಾಲೇಜಿನ ಉಳಿವಿಗಾಗಿ ಹೋರಾಟ ಆರಂಭಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಕಡೂರು ತಾಲ್ಲೂಕಿನ ಗಡಿ ಭಾಗದ ಗ್ರಾಮವಾದ ಚೌಳಹಿರಿಯೂರಿನಲ್ಲಿ 1981-82ರ ಸಾಲಿನಲ್ಲಿ ಆರಂಭವಾದ ಪದವಿಪೂರ್ವ ಕಾಲೇಜು ಸಮಾಜಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೀಡಿದೆ. ವರ್ಷ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಂಡು ಜಿಲ್ಲೆಯ ಪ್ರತಿಷ್ಠಿತ ಸರ್ಕಾರಿ ಪದವಿ ಪೂರ್ವ ಕಾಲೇಜು ಆಗಿತ್ತು. ಸರ್ಕಾರ ಗ್ರಾಮೀಣ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ 2017ರಲ್ಲಿ ಆರಂಭಿಸಿದ ಕೆಪಿಎಸ್ ವ್ಯವಸ್ಥೆಗೆ ಸೇರಿದ ಕಡೂರು ತಾಲ್ಲೂಕಿನ ಏಕೈಕ ಕಾಲೇಜು ಆಗಿತ್ತು. ಆಗಿನಿಂದ ಇಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುವರೆಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೊರಕುತ್ತಿದೆ. ಆರಂಭದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ಹೊಂದಿದ್ದ ಪದವಿಪೂರ್ವ ಕಾಲೇಜಿನ ಪ್ರಗತಿ ಮತ್ತು ಜನರ ಒತ್ತಾಯದ ಮೇರೆಗೆ ಇಲ್ಲಿ 1993ರಲ್ಲಿ ವಿಜ್ಞಾನ ವಿಭಾಗವೂ ಆರಂಭಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಕೊರತೆಗಳ ಕಾರಣದಿಂದ ಕಾಲೇಜು ತನ್ನ ವೈಭವ ಕಳೆದುಕೊಳ್ಳುವತ್ತ ಸಾಗಿದೆ. ಕಳೆದ 10 ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಕಾಯಂ ಉಪನ್ಯಾಸಕರು ಇಲ್ಲ. ಕಾಲೇಜು ಆರಂಭವಾದಾಗಿನಿಂದ ಈವರೆಗೆ ಎಫ್ಡಿಎ ಮತ್ತು ‘ಡಿʼ ದರ್ಜೆ ನೌಕರರ ನೇಮಕ ಆಗಿಲ್ಲ. ಕಳೆದ 6 ತಿಂಗಳ ಹಿಂದಷ್ಟೇ ನೇಮಕವಾಗಿರುವ ಪ್ರಾಂಶುಪಾಲರು ಕಚೇರಿ ಕೆಲಸದ ಹೊರೆಯ ಜತೆಗೆ ಸಮಾಜಶಾಸ್ತ್ರ ವಿಷಯ ಬೋಧಿಸುವ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ವಿಜ್ಞಾನ ವಿಷಯದಲ್ಲಿ ಕಾಲೇಜು ಅತ್ಯುತ್ತಮ ಸಾಧನೆಯನ್ನೇ ಮಾಡಿದೆ. ಕಾಯಂ ಉಪನ್ಯಾಸಕರ ಕೊರತೆಯಿಂದ ಬೋಧನೆಗೆ ಅತಿಥಿ ಉಪನ್ಯಾಸಕರನ್ನು ಅವಲಂಬಿಸಬೇಕಾದ ಸನ್ನಿವೇಶ ಈಗ ಎದುರಾಗಿದೆ.
ಸದ್ಯ ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಕೆಜಿಯಿಂದ 7ನೇ ತರಗತಿವರೆಗೆ 360ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಜತೆಗೆ ತಮ್ಮ ಆರ್ಥಿಕ ಸ್ಥಿತಿ ಬದಲಾದ ಹಿನ್ನೆಲೆಯಲ್ಲಿ ಈಚಿನ ವರ್ಷಗಳಲ್ಲಿ ಪೋಷಕರು ದೂರದ ಊರುಗಳ ಖಾಸಗಿ ವಸತಿ ಶಾಲೆಗಳತ್ತ ಮುಖಮಾಡಿರುವುದು ಕಾಲೇಜಿನ ದಾಖಲಾತಿ ಕುಸಿಯಲು ಕಾರಣವಾಗಿದೆ. ಶ್ರಮಪಟ್ಟು ಆರಂಭಿಸಿದ ಕಾಲೇಜು ಕಣ್ಣೆದುರೇ ಅಸ್ತಿತ್ವ ಕಳೆದುಕೊಳ್ಳಲು ಆರಂಭಿಸಿರುವುದು ಗ್ರಾಮಕ್ಕೆ ಹೇಳಲಾರದ ಸಂಕಟವಾಗಿದೆ.
ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಗಾಗಿ ದತ್ತಿನಿಧಿ ಸ್ಥಾಪಿಸಿದ್ದೇವೆ. ಕಾಲೇಜು ಮೊದಲಿನಿಂದಲೂ ಜಿಲ್ಲೆಯಲ್ಲಿಯೇ ಅತ್ಯುತ್ತಮ ಕಾಲೇಜು ಆಗಿ ಹೆಸರು ಗಳಿಸುವುದರ ಜತೆಗೆ ಗ್ರಾಮಕ್ಕೆ ಚಿಂತನಶೀಲ, ವಿಚಾರಬದ್ಧ ಆಂದೋಲನ ರೂಪಿಸಲೂ ನೆರವಾಗಿದೆ. ಇಲ್ಲಿ ದೊರೆತ ಶಿಕ್ಷಣವು ಗ್ರಾಮದ ಸಾಮಾಜಿಕ ವ್ಯವಸ್ಥೆಯನ್ನೇ ಬದಲಿಸಿದೆ. ಸರ್ಕಾರ, ಅಧಿಕಾರಿಗಳು ಮತ್ತು ಪೋಷಕರ ಸಹಕಾರ ದೊರೆತರೆ ಕಾಲೇಜು ಮತ್ತೆ ಪ್ರವರ್ಧಮಾನಕ್ಕೆ ಬರಲಿದೆ ಎನ್ನುವುದು ನಮ್ಮ ವಿಶ್ವಾಸವಾಗಿದೆ. ಇಡೀ ಗ್ರಾಮ ಮತ್ತು ಹಳೆಯ ವಿದ್ಯಾರ್ಥಿಗಳು, ದತ್ತಿನಿಧಿ ಸಮಿತಿ, ಗ್ರಾಮ ಪಂಚಾಯಿತಿ ಆಡಳಿತ ಮತ್ತು ಎಸ್ಡಿಎಂಸಿ ಒಟ್ಟಾಗಿ ‘ಕಾಲೇಜು ಬಚಾವೋ ಆಂದೋಲನʼ ಹಮ್ಮಿಕೊಳ್ಳುವ ಚಿಂತನೆಯೂ ಇದೆʼ ಎನ್ನುತ್ತಾರೆ ದತ್ತಿನಿಧಿ ಸಮಿತಿಯ ಜಿ.ಅಶೋಕ್ಕುಮಾರ್.
ಸರ್ಕಾರವು ಇತ್ತೀಚಿನ ದಿನಗಳಲ್ಲಿ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸುವುದಾಗಿ ಹೇಳುತ್ತಲೇ ಇದೆ. ಆರೆ ಅದಕ್ಕೂ ಮೊದಲು ಇರುವ ಕೆಪಿಎಸ್ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕು.ಜಿ.ಅಶೋಕ್ಕುಮಾರ್. ಶಾಲೆ ದತ್ತಿನಿಧಿ ಸಮಿತಿ ಸದಸ್ಯ
ಕಾಲೇಜು ಬಲವರ್ಧನೆಗೆ ಒತ್ತಾಯ
ಇಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಆರಂಭಿಸಬೇಕು ಎನ್ನುವುದು ಜನರ ದಶಕಗಳ ಕೂಗಾಗಿದೆ. ಎರಡು ತಿಂಗಳ ಹಿಂದೆ ನಡೆದ ಶಾಸಕರ ಜನಸಂಪರ್ಕ ಸಭೆಯಲ್ಲಿ ಜನರ ಪ್ರಮುಖ ಬೇಡಿಕೆಯಾಗಿದ್ದ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಕೂಗಿಗೆ ಶಾಸಕ ಕೆ.ಎಸ್.ಆನಂದ್ ಭರವಸೆ ಕೊಟ್ಟರು. ಹಾಸ್ಟೆಲ್ ಸ್ಥಾಪನೆಗೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದ್ದರು. ಆದರೆ ಈವರೆಗೆ ಸರ್ಕಾರಿ ಬಸ್ ವ್ಯವಸ್ಥೆ ಆಗಿಲ್ಲ. ಹಾಸ್ಟೆಲ್ ವಿಷಯದಲ್ಲಿ ಏನು ಬೆಳವಣಿಗೆ ಆಗಿದೆಯೋ ತಿಳಿದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.