
ದಾವಣಗೆರೆ: ಜಿಲ್ಲೆಯಲ್ಲಿ ಗುರುತಿಸಿದ ಮರಳು ಬ್ಲಾಕ್ಗಳ ಹರಾಜು ಪ್ರಕ್ರಿಯೆ ವರ್ಷ ಕಳೆದರೂ ಪೂರ್ಣಗೊಳ್ಳದ ಪರಿಣಾಮ ಜಿಲ್ಲೆಯಾದ್ಯಂತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯಕ್ಕೆ ಮರಳು ಸಿಗುತ್ತಿಲ್ಲ. ಅಧಿಕೃತವಾಗಿ ಮರಳು ತೆಗೆಯಲು ಅನುಮತಿ ಸಿಗದಿರುವುದರಿಂದ ಕಟ್ಟಡ ನಿರ್ಮಾಣ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಅಕ್ರಮ ಗಣಿಗಾರಿಕೆಯೂ ಅವ್ಯಾಹತವಾಗಿ ನಡೆಯುತ್ತಿದೆ.
ಜಿಲ್ಲೆಯ ತುಂಗಭದ್ರಾ ನದಿಪಾತ್ರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ 24 ಮರಳು ಬ್ಲಾಕ್ಗಳನ್ನು ಗುರುತಿಸಿದೆ. ಈ ಪೈಕಿ 20 ಬ್ಲಾಕ್ಗಳನ್ನು ‘ನೂತನ ಮರಳು ನೀತಿ’ಯ ಪ್ರಕಾರ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹರಾಜು ನಡೆಸಲು ಅನುಮತಿ ನೀಡಿತ್ತು. ಪ್ರತಿ ಟನ್ ಮರಳಿಗೆ ₹ 850 ದರ ನಿಗದಿಪಡಿಸಿ 2025ರ ಜನವರಿಯಲ್ಲಿ ಮರಳು ಬ್ಲಾಕ್ಗಳ ಹರಾಜು ಪ್ರಕ್ರಿಯೆ ಆರಂಭಿಸಿತ್ತು. ಪರಿಸರ ಇಲಾಖೆಯ ಅನುಮತಿ ಸಿಗದಿರುವುದರಿಂದ ಈ ಬ್ಲಾಕ್ಗಳು ಇನ್ನೂ ಕಾರ್ಯಾರಂಭವಾಗಿಲ್ಲ.
‘24 ಮರಳು ಬ್ಲಾಕ್ಗಳ ಪೈಕಿ 20 ಬ್ಲಾಕ್ಗಳನ್ನು ಸಾರ್ವಜನಿಕರಿಗೆ ಹಾಗೂ 4 ಬ್ಲಾಕ್ಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಮೀಸಲು ಇರಿಸಲಾಗಿದೆ. ಹೊನ್ನಾಳಿ ತಾಲ್ಲೂಕಿನ ರಾಂಪುರ ಹೊರತುಪಡಿಸಿ 19 ಬ್ಲಾಕ್ಗಳನ್ನು ಗುತ್ತಿಗೆದಾರರು ಪಡೆದಿದ್ದಾರೆ. ನ್ಯಾಮತಿ ಹಾಗೂ ಹರಿಹರ ತಾಲ್ಲೂಕಿನ ಮರಳು ಬ್ಲಾಕ್ಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಧಿಸೂಚನೆ ಹೊರಡಿಸಲಾಗಿದೆ. ಪರಿಸರ ಪರವಾನಗಿ (ಇಸಿ) ಹಾಗೂ ಕ್ವಾರಿ ಯೋಜನೆ ಸಿದ್ಧವಾಗುತ್ತಿದೆ. ಮುಂದಿನ 2 ತಿಂಗಳಲ್ಲಿ ಈ ಬ್ಲಾಕ್ಗಳು ಕಾರ್ಯಾರಂಭವಾಗಲಿವೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಜಿಲ್ಲೆಯಲ್ಲಿ ಮಳೆಗಾಲದ ಅವಧಿಯಲ್ಲಿ, ಜೂನ್ 15ರಿಂದ ಅಕ್ಟೋಬರ್ 15ರವರೆಗೆ ಮರಳು ಗಣಿಗಾರಿಕೆಗೆ ನಿರ್ಬಂಧವಿದೆ. ಉಳಿದ 8 ತಿಂಗಳು ಮರಳು ಗಣಿಗಾರಿಕೆಗೆ ಅವಕಾಶವಿದೆ. ಸಾಮಾನ್ಯವಾಗಿ ಡಿಸೆಂಬರ್ನಿಂದ ಮೇವರೆಗೆ ಹೆಚ್ಚಿನ ಪ್ರಮಾಣದಲ್ಲಿ ಮರಳು ತೆಗೆಯಲಾಗುತ್ತದೆ. ಪ್ರಸಕ್ತ ವರ್ಷದ ಬೇಸಿಗೆಯಲ್ಲಾದರೂ ಮರಳು ಸುಲಭವಾಗಿ ಲಭ್ಯವಾಗಬಹುದು ಎಂಬ ಸಾರ್ವಜನಿಕರ ನಿರೀಕ್ಷೆ ಹುಸಿಯಾಗಿದೆ.
ಗಗನಮುಖಿಯಾದ ಮರಳು ದರ:
ತುಂಗಭದ್ರಾ ನದಿಯಲ್ಲಿ ಮರಳು ಹೇರಳವಾಗಿದೆ. ಸ್ಫಟಿಕದಂತೆ ಕಾಣುವ ಈ ಮರಳಿಗೆ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ಭಾರಿ ಬೇಡಿಕೆ ಇದೆ. ಹರಿಹರ ತಾಲ್ಲೂಕಿನ ಸುತ್ತಲಿನ ಮರಳು ರಾಜ್ಯದ ವಿವಿಧೆಡೆ ರವಾನೆಯಾಗುತ್ತದೆ. ಇಂತಹ ಮರಳು ಈಗ ಹಣ ಕೊಟ್ಟರೂ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣಕ್ಕೆ ಮುಂದಾದವರು ವಿಜಯನಗರ ಹಾಗೂ ಹಾವೇರಿ ಜಿಲ್ಲೆಯಿಂದ ಮರಳು ತರಿಸಿಕೊಳ್ಳುವುದು ಅನಿವಾರ್ಯವಾಗಿದೆ.
‘ಆರು ಬ್ರಾಸ್ ಮರಳು ಸಾಗಿಸುವ 10 ಚಕ್ರದ ಟಿಪ್ಪರ್ ಮರಳಿಗೆ ಮಾರುಕಟ್ಟೆಯಲ್ಲಿ ₹ 35,000 ಬೆಲೆ ಇತ್ತು. ಇತ್ತೀಚೆಗೆ ಮರಳು ಲಭ್ಯವಾಗದ ಪರಿಣಾಮ ಇದು ₹ 45,000ಕ್ಕೆ ಏರಿಕೆಯಾಗಿದೆ. ಹೊರ ಜಿಲ್ಲೆಯಿಂದ ದಾವಣಗೆರೆಗೆ ತರುವಾಗ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಹೆಚ್ಚುವರಿಯಾಗಿ ಹಣ ಖರ್ಚು ಮಾಡಬೇಕು. ಬಡ ಮತ್ತು ಮಧ್ಯಮ ವರ್ಗದ ಜನರು ಮನೆ ಕಟ್ಟಿಕೊಳ್ಳುವುದು ಕಷ್ಟವಾಗಿದೆ’ ಎಂದು ಸಾರ್ವನಿಕರೊಬ್ಬರು ಬೇಸರ ಹೊರಹಾಕಿದರು.
ಅಕ್ರಮ ಗಣಿಗಾರಿಕೆಗೆ ರಹದಾರಿ:
ಮರಳು ಬ್ಲಾಕ್ಗಳು ಅಧಿಕೃತವಾಗಿ ಕಾರ್ಯಾರಂಭ ಆಗದಿರುವುದರಿಂದ ತುಂಗಭದ್ರಾ ನದಿ ತೀರದಲ್ಲಿ ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಹರಿಹರ, ನ್ಯಾಮತಿ, ಹೊನ್ನಾಳಿ ತಾಲ್ಲೂಕಿನ ಹಲವೆಡೆ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ಇನ್ನೂ ಸಾಧ್ಯವಾಗಿಲ್ಲ. ದೇವರಬೆಳಕೆರೆ ಬೆಳಕೆರೆ ಹಳ್ಳದಿಂದಲೂ ಮರಳು ತೆಗೆಯಲಾಗುತ್ತಿದೆ.
ಉಕ್ಕಡಗಾತ್ರಿ, ಕಡರನಾಯ್ಕನಹಳ್ಳಿ, ನಂದಿಗುಡಿ ಭಾಗದಲ್ಲಿ ರಾತ್ರಿ ವೇಳೆ ಮರಳು ಲಾರಿಗಳ ಸದ್ದು ಕೇಳುತ್ತಿದೆ. ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡ ತುಂಗಭದ್ರಾ ನದಿಯಿಂದ ತೆಪ್ಪದಲ್ಲಿ ಮರಳು ತೆಗೆದು ಎತ್ತಿನ ಗಾಡಿಯಲ್ಲಿ ಸಾಗಣೆ ಮಾಡಲಾಗುತ್ತಿದೆ. ಚೀಲೂರು, ಗೊಣಿಗೆರೆ, ಹೂವಿನಹಾಳು, ಮಳಲಿಹಳ್ಳಿ, ಪಾಳ್ಯ, ಸಾಸ್ವೇಹಳ್ಳಿ ಭಾಗದಲ್ಲಿ ಮರಳು ಅಕ್ರಮ ಗಣಿಗಾರಿಕೆಗೆ ಜನರು ಬೇಸತ್ತು ಹೋಗಿದ್ದಾರೆ.
‘ಕಟ್ಟಡ ನಿರ್ಮಾಣಕ್ಕೆ ಮರಳು ಸಿಗದಿದ್ದರೆ ‘ಎಂ–ಸ್ಯಾಂಡ್’ ಬಳಕೆ ಅನಿವಾರ್ಯ. ನೈಸರ್ಗಿಕ ಮರಳು ಸುಲಭವಾಗಿ ಲಭ್ಯವಾಗದಂತೆ ನೋಡಿಕೊಳ್ಳುವುದರ ಹಿಂದೆ ‘ಎಂ–ಸ್ಯಾಂಡ್’ ಉದ್ಯಮಿಗಳ ಲಾಬಿ ಇದೆ’ ಎಂದು ಸಾರ್ವಜನಿಕರೊಬ್ಬರು ದೂರಿದರು.
Quote - ಪರಿಸರ ಪರವಾನಗಿ (ಇಸಿ) ಸಿಗುವುದು ವಿಳಂಬವಾದ ಪರಿಣಾಮ ಮರಳು ಬ್ಲಾಕ್ಗಳು ಕಾರ್ಯಾರಂಭ ಆಗಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು ಶೀಘ್ರವೇ ಮರಳು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಸಿ.ಆರ್. ರಶ್ಮಿ ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ
ಗ್ರಾವೆಲ್ಲೂ ಸುಲಭವಾಗಿ ಸಿಗುತ್ತಿಲ್ಲ!
ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಗ್ರಾವೆಲ್ (ಕೆಂಪು ಮಣ್ಣು) ಕೂಡ ಜಿಲ್ಲೆಯಲ್ಲಿ ಸುಲಭವಾಗಿ ಸಿಗುತ್ತಿಲ್ಲ. ₹ 5000ಕ್ಕೆ ಸಿಗುತ್ತಿದ್ದ ಒಂದು ಲೋಡ್ ಮಣ್ಣಿಗೆ ಈಗ ₹ 9000 ತೆರಬೇಕಾಗಿದೆ. ದಾವಣಗೆರೆ ತಾಲ್ಲೂಕಿನ ಕಾಡಜ್ಜಿಯ ಸರ್ಕಾರಿ ಭೂಮಿಯಲ್ಲಿ ಮಣ್ಣು ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ಪಿ. ಹರೀಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಡುವೆ ಆರೋಪ– ಪತ್ಯಾರೋಪ ಕೇಳಿಬಂದ ಬಳಿಕ ನಿಯಮಗಳು ಬಿಗಿಗೊಂಡಿವೆ. ಇಟ್ಟಿಗೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಮಣ್ಣಿಗೆ ಸಮಸ್ಯೆ ಎದುರಾಗಿದೆ.
‘ಮಣ್ಣು ತೆಗೆಯಲು ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಅನುಮತಿ ನೀಡಲು ಸಿದ್ಧರಿದ್ದೇವೆ. ಆದರೆ ಈವರೆಗೆ ಒಂದು ಅರ್ಜಿಯೂ ಬಂದಿಲ್ಲ’ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸಿ.ಆರ್. ರಶ್ಮಿ.
‘ಕೆರೆ ಹೂಳು ತೆಗೆಯಲು ಕೋರಿ 4 ಅರ್ಜಿ ಬಂದಿದ್ದವು. ಈ ಪೈಕಿ ದಾವಣಗೆರೆ ತಾಲ್ಲೂಕಿನಲ್ಲಿ 3 ಕೆರೆಗಳ ಹೂಳು ತೆಗೆಯಲು ಅನುಮತಿ ನೀಡಲಾಗಿದೆ. ಕಟ್ಟಡ ಕಾಮಗಾರಿಗಳಿಗೆ ಮಣ್ಣಿನ ಅಗತ್ಯ ಇರುವವರು ಶುಲ್ಕ ಪಾವತಿಸಿ ಅನುಮತಿ ಪಡೆಯಲು ಅವಕಾಶವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.