ಉಪ್ಪಿನಂಗಡಿ: ಅಯೋಧ್ಯೆಯ ರಾಮಮಂದಿರ, ಬಾಬರಿ ಮಸೀದಿ ಭೂ ವಿವಾದದ ಕುರಿತಾಗಿ ಶನಿವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಬಾಬರಿ ಮಸೀದಿ ಪರ ಹಕ್ಕು ಮಂಡಿಸಿದ್ದ ಸುನ್ನಿ ವಕ್ಫ್ ಬೋರ್ಡ್ ಪರವಾಗಿ ವಾದ ಮಂಡಿಸಿದ ಘಟಾನುಘಟಿ ವಕೀಲರ ತಂಡದಲ್ಲಿ ಇಲ್ಲಿಯ ವಕೀಲರೊಬ್ಬರು ಇದ್ದರು.
ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಗ್ರಾಮದ ಮುರ ನಿವಾಸಿ ಯುವ ವಕೀಲ ಅಬ್ದುಲ್ ರಹಿಮಾನ್ ಎಂಬುವರೇ ಆ ವಕೀಲ. ಹಿರಿಯ ವಕೀಲರಾದ ಡಾ. ರಾಜೀವ್ ಧವನ್, ಮೀನಾಕ್ಷಿ ಅರೋರಾ, ಧಫರುಲ್ಲಾಹ್ ಜಿಲಾನಿ ಹಾಗೂ ವಕೀಲರಾದ ಶಕೀಲ್ ಅಹ್ಮದ್, ಇರ್ಷಾದ್ ಹನೀಫ್, ಇಝಾಝ್ ಅಹ್ಮದ್, ಶರೀಫ್ ಕೆ.ಎ., ಶೇಖ್ ಮೌಲಾಲಿ ಭಾಷಾ, ಅನ್ಸಾರ್ ಉಲ್ ಹಕ್ವೇ ಇಂಧೋರಿ ಅವರೊಂದಿಗೆ ತಂಡದಲ್ಲಿದ್ದರು.
ಹಿರೇಬಂಡಾಡಿ ಗ್ರಾಮದ ಮುರ ನಿವಾಸಿ ದಿವಂಗತ ಇಸುಬು ಬ್ಯಾರಿ ಮತ್ತು ಅಮೀನಮ್ಮ ದಂಪತಿಯ ಪುತ್ರನಾಗಿರುವ ಅಬ್ದುಲ್ ರಹಿಮಾನ್ ಹಿರೇಬಂಡಾಡಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ 2015ರಲ್ಲಿ ವಕೀಲಿಯಲ್ಲಿ ಪದವಿ ಪಡೆದು ಪುತ್ತೂರು ನ್ಯಾಯಾಲಯದಲ್ಲಿ ವಕೀಲ ವೃತ್ತಿ ಜೀವನ ಆರಂಭಿಸಿದ್ದರು.
ಎರಡು ವರ್ಷಗಳಿಂದ ಸುಪ್ರೀಂಕೋರ್ಟ್ನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾರೆ. 28ವಯಸ್ಸಿನ ಇವರು ಬಾಬರಿ ಮಸೀದಿ ಪರ ಮಂಡಿಸಿದ ವಕೀಲರ ತಂಡದಲ್ಲಿದ್ದ ಅತೀ ಕಿರಿಯ ವಕೀಲರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.