ADVERTISEMENT

ಹುಬ್ಬಳ್ಳಿ: ಇಂಧನ ಬೆಲೆ ಏರಿಕೆಗೆ ಖಂಡನೆ

ಬಹುಜನ ಸಮಾಜ ಪಾರ್ಟಿ, ಲೋಕತಾಂತ್ರಿಕ ಜನತಾದಳದಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 12:34 IST
Last Updated 26 ಜೂನ್ 2020, 12:34 IST
ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದ ಪದಾಧಿಕಾರಿಗಳು ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರಿಗೆ ಮನವಿ ಸಲ್ಲಿಸಿದರು
ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದ ಪದಾಧಿಕಾರಿಗಳು ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರಿಗೆ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ಕೊರೊನಾ ಸೋಂಕಿನ ಭೀತಿಗೆ ದೇಶವೇ ತಲ್ಲಣಗೊಂಡಿದೆ; ಇದರ ನಡುವೆಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್‌, ಡೀಸೆಲ್ ಬೆಲೆ ಹೆಚ್ಚಳ ಮಾಡಿ ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ದೂರಿ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ಮಾಡಿದರು.

ರಾಷ್ಟ್ರಪತಿಗೆ ಬರೆದ ಪತ್ರವನ್ನು ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರಿಗೆ ಸಲ್ಲಿಸಿದ ಪದಾಧಿಕಾರಿಗಳು ‘ಕೊರೊನಾದಿಂದ ತತ್ತರಿಸಿದ್ದ ಜನಜೀವನ ಈಗಷ್ಟೇ ಸಹಜ ಸ್ಥಿತಿಗೆ ಮರಳುತ್ತಿದೆ. ಇಂಥ ಸಂಕಷ್ಟದ ಸಮಯದಲ್ಲಿಯೂ ನಿತ್ಯ ಇಂಧನ ದರ ಹೆಚ್ಚಳ ಮಾಡುತ್ತಿರುವುದು ಸರಿಯಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಇಂಧನ ಬೆಲೆಯನ್ನು ಇಳಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಿದ್ದರೂ ಜನರಿಗೆ ಹೊರೆ ತಪ್ಪುತ್ತಿಲ್ಲ. ಹೆಚ್ಚಳ ಮಾಡಿದ ಬೆಲೆಯನ್ನು ಕಡಿಮೆ ಮಾಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾ ಘಟಕದ ಪ್ರಮುಖರಾದ ಎನ್‌.ಎ. ಮುಲ್ಲಾ, ನಿಸ್ಸಾರ್‌ ಅಹ್ಮದ್ ಎ. ಮುಲ್ಲಾ, ಪ್ರಕಾಶ ವೀರಾಪುರ, ರೇವಣಸಿದ್ದು ದೇಸಾಯಿ, ಹನಮಂತ ಯಾಮಾಳ, ವಿಜಯ, ಯಾಸೀನ್‌ ಇದ್ದರು.

ADVERTISEMENT

ಲೋಕತಾಂತ್ರಿಕ ಪ್ರತಿಭಟನೆ: ಇಂಧನ ಬೆಲೆ ಏರಿಕೆ ವಿರೋಧಿಸಿ ಲೋಕತಾಂತ್ರಿಕ ಜನತಾದಳದ ರಾಜ್ಯ ಯುವ ಘಟಕದಿಂದಲೂ ಮನವಿ ಸಲ್ಲಿಸಲಾಯಿತು.

ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಿರೋಜ್‌ಖಾನ್‌ ಹವಾಲ್ದಾರ್ ಮಾತನಾಡಿ ‘ಇಂಧನ ಬೆಲೆ ಹೆಚ್ಚಳದಿಂದ ಆಟೊ ಮೊಬೈಲ್‌ ಕೈಗಾರಿಕೆಗಳು ಉತ್ಪಾದನೆ ಕಡಿಮೆ ಮಾಡಿ ಉದ್ಯೋಗಗಳನ್ನು ಕಡಿತ ಮಾಡುವ ಅಪಾಯವಿದೆ. ಸರ್ಕಾರಗಳ ಈ ಕ್ರಮ ಜನಜೀವನದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಆದ್ದರಿಂದ ಇಂಧನ ಬೆಲೆ ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು. ಯುವ ಘಟಕದ ಪದಾಧಿಕಾರಿಗಳಾದ ಮೆಹಬೂಬ್‌, ಅಶ್ಫಾಕ್‌ ಶೇಖ್‌, ಮೈನುದ್ದೀನ್‌ ಇದ್ದರು.

ತಾರಾದೇವಿ ಖಂಡನೆ: ಕೇಂದ್ರ ಸರ್ಕಾರ ಮೇಲಿಂದ ಮೇಲೆ ದಿಢೀರನೆ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಏರಿಸುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರಾದ ತಾರಾದೇವಿ ವಾಲಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿವಿಧ ವರ್ಗಗಳ ಜನರಿಗೆ ಪ್ಯಾಕೇಜ್‌ ಘೋಷಿಸಿದ್ದು, ಫಲಾನುಭವಿಗಳಿಗೆ ತಲುಪಿಸಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ವಿಶೇಷ ಆರ್ಥಿಕ ಪ್ಯಾಕೇಜ್‌ನಿಂದ ಕೈಬಿಟ್ಟಿರುವ ಮತ್ತುಅನ್ಯಾಯಕ್ಕೆ ಒಳಗಾದ ವರ್ಗದವರಿಗೂ ಪ್ಯಾಕೇಜ್‌ ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.