ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಶುಕ್ರವಾರವೂ ಧಾರಾಕಾರವಾಗಿ ಸುರಿಯಿತು.
ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತ ಶುಕ್ರವಾರ ಬೆಳಿಗ್ಗೆ ಬಿಸಿಲಿನ ವಾತಾವರಣ ಇತ್ತು. ನಡುವೆ
ಆಗಾಗ ಮಳೆ ಸುರಿಯಿತು.ಮುತ್ತೊಡಿ, ಮಲ್ಲಂದೂರು, ಮುಳ್ಳಯ್ಯನಗಿರಿ ಭಾಗದಲ್ಲಿ ಮಳೆ ಆರ್ಭಟಿಸಿತು. ಚಿಕ್ಕಮಗಳೂರು ನಗರದಲ್ಲಿ ಶಾಲೆಗಳಿಗೆ ರಜೆ ಇತ್ತು.
ಮನೆಗೆ ಹಾನಿ: ಕೊಪ್ಪ ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿಯಿತು.
ಶಾನುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲಗದ್ದೆ ಗ್ರಾಮದ ಕಸ್ತೂರಿ ಅವರ ಮನೆ ಚಾವಣಿ ಕುಸಿದು ಹಾನಿ ಸಂಭವಿಸಿದೆ. ಗ್ರಾಮಪಂಚಾಯಿತಿ ಸದಸ್ಯ ನವೀನ್ ಕರುವಾನೆ ಭೇಟಿ ನೀಡಿದ್ದರು.
ಕಳೆದ 24 ಗಂಟೆಗಳಲ್ಲಿ ಕೊಪ್ಪದಲ್ಲಿ 4.02 ಸೆಂ.ಮೀ., ಹರಿಹರಪುರದಲ್ಲಿ 4 ಸೆಂ.ಮೀ., ಜಯಪುರದಲ್ಲಿ 4.96 ಸೆಂ.ಮೀ., ಕಮ್ಮರಡಿಯಲ್ಲಿ 6.04 ಸೆಂ.ಮೀ., ಬಸರಿಕಟ್ಟೆಯಲ್ಲಿ 5.56 ಸೆಂ.ಮೀ. ಮಳೆ ದಾಖಲಾಗಿದೆ.
ಬಿರುಸುಗೊಂಡ ಮಳೆ: ಮೂಡಿಗೆರೆ ತಾಲ್ಲೂಕಿನಾದ್ಯಂತ ಶುಕ್ರವಾರ ಮಳೆ ಬಿರುಸುಗೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿತ್ತು.
ನಸುಕಿನಿಂದಲೂ ಧಾರಾಕಾರವಾಗಿ ಸುರಿದ ಮಳೆ, ಮಧ್ಯಾಹ್ನ ಕೆಲಕಾಲ ಬಿಡುವು ನೀಡಿತ್ತು. ಮಧ್ಯಾಹ್ನದ ಬಳಿಕ ಪ್ರಾರಂಭವಾದ ಮಳೆ ತಡರಾತ್ರಿಯವರೆಗೂ ರಭಸವಾಗಿ ಸುರಿಯಿತು.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿಗಳಲ್ಲಿ ನೀರಿನ ಹರಿಯುವ ಮಟ್ಟ ಹೆಚ್ಚಳವಾಗಿದೆ. ಹೇಮಾವತಿ ನದಿಯು ಉಗ್ಗೆಹಳ್ಳಿ ಬಳಿ ಗದ್ದೆ ಬಯಲಿಗೆ ವ್ಯಾಪಿಸಿದ್ದು, ಮಳೆ ಹೆಚ್ಚಾದರೆ ಉಗ್ಗೆಹಳ್ಳಿ ಕಾಲೊನಿ ತಡೆಗೋಡೆಯವರೆಗೂ ವ್ಯಾಪಿಸುವ ಆತಂಕ ನಿರ್ಮಾಣವಾಗಿದೆ. ಮಳೆಯೊಂದಿಗೆ ಮಂಜು ಕವಿದ ವಾತಾವರಣ ನಿರ್ಮಾಣವಾಗಿದ್ದು, ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡಿದರು. ಬಿದರಹಳ್ಳಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು.
ಸಂಜೆ ಸುರಿದ ಮಳೆಯಿಂದ ವಾರದ ಸಂತೆಯಲ್ಲಿ ಹಾಕಿದ್ದ, ಹಣ್ಣು, ತರಕಾರಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅವುಗಳ ಸಂಗ್ರಹಿಸಿಕೊಳ್ಳಲು ವರ್ತಕರು ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಹೊರಟ್ಟಿ, ಬಿನ್ನಾಡಿ, ಕೊಟ್ರಕೆರೆ ಮುಂತಾದ ಪ್ರದೇಶಗಳಲ್ಲಿ ಸಸಿ ಮಡಿ ನಿರ್ಮಾಣಕ್ಕಾಗಿ ಹಾಕಿದ್ದ
ಬೀಜದ ಭತ್ತವು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರಿಗೆ ನಷ್ಟ ಉಂಟಾಗಿದೆ.
ತಾಲ್ಲೂಕಿನಾದ್ಯಂತ ಧಾರಾಕಾರ ಮಳೆ
ನರಸಿಂಹರಾಜಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ಶುಕ್ರವಾರವೂ ಮಳೆ ಮುಂದುವರೆದಿತ್ತು. ಬೆಳಿಗ್ಗೆಯಿಂದಲೇ ಆರಂಭವಾದ ಮಳೆ ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ಧಾರಾಕಾರವಾಗಿ ಸುರಿಯಿತು. ಕಳೆದ 24 ಗಂಟೆಯಲ್ಲಿ ಎನ್.ಆರ್.ಪುರದಲ್ಲಿ 1.34 ಸೆಂ.ಮೀ, ಮೇಗರಮಕ್ಕಿ 2.3 ಸೆಂ.ಮೀ ಹಾಗೂ ಬಾಳೆಹೊನ್ನೂರಿನಲ್ಲಿ 3.10 ಸೆಂ.ಮೀ ಮಳೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.