
ಹಿರಿಯೂರು: ತಾಲ್ಲೂಕಿನ ಸಿ.ಎನ್. ಮಾಳಿಗೆ ಗ್ರಾಮದಲ್ಲಿ ಭಾನುವಾರ ‘ಡಿಚ್ಚಿ ಹಬ್ಬ’ (ಪ್ರೀತಿಯ ಅಪ್ಪುಗೆ) ಎಂದೇ ಖ್ಯಾತಿ ಪಡೆದಿರುವ ಅಹೋಬಲ ನರಸಿಂಹಸ್ವಾಮಿಯ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಜಾತ್ರಾಮಹೋತ್ಸವದಲ್ಲಿ ಅತ್ತಿಗೆ–ನಾದಿನಿಯರು ಮುಂದಲೆ ಹಿಡಿದು ಪರಸ್ಪರ ಡಿಚ್ಚಿ ಹೊಡೆಯುವ ಆಚರಣೆ ದಶಕಗಳಿಂದ ನಡೆದುಬಂದಿದೆ. ಇದು ಜಗಳದ ಬದಲಿಗೆ ಅತ್ತಿಗೆ ನಾದಿನಿಯರ ಬಾಂಧವ್ಯ ಬೆಸೆಯುವ ಮೂಲಕ ತವರಿನ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವೆಂದು ಹಿರಿಯರು ಅರ್ಥೈಸುತ್ತಾರೆ.
ತಾನು ಹುಟ್ಟಿದ ಮನೆಗೆ ಅತ್ತಿಗೆ ಬಂದ ಮೇಲೆ ತವರಿನ ಬಗ್ಗೆ ಮುನಿಸಿಕೊಳ್ಳುವ ಮಗಳನ್ನು ಓಲೈಸಿ ಕರೆತಂದು ಅತ್ತಿಗೆ–ನಾದಿನಿಯರ ನಡುವಿನ ಮನಸ್ತಾಪವನ್ನು ಶಮನಗೊಳಿಸಿ ಜೊತೆಗೂಡಿಸುವ ವಿಶೇಷ ಹಬ್ಬವಿದು.
ದೇವಸ್ಥಾನದ ಮುಂದೆ ಬೇಡರ ಪಶುಪಾಲನಾ ಸಂಸ್ಕೃತಿಯ ಪ್ರತೀಕವಾಗಿ ಟಗರಿನ ಡಿಚ್ಚಿ ನಡೆದ ನಂತರ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ಮಗಳನ್ನು ಊರಿನ ಹೆಬ್ಬಾಗಿಲಿನಿಂದ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಒಂದು ಬದಿಯಿಂದ ಅತ್ತಿಗೆಯರು, ಮತ್ತೊಂದು ಬದಿಯಿಂದ ನಾದಿನಿಯರು ಎದುರೆದುರು ನಿಂತು ಓಡೋಡಿ ಬಂದು ಮುಂದಲೆ ಬಳಸಿ ಡಿಚ್ಚಿ ಹೊಡೆಯುತ್ತಾರೆ. ಕೊನೆಗೆ ಹಿರಿಯರು ಅತ್ತಿಗೆ–ನಾದಿನಿಯರನ್ನು ದೇವಸ್ಥಾನದಲ್ಲಿ ರಾಜಿ ಮಾಡಿಸುತ್ತಾರೆ. ಉತ್ಸವದ ನಂತರ ಎರಡೂ ಕುಟುಂಬಗಳು ಸೌಹಾರ್ದದಿಂದ ಬದುಕು ಮುಂದುವರಿಸುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
ಮದುವೆಯ ನಂತರ ಹೆಣ್ಣುಮಕ್ಕಳು ಎಷ್ಟೇ ದೂರದ ಊರುಗಳಲ್ಲಿದ್ದರೂ ನರಸಿಂಹಸ್ವಾಮಿ ಉತ್ಸವಕ್ಕೆ ತಪ್ಪದೆ ಆಗಮಿಸಿ, ಡಿಚ್ಚಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಉತ್ಸವಕ್ಕೆ ಬರದೇ ಹೋದರೆ ತವರು ಮನೆಯಲ್ಲಿ ನೆಮ್ಮದಿ ಕಳೆದುಹೋಗುತ್ತದೆ ಎಂಬ ನಂಬಿಕೆ ಹೆಣ್ಣುಮಕ್ಕಳಲ್ಲಿ ಈಗಲೂ ಇದೆ. ಬೇಡ ನಾಯಕರು ನೆಲೆಸಿರುವ ಊರುಗಳಲ್ಲಿ ಸಾಮಾನ್ಯವಾಗಿ ಅಹೋಬಲ ನರಸಿಂಹ ದೈವದ ಗುಡಿಗಳನ್ನು ಕಟ್ಟಿಕೊಂಡಿರುತ್ತಾರೆ. ಬೇಡ ಮೂಲ ನೆಲೆಯಿಂದ ಬಂದ ಇಂತಹ ಆರಾಧ್ಯ ದೈವಗಳ ನಂಬಿಕೆ ಮತ್ತು ಆಚರಣೆಗಳು ಊರ ಸಂಸ್ಕೃತಿಯಲ್ಲಿ ಮಿಳಿತಗೊಂಡಿದ್ದರ ದ್ಯೋತಕವಾಗಿ ವೈವಾಹಿಕ ಸಂಬಂಧದ ಮೂಲಕ ಬೆಳೆದ ಪರಿವಾರಗಳೆಲ್ಲ ಇಂತಹ ದೈವೋಪಾಸನೆಯಲ್ಲಿ ತೊಡಗುವುದು ಸಹಜವೇ ಆಗಿದೆ.
ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲಿ ಅಹೋಬಲ ನರಸಿಂಹಸ್ವಾಮಿ ಮತ್ತು ವೀರಗಾರ ಸ್ವಾಮಿಯ ನೂತನ ದೇವಸ್ಥಾನದ ವಿಮಾನ ಗೋಪುರ, ಪಂಚಕಳಸ ಪ್ರತಿಷ್ಠಾಪನೆ ಫೆ. 26ರಿಂದ ಆರಂಭಗೊಂಡಿದ್ದು ಭಾನುವಾರ ಡಿಚ್ಚಿ ಹಬ್ಬದೊಂದಿಗೆ ಸಂಪನ್ನಗೊಂಡಿತು.
ಆದಿರಾಳು ಗ್ರಾಮದ ರಾಜ ವೀರಾಂಜನೇಯ ಸ್ವಾಮಿ, ಚೌಡೇಶ್ವರಿ ದೇವಿ, ಸಿ.ಎನ್.ಮಾಳಿಗೆ ಚಿತ್ರಲಿಂಗೇಶ್ವರ ಸ್ವಾಮಿ, ಹರ್ತಿಕೋಟೆ ಗ್ರಾಮದ ವೀರಭದ್ರಸ್ವಾಮಿ, ಹರ್ತಿಕಟ್ಟೆ ಮನೆಯ ಅಹೋಬಲ ನರಸಿಂಹಸ್ವಾಮಿ, ಹುಲಿತೊಟ್ಟಿಲು ಗ್ರಾಮದ ಕಾಲಭೈರವೇಶ್ವರ ಮತ್ತು ಕರಿಯಮ್ಮ ದೇವಿ ದೇವತೆಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆದವು. ಪುರೋಹಿತರಾದ ಎಸ್.ಎಲ್.ಲಕ್ಷ್ಮೀನಾರಾಯಣಸ್ವಾಮಿ, ಎಸ್.ಎಲ್.ದರ್ಶನ್ಸ್ವಾಮಿ, ಪುನೀತ್ಸ್ವಾಮಿ, ರಮೇಶ್ಸ್ವಾಮಿ ನೇತೃತ್ವ ವಹಿಸಿದ್ದರು. ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಜನ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.