
ಮೂಡಿಗೆರೆ: ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ, ಮಾಜಿ ಯೋಧ ನಾಸಿರ್ ಹುಸೇನ್ ಅವರ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ ತಾಲ್ಲೂಕಿನ ಗೋಣಿಬೀಡಿನ ಖಬರಸ್ತಾನದಲ್ಲಿ ಮುಸ್ಲಿಂ ಸಂಪ್ರದಾಯದಂತೆ ನಡೆಯಿತು.
ಭಾನುವಾರ ತಡರಾತ್ರಿ ಕೊಟ್ಟಿಗೆಹಾರ ಮೂಲಕ ಮೂಡಿಗೆರೆ ಪಟ್ಟಣಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಪಟ್ಟಣದ ಅಮರ್ ಜವಾನ್ ಸ್ಮಾರಕದ ಎದುರು ಕೆಲಕಾಲ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.
ಮಾಜಿ ಸೈನಿಕರ ಸಂಘದ ವತಿಯಿಂದ ತ್ರಿವರ್ಣ ಧ್ವಜ ಹೊದಿಸಿ ನಾಸೀರ್ ಹುಸೇನ್ ಪಾರ್ಥಿವ ಶರೀರಕ್ಕೆ ಗೌರವರಕ್ಷೆ ಸಲ್ಲಿಸಿದರು. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ನಂತರ ಆಲ್ದೂರಿಗೆ ಮೃತದೇಹವನ್ನು ಕೊಂಡೊಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ರಾತ್ರಿ 11.30ಕ್ಕೆ ಗೋಣಿಬೀಡಿನ ನಾಸೀರ್ ಮನೆಗೆ ತರಲಾಯಿತು. ಬೆಳಿಗ್ಗೆ 9ಕ್ಕೆ ಗೋಣಿಬೀಡು ಗ್ರಾಮ ಪಂಚಾಯಿತಿ ಕಚೇರಿ ಎದುರಿನ ವೃತ್ತದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಚಿಕ್ಕಮಗಳೂರು ಜಿಲ್ಲಾ ಪೊಲೀಸರು 3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ನಂತರ ಈದ್ಗಾ ಮೈದಾನಕ್ಕೆ ಕೊಂಡೊಯ್ದು ಮುಸ್ಲಿಂ ಸಂಪ್ರದಾಯದಂತೆ ಪ್ರಾರ್ಥನೆ ನಡೆಸಲಾಯಿತು. ಬಳಿಕ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಯಿತು.
ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಗಫೂರ್, ಡಿವೈಎಸ್ಪಿ ನಾಗರಾಜ್, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕ್ಯಾಪ್ಟನ್ ಮಂಜುನಾಥ್, ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳಾದ ಸಂತೋಷ್ ಕಾಯ್ಕಿಣಿ, ರಾಘವೇಂದ್ರ, ಹರೀಶ್, ಮಂಜನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.
ತಾಲ್ಲೂಕಿನ ಕಿರುಗುಂದ ಹಾಗೂ ಗೋಣಿಬೀಡು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದ ನಾಸೀರ್ ಹುಸೇನ್ ಅಪಾರ ಸ್ನೇಹಿತರನ್ನು ಹೊಂದಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗೋಣಿಬೀಡಿನಲ್ಲಿ ಸೇರಿದ್ದ ಸ್ನೇಹಿತರು ಸಹಪಾಠಿಗಳು ಜನ್ನಾಪುರದಿಂದ ಪಾರ್ಥಿವ ಶರೀರದ ಮೆರವಣಿಗೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಪಾರ್ಥಿವ ಶರೀರ ಬರುವುದು ತಡರಾತ್ರಿಯಾಗಿದ್ದರಿಂದ ಕೊನೆಯ ಕ್ಷಣದಲ್ಲಿ ಮೆರವಣಿಗೆಯನ್ನು ಮೊಟಕುಗೊಳಿಸಲಾಯಿತು. ನಸುಕಿನಿಂದಲೇ ನಾಸೀರ್ ಅವರ ಮನೆಗೆ ಭೇಟಿ ನೀಡಿದ ಸ್ನೇಹಿತರು ಅಂತಿಮ ನಮನ ಸಲ್ಲಿಸಿದರು. ಆತ್ಮೀಯ ಗೆಳಯನನ್ನು ಕಳೆದುಕೊಂಡ ಸ್ನೇಹಿತರು ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.