ADVERTISEMENT

ಹೊನ್ನಾಳಿ | ‘ಸಂಸಾರ ಬಂಧನದ ನಡುವೆಯೂ ಸಾಧನೆ ಮಾಡಿ’

ಕೂಲಂಬಿ ಗುರುಗದ್ದಿಗೇಶ್ವರ ಸ್ವಾಮಿ ಕಾರ್ತಿಕೋತ್ಸವ; ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 8:25 IST
Last Updated 6 ಡಿಸೆಂಬರ್ 2025, 8:25 IST
ಹೊನ್ನಾಳಿ ತಾಲ್ಲೂಕು ಕೂಲಂಬಿ ಗ್ರಾಮದ ಗುರು ಗದ್ದಿಗೇಶ್ವರಸ್ವಾಮಿ ರಥೋತ್ಸವದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು 
ಹೊನ್ನಾಳಿ ತಾಲ್ಲೂಕು ಕೂಲಂಬಿ ಗ್ರಾಮದ ಗುರು ಗದ್ದಿಗೇಶ್ವರಸ್ವಾಮಿ ರಥೋತ್ಸವದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು    

ಹೊನ್ನಾಳಿ: ‘ಸತಿ– ಪತಿಗಳು ಒಂದಾದ ಭಕ್ತಿ ಹಿತವಪ್ಪುದು ಶಿವನಿಗೆ ಎಂಬ ಮಾತಿನಂತೆ ಗಂಡ– ಹೆಂಡತಿಯರು ದೇವರನ್ನು ಒಂದೇ ಮನಸ್ಸಿನಿಂದ ಆರಾಧಿಸಬೇಕು. ಅಂಥ ಭಕ್ತಿ ಶಿವನಿಗೆ ಪ್ರಿಯವಾಗುತ್ತದೆ. ಸಂಸಾರ ಬಂಧನದ ನಡುವೆಯೂ ಸಾಧನೆ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು’ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಶುಕ್ರವಾರ ತಾಲ್ಲೂಕಿನ ಕೂಲಂಬಿ ಗ್ರಾಮದ ಗುರುಗದ್ದಿಗೇಶ್ವರ ಸ್ವಾಮಿ ಕಾರ್ತಿಕೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು– ವರರಿಗೆ ಶುಭ ಕೋರಿ ಅವರು ಮಾತನಾಡಿದರು.

‘ಹಿಂದೂ ಧರ್ಮದಲ್ಲಿ ವಿವಾಹಕ್ಕೆ ತನ್ನದೇ ಆದ ಮಹತ್ವವಿದೆ. ಇದನ್ನು ಅರಿತುಕೊಂಡು ನವ ವಿವಾಹಿತರು ಸುಂದರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವವರು ಪರಸ್ಪರ ಅರ್ಥ ಮಾಡಿಕೊಂಡು ಅನ್ಯೋನ್ಯವಾಗಿ ಜೀವನ ನಡೆಸಬೇಕು’ ಎಂದರು.

ADVERTISEMENT

ಕೂಲಂಬಿ ಶ್ರೀ ಗದ್ದಿಗೇಶ್ವರ, ಬಸವಣ್ಣ, ರಾಮೇಶ್ವರ ಕಮಿಟಿ ಅಧ್ಯಕ್ಷ ಟಿ.ಎಸ್. ಸೋಮಶೇಖರ್ ಮಾತನಾಡಿ, ‘ಕೂಲಂಬಿ ಗ್ರಾಮದಲ್ಲಿ ಈ ಹಿಂದೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 396 ಜೋಡಿ ಒಂದೇ ಬಾರಿಗೆ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿದ್ದು ಇಂದಿಗೂ ದಾಖಲೆಯಾಗಿ ಉಳಿದಿದೆ. ಆದರೆ, ಇತ್ತೀಚೆಗೆ ಎಲ್ಲೆಡೆ ಸಾಮೂಹಿಕ ವಿವಾಹ ಸಮಾರಂಭಗಳನ್ನು ಏರ್ಪಡಿಸುತ್ತಿರುವ ಕಾರಣ ಇಳಿಮುಖವಾಗಿದೆ’ ಎಂದು ತಿಳಿಸಿದರು.

ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಬಿಜೆಪಿ ಮುಖಂಡ ಶಾಂತರಾಜ್ ಪಾಟೀಲ್, ಎಂ.ಪಿ. ರಾಜು, ತಾಲ್ಲೂಕು ಮಕ್ಕಳ ಸಹಾಯವಾಣಿ ಅಧಿಕಾರಿ ಪಿ. ಸ್ವಾಮಿ ಮಾತನಾಡಿದರು.

ಕೂಲಂಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ. ಪುನೀತ್‍ಕುಮಾರ್, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಜಿ.ಟಿ. ಮುರಿಗೆಪ್ಪ, ಕಾರ್ಯದರ್ಶಿ ವೈ.ಎಂ. ಬಸವಲಿಂಗಪ್ಪ, ಸಹ ಕಾರ್ಯದರ್ಶಿ ಜಿ. ಹೇಮಂತರಾಜ್, ಖಜಾಂಚಿ ಕೆ.ಬಿ. ಬಸವರಾಜಪ್ಪ, ಸಹ ಖಜಾಂಚಿ ಕೆ.ಎಂ. ಬಸವಲಿಂಗಪ್ಪ ಹಾಗೂ ನಿರ್ದೇಶಕರು ಹಾಗೂ ಶಿವ ಬ್ಯಾಂಕ್ ಉಪಾಧ್ಯಕ್ಷ ಎಂ.ಜಿ. ಲೋಕೇಶ್ ಪಾಟೀಲ್, ಕೂಲಂಬಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಕೆ.ಬಿ. ಸಿದ್ದನಗೌಡ, ಟಿ.ಎಸ್. ಬಸವರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.