
ಹುಬ್ಬಳ್ಳಿ: ‘ಇಲ್ಲಿನ ಕೋರ್ಟ್ ವೃತ್ತದ ಬಳಿಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅವ್ಯವಹಾರ, ದುರಾಡಳಿತ ನಡೆಯುತ್ತಿದ್ದು, ಈಗಿರುವ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಹೊಸ ಮಂಡಳಿ ರಚಿಸಬೇಕು’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಯಿ ಮಂದಿರದ ಅಧ್ಯಕ್ಷ ಮಹಾದೇವ ಮಾಶ್ಯಾಳ ಅವರಿಂದ ಮಂದಿರದ ಪಾವಿತ್ರ್ಯತೆ ಹಾಳಾಗುತ್ತಿದೆ. ಭ್ರಷ್ಟ ಆಡಳಿತ ಕುರಿತು ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಭಕ್ತರು ನೀಡಿರುವ ದೇಣಿಗೆ ಹಣ ದುರುಪಯೋಗವಾಗುತ್ತಿದ್ದು, ಮೇಲ್ನೋಟಕ್ಕಷ್ಟೇ ಮಂದಿರದಲ್ಲಿ ಉತ್ಸವ, ಪೂಜೆ ನಡೆಯುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ, ಆದಾಯ ತೆರಿಗೆ ಇಲಾಖೆಗೂ ದೂರು ನಿಡಲಾಗಿದೆ’ ಎಂದರು.
‘ಸಾಯಿಬಾಬಾ ಅವರ ಮಾರ್ಬಲ್ ಮೂರ್ತಿ ಹಾಳಾಗಿದ್ದು, ಇಟಲಿಯಿಂದ ಹೊಸ ಮೂರ್ತಿ ತಂದು ಪ್ರತಿಷ್ಠಾಪಿಸಿದ್ದೇವೆ ಎಂದಿದ್ದಾರೆ. ಎಷ್ಟು ಹಣಕ್ಕೆ, ಯಾವಾಗ ತಂದಿದ್ದಾರೆ ಎನ್ನುವ ಕುರಿತು ತನಿಖೆ ನಡೆಯಬೇಕು. ಮಂದಿರಕ್ಕೆ ದಾನ ಮಾಡಿದ ಗೋವುಗಳನ್ನು ಮಾರಾಟ ಮಾಡಿದ್ದು, ಅದರ ದಾಖಲೆಗಳು ಇಲ್ಲ. ಪಾಲಿಕೆಯಿಂದ ಅನುಮತಿ ಪಡೆಯದೇ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಅಲ್ಲಿ ಟೇಬಲ್ ಟೆನಿಸ್ ಕೋರ್ಟ್ ನಿರ್ಮಿಸಲಾಗಿದೆ’ ಎಂದು ಆರೋಪಿಸಿದರು.
‘ಆರೋಪದ ಕುರಿತು ಇದೇ 28ರಂದು ಉಪ ನೋಂದಣಾಧಿಕಾರಿಗಳು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಆ ವೇಳೆ ಸತ್ಯಕ್ಕೆ ದೂರವಾದ ವರದಿಯೇನಾದರೂ ನೀಡಿದರೆ, ದಾಖಲೆ ಸಮೇತ ಅಂಥ ಅಧಿಕಾರಿಗಳ ವಿರುದ್ಧವೂ ಹೋರಾಟ ನಡೆಯಲಿದೆ. ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗುವುದು’ ಎಂದರು.
ಅಣ್ಣಪ್ಪ ದೀವಟಗಿ, ಮಹಾಂತೇಶ ಟೊಂಗಳಿ, ಆನಂದ ಲದ್ವಾ, ಕಲಾವತಿ ದತ್ತವಾಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.