
ಹೊಸದುರ್ಗ: ತಾಲ್ಲೂಕಿನಾದ್ಯಂತ ಒಟ್ಟು ₹ 26,880 ಹೆಕ್ಟೆರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವುದರ ಮೂಲಕ ರಾಜ್ಯದಲ್ಲೇ ಆಗ್ರಸ್ಥಾನ ಗಳಿಸಿರುವ ಹೊಸದುರ್ಗವನ್ನು ಸಿರಿಧಾನ್ಯ ಕಣಜ ಎಂದರೆ ತಪ್ಪಾಗಲಾರದು.
2019ರಿಂದ ಈಚೆಗೆ ಪ್ರತಿ ವರ್ಷ ಸಿರಿಧಾನ್ಯ ಭಿತ್ತನೆ ಹೆಚ್ಚಾಗುತ್ತಿದೆ. ಸಿರಿಧಾನ್ಯಗಳ ಪ್ರಾಮುಖ್ಯತೆ ಜೊತೆಗೆ ಹೊಸದುರ್ಗದ ಹವಮಾನ ಮತ್ತು ಭೂಮಿ ಸಿರಿಧಾನ್ಯ ಬೆಳೆಗೆ ಯೋಗ್ಯವಾಗಿದೆ. ಪ್ರತಿ ವರ್ಷ ಗುರಿಗಿಂತ ಸ್ವಲ್ಪ ಬಿತ್ತನೆ ಪ್ರಮಾಣ ಅಧಿಕವಾಗುತ್ತಿದೆ. 2025ರಲ್ಲಿ ನಿಗದಿತ ಗುರಿಗಿಂತ ಮೂರು ಪಟ್ಟು ಹೆಚ್ಚಾಗಿತ್ತು. ಬೆಳೆ ಸಮೀಕ್ಷೆ ಪ್ರಕಾರ 25,150 ಹೆಕ್ಟೆರ್ ಪ್ರದೇಶದಲ್ಲಿ ಭಿತ್ತನೆಯಾಗಿದೆ.
ಇವುಗಳಿಗೆ ಅತಿ ಕಡಿಮೆ ತೇವಾಂಶ ಹಾಗೂ ಅನಾವೃಷ್ಠಿಯ ಬಳಿಕ ಬೇಗನೆ ಹುಲುಸಾಗಿ ಬೆಳೆಯಬಲ್ಲ ಶಕ್ತಿಯಿದೆ. ರೋಗ ರುಜಿನೆಗಳ ಬಾಧೆಯಿಲ್ಲ. ಕಡಿಮೆ ಖರ್ಚಿನ ಬೇಸಾಯ, ಜಾನುವಾರುಗಳಿಗೆ ಉತ್ತಮ ಮೇವು ಒದಗುತ್ತದೆ. ಎಂತಹ ಬರಗಾಲ ಆವರಿಸಿದರೂ ಕೊನೆಗೆ ಹುಲ್ಲಾನಾದರೂ ಕೊಡುವ ಬೆಳೆಗಳಿವು. ಹವಾಮಾನ ವೈಪರೀತ್ಯಕ್ಕೆ ಸವಾಲು ಹಾಕಿ ಬೆಳೆಯಬಲ್ಲ ಸಿರಿಧಾನ್ಯಗಳು ಭವಿಷ್ಯದ ಆಹಾರದ ಗಣಿಗಳು. ಅತಿ ಕಡಿಮೆ ಫಲವತ್ತತೆ ಭೂಮಿಯಲ್ಲೂ ಬೆಳೆಯಬಲ್ಲವು ಇವು ಪೌಷ್ಟಿಕಾಂಶಗಳ ಆಗರ.
ರೈತ ಸಿರಿ: ಇಲಾಖೆಯ ರೈತ ಸಿರಿ ಯೋಜನೆಯಲ್ಲಿ ಪ್ರತಿ ಹೆಕ್ಟೇರ್ಗೆ ₹10,000 ರಂತೆ ಗರಿಷ್ಠ 2 ಹೆಕ್ಟೆರ್ಗೆ ₹ 20,000 ವರೆಗೆ ಪ್ರತಿ ರೈತರಿಗೆ ಬೆಳೆ ಸಮೀಕ್ಷೆ ಆಧಾರದ ಮೇಲೆ ಡಿ.ಬಿ.ಟಿ ಮೂಲಕ ಪ್ರೋತ್ಸಾಹಧನ ವರ್ಗಾಯಿಸಲಾಗುತ್ತದೆ.
ರಾಜ್ಯ ಸರ್ಕಾರದ ವತಿಯಿಂದ ಶಾಸಕರಿಗೆ ಅಭಿನಂದನೆ : ರಾಜ್ಯದಲ್ಲಿ ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವ ತಾಲ್ಲೂಕಾಗಿ ಹೊಸದುರ್ಗವನ್ನು ಗುರುತಿಸಲಾಗಿತ್ತು. ಶಾಸಕ ಬಿ.ಜಿ. ಗೋವಿಂದಪ್ಪ ಸಿರಿಧಾನ್ಯ ಬೆಳೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ತಾಲ್ಲೂಕಿನ ಎಲ್ಲಾ ರೈತರ ಪರವಾಗಿ ಶಾಸಕರಿಗೆ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದ್ದರು.
ಸಿರಿಧಾನ್ಯ ಹೋಟೆಲ್: ಹೊಸದುರ್ಗ ಪಟ್ಟಣದಲ್ಲಿ ಈಗಾಗಲೇ 3 ಸಿರಿಧಾನ್ಯ ಹೋಟೆಲ್ಗಳಾಗಿವೆ. ಶುದ್ಧ ಪೌಷ್ಟಿಕಾಂಶಯುಕ್ತ ಆಹಾರವನ್ನು ರೈತರೇ ತಯಾರಿಸಿ ನೀಡುತ್ತಾರೆ. ಯಾವುದೇ ರಾಸಾಯನಿಕ, ರುಚಿಕರ ಅಂಶಗಳನ್ನು ಇಲ್ಲಿ ಬಳಸುವುದಿಲ್ಲ.
ಸಿರಿಧಾನ್ಯಗಳು ಉತ್ತಮ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ಗಳನ್ನುಗಳನ್ನು ಹೊಂದಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಅವಲಂಬಿತ ಮದುಮೇಹಿಗಳಿಗೆ ವರದಾನವಾಗಿದೆ. ಹೃದಯ ಸಂಬಂಧಿ ಖಾಯಿಲೆಗಳು, ರಕ್ತದೊತ್ತಡ, ಅಸ್ತಮಾದಂತಹ ತೊಂದರೆಗಳ ನಿವಾರಣೆಯಲ್ಲಿ ಸಹಾಯ ಮಾಡುತ್ತದೆ.
ನಶಿಸಿ ಹೋಗುತ್ತಿದ್ದ ಸಿರಿಧಾನ್ಯ ಬೆಳೆಗಳ ಬಿತ್ತನೆ ಪ್ರಮಾಣ ಕ್ರಮೇಣ ಏರಿಕೆಯಾಗುತ್ತಿದೆ. ರಾಜ್ಯ ಸರ್ಕಾರ ಹೊಸದುರ್ಗವನ್ನು ಸಿರಿಧಾನ್ಯ ಕಣಜ ಅಥವಾ ಸಿರಿಧಾನ್ಯದ ನಾಡು ಎಂದು ಘೋಷಿಸಬೇಕೆಂದು ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂಬುದು ರೈತರ ಒತ್ತಾಸೆಯಾಗಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ತರಬೇತಿ ರೈತರ ಜೊತೆ ನಿರಂತರ ಸಂಪರ್ಕ ಕೃಷಿ ಯಂತ್ರೋಪಕರಣಗಳ ಸೌಲಭ್ಯ ಸುಸ್ಥಿರ ಮಾರುಕಟ್ಟೆ ಧಾರಣೆಯಿದೆ. ಹವಾಮಾನ ವೈಪರೀತ್ಯದಲ್ಲೂ ಬೆಳೆಯುವ ಬೆಳೆಯಾಗಿದ್ದು ಆಹಾರ ಹಾಗೂ ಜಾನುವಾರುಗಳಿಗೆ ಮೇವು ಒದಗಿಸುತ್ತದೆ. ಸಿರಿಧಾನ್ಯಗಳ ಮೌಲ್ಯವರ್ಧನೆಗೆ ರೈತರು ಮುಂದಾಗಬೇಕು. ಮೌಲ್ಯವರ್ಧನೆಯಿಂದ ಅಧಿಕ ಲಾಭ ಗಳಿಸಬಹುದು. ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯಲು ಮುಂದಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್ ಈಶ ಹೇಳಿದರು.
ತಾಲ್ಲೂಕಿನ ಕೆಲ್ಲೋಡಿನ ಕನಕ ಗುರುಪೀಠದಲ್ಲಿ ಸಿರಿಧಾನ್ಯಗಳ ಮೇಳ ನಡೆಯಲಿದೆ. ತಾಲ್ಲೂಕಿನಾದ್ಯಂತ ರಾಗಿ ಸಾವೆ ಆರ್ಕಾ ಕೂರಲೆ ಬಿತ್ತನೆ ಪ್ರಮಾಣ ಪ್ರತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸಮರ್ಪಕವಾಗಿ ಬೆಲೆ ಸಿಗದೆ ರೈತರು ಪರಿತಪಿಸುತ್ತಿದ್ದರು. ಇದನ್ನು ಮನಗಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಿರಿಧಾನ್ಯ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ₹ 5000 ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಅವಕಾಶವಿದೆ. ಸದ್ಯದಲ್ಲೇ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು. ರೈತರು ಆದಷ್ಟು ಬೇಗ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಿ ಎಂದು ಶಾಸಕ ಬಿ.ಜಿ ಗೋವಿಂದಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.