ADVERTISEMENT

ಚಿಕ್ಕಜಾಜೂರು: ಟೊಮೆಟೊ ಬೆಳೆದು ₹ 1.50 ಲಕ್ಷ ಆದಾಯ

ಗುಂಜಿಗನೂರು ಗೊಲ್ಲರಹಟ್ಟಿ ಗ್ರಾಮದ ರೈತ ಚಿಕ್ಕಣ್ಣ

ಜೆ.ತಿಮ್ಮಪ್ಪ ಚಿಕ್ಕಜಾಜೂರು
Published 15 ಡಿಸೆಂಬರ್ 2021, 3:02 IST
Last Updated 15 ಡಿಸೆಂಬರ್ 2021, 3:02 IST
ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಗೊಲ್ಲರಹಟ್ಟಿ ಗ್ರಾಮದ ರೈತ ಚಿಕ್ಕಣ್ಣ ಅವರ ಜಮೀನಿನಲ್ಲಿ ಬೆಳೆದಿರುವ ಟೊಮೆಟೊ ಗಿಡಗಳಲ್ಲಿ ಸಮೃದ್ಧವಾಗಿ ಕಾಯಿ ಬಿಟ್ಟಿರುವುದು.
ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಗೊಲ್ಲರಹಟ್ಟಿ ಗ್ರಾಮದ ರೈತ ಚಿಕ್ಕಣ್ಣ ಅವರ ಜಮೀನಿನಲ್ಲಿ ಬೆಳೆದಿರುವ ಟೊಮೆಟೊ ಗಿಡಗಳಲ್ಲಿ ಸಮೃದ್ಧವಾಗಿ ಕಾಯಿ ಬಿಟ್ಟಿರುವುದು.   

ಚಿಕ್ಕಜಾಜೂರು: ಅಧಿಕ ಮಳೆಯ ನಡುವೆಯೂ ಸಮರ್ಪಕ ನಿರ್ವಹಣೆ ಹಾಗೂ ಕುಟುಂಬದ ಸದಸ್ಯರ ನೆರವಿನಿಂದ ಒಂದು ಎಕರೆಗೂ ಕಡಿಮೆ ಭೂಮಿಯಲ್ಲಿ ಟೊಮೆಟೊ ಬೆಳೆದು ₹ 1.50 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿರುವ ಇಲ್ಲಿನ ರೈತ ಇತರರಿಗೆ ಮಾದರಿಯಾಗಿದ್ದಾರೆ.

ಸಮೀಪದ ಗುಂಜಿಗನೂರು ಗೊಲ್ಲರಹಟ್ಟಿ ಗ್ರಾಮದ ಚಿಕ್ಕಣ್ಣ ಎಂಬುವರು ತಮ್ಮ ಅಡಿಕೆ ತೋಟದ ಪಕ್ಕದಲ್ಲಿರುವ 38 ಗುಂಟೆ ಖಾಲಿ ಜಮೀನಿನಲ್ಲಿ ಟೊಮೆಟೊ ಸಸಿಗಳನ್ನು ನಾಟಿ ಮಾಡಿದ್ದರು. ಅಧಿಕ ಮಳೆಯಿಂದಾಗಿ ಬಹುತೇಕ ಕಡೆಗಳಲ್ಲಿ ಹಾಕಿದ ಬಂಡವಾಳವನ್ನೂ ತೆಗೆಯದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಇವರು ಉತ್ತಮ ಇಳುವರಿ ತೆಗೆದಿದ್ದಾರೆ.

‘ಕಳೆದ ಸೆಪ್ಟೆಂಬರ್‌ ತಿಂಗಳ ಕೊನೆಯಲ್ಲಿ ನಮ್ಮ 38 ಗುಂಟೆ ಖಾಲಿ ಜಮೀನಿನಲ್ಲಿ 6000 ಟೊಮೆಟೊ ಸಸಿಗಳನ್ನು ತಂದು ನಾಟಿ ಮಾಡಿದ್ದೆ. ಒಂದೂವರೆ ತಿಂಗಳಿಂದ ಕೊಯಿಲು ಮಾಡುತ್ತಿದ್ದೇವೆ. ಸಸಿ, ಬೇಸಾಯ, ನಾಟಿ, ಕಳೆ ತೆಗೆಯಲು, ತಳಗೊಬ್ಬರ, ಮೇಲುಗೊಬ್ಬರ, ಸಸಿಗಳಿಗೆ ಆಸರೆಯಾಗಿ ಗೂಟಗಳನ್ನು ನೆಟ್ಟದ್ದು, ಟೊಮೊಟೊ ಕೊಯಿಲು ಹಾಗೂ ಔಷಧಕ್ಕಾಗಿ ₹ 30 ಸಾವಿರ ಖರ್ಚು ಮಾಡಲಾಗಿದೆ’ ಎಂದು ರೈತ ಚಿಕ್ಕಣ್ಣ ವಿವರಿಸಿದರು.

ADVERTISEMENT

ಉತ್ತಮ ಬೆಲೆ: ‘ಅಧಿಕ ಮಳೆಯಿಂದಾಗಿ ಬಹುತೇಕ ರೈತರ ಟೊಮೆಟೊ ಗಿಡಗಳು ಹಾಳಾದವು. ಪರಿಣಾಮವಾಗಿ ಇಳುವರಿ ಕುಂಠಿತವಾಗಿ ನಷ್ಟ ಅನುಭವಿಸಿದರು. ನಮ್ಮ ಜಮೀನಿನಲ್ಲೂ ಅಲ್ಪ ಸ್ವಲ್ಪ ಗಿಡ ನಷ್ಟ ಆಗಿದೆ. ಆದರೆ, ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿದ್ದರಿಂದ, ಉತ್ತಮ ಆದಾಯ ಸಿಕ್ಕಿತು. ಚಿಕ್ಕಜಾಜೂರಿನ ಸ್ಥಳೀಯ ವ್ಯಾಪಾರಿಗಳಿಗೆ, ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದೇವೆ. ಈವರೆಗೆ 180 ಬಾಕ್ಸ್ ಟೊಮೆಟೊ ಕೊಯಿಲು ಮಾಡಿ, ಮಾರಾಟ ಮಾಡಿದ್ದೇವೆ. ಬಾಕ್ಸ್ ಒಂದಕ್ಕೆ ₹ 800ರಿಂದ ₹ 1,200ರ ವರೆಗೆ ಮಾರಾಟ ಮಾಡಿದ್ದೇವೆ. ಇದುವರೆಗೂ ₹ 1.50 ಲಕ್ಷ ಗಳಿಸಿದ್ದೇವೆ. ಗಿಡ ನಾಟಿ, ಕೊಯಿಲಿಗೆ ಕೂಲಿಗಳನ್ನು ಕರೆದುಕೊಂಡಿದ್ದೆವು. ಉಳಿದಂತೆ ಬೇಸಾಯ ಮತ್ತಿತರ ಕೂಲಿಗೆ ಸೋದರರಾದ ತಿಮ್ಮೇಶ, ರಮೇಶ್‌ ಹಾಗೂ ಮನೆಯ ಹೆಣ್ಣುಮಕ್ಕಳು ಕೊಯಿಲು, ಕಳೆ ತೆಗೆಯಲು ಬಂದಿದ್ದರಿಂದ ಹೆಚ್ಚಿನ ಖರ್ಚಿನ ಹೊರೆ ಆಗಲಿಲ್ಲ. ಖರ್ಚನ್ನು ತೆಗೆದು ಸುಮಾರು ₹ 1.20 ಲಕ್ಷ ಆದಾಯ ಬಂದಿದೆ ಎನ್ನುತ್ತಾರೆ ರೈತ ಚಿಕ್ಕಣ್ಣ.

ಕ್ಯಾರೆಟ್ ಬಿತ್ತನೆಗೆ ಸಿದ್ಧತೆ: ಈಗ ಟೊಮೆಟೊ ಕೊಯಿಲು ಮುಗಿಯುತ್ತಿದ್ದು, ಇನ್ನೊಂದು ವಾರದಲ್ಲಿ ಟೊಮೆಟೊ ಗಿಡಗಳನ್ನು ತೆಗೆದು, ಕ್ಯಾರೆಟ್‌ ಅನ್ನು ಬಿತ್ತನೆ ಮಾಡುವುದಾಗಿ ಚಿಕ್ಕಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.