
ಹುಬ್ಬಳ್ಳಿ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಡಲಿರುವ ಜಮ್ಮು–ಕಾಶ್ಮೀರ ತಂಡದ ಆಟಗಾರರು ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಶನಿವಾರ ಅಭ್ಯಾಸ ಮಾಡಿದರು.
ಇದೇ 24ರಿಂದ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕದ ಎದುರು ಕಣಿವೆ ರಾಜ್ಯದ ತಂಡವು ಕಣಕ್ಕಿಳಿಯಲಿದೆ. ಈ ಬಳಗವು ಶುಕ್ರವಾರವೇ ಹುಬ್ಬಳ್ಳಿಗೆ ಬಂದಿದೆ.
ಮಧ್ಯಾಹ್ನ 2.30ಕ್ಕೆ ಕ್ರೀಡಾಂಗಣಕ್ಕೆ ಬಂದ ಆಟಗಾರರು, ಎರಡು ಗಂಟೆ ತಾಲೀಮು ನಡೆಸಿದರು. ನಂತರ ಮೈದಾನಕ್ಕೆ ತೆರಳಿ ಪಿಚ್ ವೀಕ್ಷಣೆ ಮಾಡಿದರು.
ಆರಂಭ ಆಟಗಾರರಾದ ಶುಭಂ ಖಜೂರಿಯಾ, ಯಾವರ್ ಹಸನ್, ವಿಕೆಟ್ ಕೀಪರ್ ಕನ್ಹಯ್ಯಾ ವಾಧ್ವಾನ್, ಶುಭಂ ಪುಂಡಿರ್, ದೀಕ್ಷಾಂತ್ ಕುಂಡಾಲ್ ಸೇರಿ ಕೆಲ ಆಟಗಾರರು ಮಾತ್ರ ಅಭ್ಯಾಸದಲ್ಲಿ ಪಾಲ್ಗೊಂಡರು.
ಮುಖ್ಯ ಕೋಚ್ ಅಜಯ್ ಶರ್ಮಾ ಮಾರ್ಗದರ್ಶನದಲ್ಲಿ ಆಟಗಾರರು ಸ್ಥಳೀಯ ಚಾಂಪಿಯನ್ಸ್ ನೆಟ್ ಕ್ರಿಕೆಟ್ ಅಕಾಡೆಮಿ, ಎಸ್ಡಿಎಂ ಕ್ರಿಕೆಟ್ ಅಕಾಡೆಮಿ ತಂಡದ ಆಟಗಾರರ ಎಸೆತಗಳನ್ನು ಎದುರಿಸಿದರು. ಕೆಲ ಹೊತ್ತು ಥ್ರೋಡೌನ್ ಎಸೆತಗಳನ್ನು ಆಡಿದರು. ತಂಡದ ನಾಯಕ ಪಾರಸ ಡೋಗ್ರಾ, ಅಬ್ದುಲ್ ಸಮದ್, ಅಕೀಬ್ ನಬಿ ಅವರು ಅಭ್ಯಾಸಕ್ಕೆ ಬರಲಿಲ್ಲ. ಕರ್ನಾಟಕ ತಂಡವು ಭಾನುವಾರ ಬೆಳಿಗ್ಗೆ ನಗರಕ್ಕೆ ಬರಲಿದ್ದು, ಮಧ್ಯಾಹ್ನ ಅಭ್ಯಾಸ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.