ಮಂಗಳೂರು: ಸ್ತಬ್ದಚಿತ್ರಗಳ ಚಿತ್ತಾಕರ್ಷಣೆ, ಹುಲಿವೇಷ ತೊಟ್ಟವರ ಸೊಗಸಾದ ಕುಣಿತದೊಂದಿಗೆ ರಾತ್ರಿಯಿಡೀ ನಗರದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದ ‘ಮಂಗಳೂರು ದಸರಾ’ದ ಮೆರವಣಿಗೆ ಶುಕ್ರವಾರ ಬೆಳಿಗ್ಗೆ ಶಾರದಾ ಮಾತೆಯ ಜಲಸ್ತಂಭನದ ಮೂಲಕ ಮೆರವಣಿಗೆ ಮುಕ್ತಾಯಗೊಂಡಿತು. ನಾರಾಯಣಗುರುಗಳಿಗೆ ರಾತ್ರಿ ಪೂಜೆ ಸಲ್ಲಿಸುವುದರೊಂದಿಗೆ ಮಂಗಳೂರು ದಸರಾ ಮಹೋತ್ಸವ ಸಂಪನ್ನಗೊಂಡಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮುಂಭಾಗದಿಂದ ಗುರುವಾರ ಸಂಜೆ 4 ಹೊರಟ ಮೆರವಣಿಗೆ ಮಣ್ಣಗುಡ್ಡ, ಲೇಡಿಹಿಲ್, ಲಾಲ್ಬಾಗ್, ಪಿವಿಎಸ್ ವೃತ್ತ, ಕೆ.ಎಸ್ ರಾವ್ ರಸ್ತೆ, ಹಂಪನಕಟ್ಟೆ, ಗಣಪತಿ ಹೈಸ್ಕೂಲ್, ರಥಬೀದಿಯ ವೆಂಕಟರಮಣ ದೇವಸ್ಥಾನ, ಅಳಕೆ ಮೂಲಕ ಮತ್ತೆ ಶ್ರೀ ಕ್ಷೇತ್ರ ತಲುಪಿತು. ಒಟ್ಟು 9 ಕಿ.ಮೀ ದೂರದ ಈ ಮೆರವಣಿಗೆ ದೇವಸ್ಥಾನದ ಮುಖ್ಯ ಪ್ರವೇಶದ್ವಾರದ ಮೂಲಕ ಮರುಪ್ರವೇಶ ಮಾಡಿದಾಗ ಮುಂಜಾನೆ 3.30 ಆಗಿತ್ತು. ದೇವಸ್ಥಾನದ ಕಲ್ಯಾಣಿಯಲ್ಲಿ ಶಾರದೆಯ ಜಲಸ್ತಂಭನ ಆಗಿ ಈ ಬಾರಿಯ ದಸರೆಗೆ ಮುಕ್ತಾಯ ಹಾಡಿದಾಗ ಬೆಳಿಗ್ಗೆ 7.30 ಆಗಿತ್ತು.
‘ರಾತ್ರಿ ಒಂದು ಗಟೆಯ ಒಳಗೆ ಎಲ್ಲ ಟ್ಯಾಬ್ಲೊಗಳು ಪಿವಿಎಸ್ ಜಂಕ್ಷನ್ ದಾಟಿರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅದು ಸಾಧ್ಯವಾಗಲಿಲ್ಲ. ಪ್ರತಿ ಟ್ಯಾಬ್ಲೋ ಆಕರ್ಷಣೀಯ ಮತ್ತು ವೈವಿಧ್ಯಮಯವಾಗಿತ್ತು. ಆದರೆ ಎಲ್ಲರಿಗೂ ಎಲ್ಲವನ್ನೂ ನೋಡಿ ಸವಿಯುವ ಅವಕಾಶ ಸಿಗಲಿಲ್ಲ. ಕೆಲವೊಂದು ಜಂಕ್ಷನ್ನಲ್ಲಿ ನೃತ್ಯರೂಪಕಗಳು ಐದಾರು ನಿಮಿಷ ಪ್ರದರ್ಶನ ನೀಡಿರುವುದು ಮೆರವಣಿಗೆಯ ಮೇಲೆ ಪರಿಣಾಮ ಬೀರಿತ್ತು. ಮುಂದಿನ ವರ್ಷ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಸಂಯೋಜಕ ಯತೀಶ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.