ADVERTISEMENT

ಬಂಟ್ವಾಳ: ರೋಟರಿ ಕ್ಲಬ್‌ಗೆ ಜಿಲ್ಲಾ ಮಟ್ಟದ ‘ತ್ರಿವಳಿ ಪ್ರಶಸ್ತಿ ಗರಿ’

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:48 IST
Last Updated 1 ಜುಲೈ 2025, 13:48 IST
ಬಂಟ್ವಾಳ ತಾಲ್ಲೂಕಿನ ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್‌ಗೆ ಕಳೆದ ಸಾಲಿನಲ್ಲಿ ಪ್ಲಾಟಿನಂ ಪ್ಲಸ್ ಸಹಿತ 3 ಪ್ರಶಸ್ತಿಗಳು ಲಭಿಸಿವೆ
ಬಂಟ್ವಾಳ ತಾಲ್ಲೂಕಿನ ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್‌ಗೆ ಕಳೆದ ಸಾಲಿನಲ್ಲಿ ಪ್ಲಾಟಿನಂ ಪ್ಲಸ್ ಸಹಿತ 3 ಪ್ರಶಸ್ತಿಗಳು ಲಭಿಸಿವೆ   

ಬಂಟ್ವಾಳ: 8 ವರ್ಷಗಳ ಹಿಂದೆ ಅವಿಲ್ ಮಿನೇಜಸ್ ಸ್ಥಾಪಕಾಧ್ಯಕ್ಷತೆಯಲ್ಲಿ ಆರಂಭಗೊಂಡ ಇಲ್ಲಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಕಳೆದ ಸಾಲಿನಲ್ಲಿ ಜಿಲ್ಲೆಯ ಅತ್ಯುನ್ನತ ಡೈಮಂಡ್ ಪ್ಲಸ್ ಸಹಿತ ಜಿಲ್ಲಾ ಮಟ್ಟದ 3 ಪ್ರಶಸ್ತಿ ಗಳಿಸಿದೆ.

ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಜುಲೈ 6ರಂದು ಸಂಜೆ 6.30ಕ್ಕೆ ಲೊರೆಟ್ಟೊ ಹಿಲ್ಸ್ ಸಭಾಂಗಣದಲ್ಲಿ ನೆರವೇರಲಿದೆ ಎಂದು ಕ್ಲಬ್ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ ಹೇಳಿದರು.

ಇಲ್ಲಿನ ಬಿ.ಸಿ.ರೋಡಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೇಶವ ಎಚ್.ಆರ್., ಕ್ಲಬ್‌ನ ಸಲಹೆಗಾರ, ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಉಮೇಶ್ ರಾವ್ ಮಿಜಾರ್ ಭಾಗವಹಿಸಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ADVERTISEMENT

ಕ್ಲಬ್‌ನ ನಿಯೋಜಿತ ಅಧ್ಯಕ್ಷ ವಿಜಯ ಫರ್ನಾಂಡಿಸ್‌ ಲೊರೆಟ್ಟೊ ಹಿಲ್ಸ್ ಮಾತನಾಡಿ, ‘ಕಳೆದ ಸಾಲಿನಲ್ಲಿ ಕ್ಲಬ್ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ ಮತ್ತು ಕಾರ್ಯದರ್ಶಿ ರಾಜೇಶ್ ಶೆಟ್ಟಿ ಸೀತಾಳ ನೇತೃತ್ವದಲ್ಲಿ ನಡೆಸಿದ್ದ ವಿವಿಧ ಸೇವಾ ಚಟುವಟಿಕೆ ಸೇರಿದಂತೆ ರೋಟರಿ ಸಂಸ್ಥೆಗೆ ಸದಸ್ಯರು ನೀಡಿದ ದೇಣಿಗೆ ಮತ್ತು ವ್ಯಕ್ತಿತ್ವ ವೃದ್ಧಿಗೊಳಿಸಿದ ಪರಿಣಾಮ ಜಿಲ್ಲಾ ಮಟ್ಟದ 3 ಪ್ರಶಸ್ತಿಗಳು ಲಭಿಸಿವೆ. ಕ್ಲಬ್‌ನ ಮಾಜಿ ಅಧ್ಯಕ್ಷೆ ಶ್ರುತಿ ಮಾಡ್ತಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮ್ಮೇಳನಕ್ಕೂ ಪ್ರಶಸ್ತಿ ಲಭಿಸಿದೆ’ ಎಂದರು.

ಕ್ಲಬ್ ಸ್ಥಾಪನೆಗೊಂಡ ಪ್ರಥಮ ವರ್ಷದಲ್ಲೇ ಸ್ವಂತ ಕಟ್ಟಡ ನಿರ್ಮಿಸಿದೆ. ಕಳೆದ 8 ವರ್ಷಗಳ ಅವಧಿಯಲ್ಲಿ ವಿವಿಧ ಅಂಗನವಾಡಿಗಳಿಗೆ ಮೂಲ ಸೌಕರ್ಯ ಸೇರಿದಂತೆ ಹಲವು ಶಾಲೆಗಳಿಗೆ ಹಣ್ಣಿನ ಗಿಡ, ಪುಸ್ತಕ, ಬ್ಯಾಗ್, ಶುದ್ಧ ಕುಡಿಯುವ ನೀರಿನ ಘಟಕ, ಧ್ವನಿವರ್ಧಕ, ರಂಗಮಂಟಪ ಒದಗಿಸಿದೆ. ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಸೇರಿದಂತೆ ಸುಮಾರು ₹ 1.50 ಕೋಟಿಗೂ ಮಿಕ್ಕಿ ಮೊತ್ತ ವಿನಿಯೋಗಿಸಲಾಗಿದೆ. ರೋಟರಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕಂಬಳ ಕೂಟ ಆಯೋಜಿಸಿದ್ದು, ಇದು ಮುಂದುವರಿಯಲಿದೆ ಎಂಬ ಭರವಸೆ ಇದೆ ಎಂದು ಅವರು ವಿವರಿಸಿದರು.

ಕ್ಲಬ್‌ನ ಮಾಜಿ ಜಿಲ್ಲಾ ಸಹಾಯಕ ಗವರ್ನರ್ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ನಿಯೋಜಿತ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ನಿಯೋಜಿತ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.