ADVERTISEMENT

ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನ | ಶೀಘ್ರ ಪರಿಶೀಲನಾ ಸಭೆ: ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 5 ಮೇ 2025, 9:10 IST
Last Updated 5 ಮೇ 2025, 9:10 IST
<div class="paragraphs"><p>ಪ್ರಲ್ಹಾದ ಜೋಶಿ</p></div>

ಪ್ರಲ್ಹಾದ ಜೋಶಿ

   

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ₹180 ಕೋಟಿ ವೆಚ್ಚದ ಅಂತರರಾಷ್ಟ್ರೀಯ ದರ್ಜೆಯ ಕ್ರೀಡಾ ಸಂಕೀರ್ಣದ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಧಿಕಾರಿಗಳಿಗೆ ಐದು ತಿಂಗಳ ಗಡುವು ನೀಡಿದ್ದಾರೆ.

ನಗರದ ಹೊರವಲಯದ ಲೋಹಿಯಾನಗರದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾ ಸಂಕೀರ್ಣದ ಕಾಮಗಾರಿ‌ ಪರಿಶೀಲನೆ ನಡೆಸಿದ ಜೋಶಿ, 'ಸ್ಮಾರ್ಟ್ ಸಿಟಿ ಅಧಿಕಾರಿಗಳು ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದರೂ, ಅವರಿಗೆ ಐದು ತಿಂಗಳು ತೆಗೆದುಕೊಂಡು ಸಮಗ್ರ ಕಾಮಗಾರಿ ಪೂರ್ತಿಗೊಳಿಸುವಂತೆ ಸೂಚಿಸಿದ್ದೇನೆ' ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

'ಜಾರ್ಖಂಡದ ಕ್ರೀಡಾ ಗ್ರಾಮದ ಪ್ರೇರಣೆಯಿಂದ ನಿರ್ಮಿಸಲಾಗಿರುವ ಹುಬ್ಬಳ್ಳಿಯ ಈ ಕ್ರೀಡಾ ಸಂಕೀರ್ಣದ ನಿರ್ವಹಣೆಯೇ ದೊಡ್ಡ ಸವಾಗಿದೆ. ಈಗಾಗಲೇ ಶಾಸಕ ಅರವಿಂದ ಬೆಲ್ಲದ ಹಾಗೂ ನಾನು ವಿವಿಧ ಕಂಪನಿಗಳೊಂದಿಗೆ ನಿರ್ವಹಣೆ ಜವಬ್ದಾರಿ ಕುರಿತು ಮಾತುಕತೆ ನಡೆಸಿದ್ದೇವೆ. ನುರಿತ ಆಟಗಾರನ್ನು ಸಿದ್ಧಪಡಿಸಿರುವಂಥ ಸಂಸ್ಥೆಗಳನ್ನ ನಿಯೋಜಿಸುವ ಗುರಿ ನಮ್ಮದಾಗಿದ್ದು, ಶೀಘ್ರದಲ್ಲಿಯೇ ನಿರ್ವಹಣೆಗಾಗಿ ಕಂಪನಿ ನಿಯೋಜನೆ ಮಾಡಲಾಗುವುದು' ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

'ಈ ಭಾಗದಿಂದ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿರುವ ಆಟಗಾರರಿಗೆ ತರಬೇತಿಗಾಗಿ, ರಿಯಾಯಿತಿ ದರದಲ್ಲಿ ಅಥವಾ ಉಚಿತ ಪ್ರವೇಶ ನೀಡಲಾಗುವುದು. ಇನ್ನುಳಿದವರಿಗೆ ದರ ನಿಗದಿಪಡಿಸಿ ಪ್ರವೇಶ ನೀಡುವ ಬಗ್ಗೆಯೂ ಚರ್ಚಿಸಲಾಗುತ್ತಿದೆ' ಎಂದರು.

ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದ ಬಗ್ಗೆ ನಿರಾಸೆ:

'ಸುಮಾರು ₹900 ಕೋಟಿಗೂ ಅಧಿಕ ವೆಚ್ಚದ ಸ್ಮಾರ್ಟ್‌ಸಿಟಿ ಮಿಷನ್ ಅಡಿಯಲ್ಲಿ ಕೈಗೊಂಡಿರುವ ಯೋಜನೆಗಳ ಅನುಷ್ಠಾನದ ಬಗ್ಗೆ ಈಗಲೂ ನಿರಾಶೆಯಿದೆ. ಈ ಕುರಿತು ಶೀಘ್ರದಲ್ಲಿಯೇ ಪರಿಶೀಲನಾ ಸಭೆ ನಡೆಸಲಾಗುವುದು. ತೋಳನಕೆರೆ, ಮಹಾತ್ಮಾಗಾಂಧಿ ಉದ್ಯಾನ, ಗ್ರೀನ್ ಮೊಬಿಲಿಟಿ ಕಾರಿಡಾರ್, ರಸ್ತೆಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಲಿಖಿತ ಹಾಗೂ ಮೌಖಿಕ ಅಸಮಾಧಾನಗಳನ್ನು ಈ ಹಿಂದೆ ಹಲವಾರು ಬಾರಿ ವ್ಯಕ್ತಪಡಿಸಿದ್ದೇನೆ. ಯೋಜನೆ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿರುವ ರಾಜ್ಯ ಸರ್ಕಾರದ ಅಧಿಕಾರಿಗಳ ಅಸಡ್ಡೆಯಿಂದಾಗಿ ಇಂಥ ಪರಿಸ್ಥಿತಿ ಎದುರಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

ಅವಧಿ ವಿಸ್ತರಣೆಗೆ ಮನವಿ

'ಸ್ಮಾರ್ಟ್ ಸಿಟಿ ಮಿಷನ್‌ನ ಯೋಜನೆಗೆ ಮಾರ್ಚ್ 31 ಅಂತಿಮ ದಿನವಾಗಿದ್ದರೂ, ಇನ್ನೂ ಕೆಲ ಯೋಜನೆಗಳ ಕಾಮಗಾರಿ ಪೂರ್ಣತೆಗೆ ಹಾಗೂ ಅನುಷ್ಠಾನಕ್ಕೆ ಸಮಯ ಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್‌ಪಿವಿ(ಯೋಜನೆ ಅನುಷ್ಠಾನ ಘಟಕ) ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ' ಎಂದರು.

'ರಾಜ್ಯ ಸರ್ಕಾರ ನೆರವಿಗೆ ಮುಂದಾಗಲಿ'

'ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕ್ರೀಡಾ ಸಂಕೀರ್ಣಕ್ಕೆ ಹಾಸ್ಟೆಲ್ ಹಾಗೂ ವಿವಿಧ ಕ್ರೀಡೆಗಳಿಗೆ ಪರಿಣಿತ ತರಬೇತಿದಾರರನ್ನು ಶಾಶ್ವತವಾಗಿ ನಿಯೋಜಿಸಲು ಹಾಗೂ ಇತರ ನಿರ್ವಹಣೆಗೆ ಸುಮಾರು ₹60 ಕೋಟಿಯಷ್ಟು ಅವಶ್ಯಕತೆಯಿದೆ. ಹಣಕಾಸಿನ ನೆರವಿಗೆ ರಾಜ್ಯ ಸರ್ಕಾರ ಮುಂದಾಗಬೇಕು. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗುವುದು' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಮೇಯರ್ ರಾಮಪ್ಪ ಬಡಿಗೇರ, ಶಾಸಕ ಅರವಿಂದ ಬೆಲ್ಲದ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ರೂಪಾ ಶೆಟ್ಟಿ, ಸತೀಶ ಹಾನಗಲ್, ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.