ADVERTISEMENT

ದೇಶದ್ರೋಹ ಪ್ರಕರಣ: ಕಾರಿನ ಗಾಜು ಪುಡಿ ಮಾಡಿ ವಕೀಲರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 9:11 IST
Last Updated 24 ಫೆಬ್ರುವರಿ 2020, 9:11 IST
ಬೆಂಗಳೂರಿನಿಂದ ಬಂದಿದ್ದ ವಕೀಲರ ವಿರುದ್ಧ ಧಾರವಾಡ ಯುವ ವಕೀಲರಿಂದ ಪ್ರತಿಭಟನೆ
ಬೆಂಗಳೂರಿನಿಂದ ಬಂದಿದ್ದ ವಕೀಲರ ವಿರುದ್ಧ ಧಾರವಾಡ ಯುವ ವಕೀಲರಿಂದ ಪ್ರತಿಭಟನೆ   

ಧಾರವಾಡ: ದೇಶದ್ರೋಹ ಪ್ರಕರಣದಿಂದ ಬಂಧಿತರಾಗಿರುವ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳ ಪರ ವಕಾಲತು ವಹಿಸಲು ಬಂದಿರುವ ಬೆಂಗಳೂರು ವಕೀಲರಿದ್ದ ಕಾರಿನ ಹಿಂಭಾಗದ ಗಾಜು ಪುಡಿ ಮಾಡಿ ಧಾರವಾಡ ಯುವ ವಕೀಲರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿಗಳ ಪರ ವಕಾಲತ್ತು ವಹಿಸಲು ಬಂದಿದ್ದ ಇವರನ್ನು ತಡೆಯಲು ವಕೀಲರು ಮೊದಲು ಯತ್ನಿಸಿದರು. ಕೋರ್ಟ್ ಆವರಣದಿಂದ ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸಿದರು.

ಆರೋಪಿಗಳ ಪರ ಬೆಂಗಳೂರಿನಿಂದ ವಕಾಲತು ವಹಿಸಲು ಹಿರಿಯ ವಕೀಲರಾದ ನರೇಂದ್ರ, ಮೈತ್ರಿ ಸೇರಿ ನಾಲ್ವರ ತಂಡಕ್ಕೆ ಭಿಗಿ ಪೊಲೀಸ್ ಭದ್ರತೆಯೊಂದಿಗೆ ಒಳಗೆ ಕರೆದೊಯ್ಯಲಾಯಿತು. ಕಲಾಪ ಮುಗಿಸಿ ಹೊರಗೆ ಹೊರಟಾಗ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಕಾರಿನ ಗಾಜು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅರ್ಜಿ ಸಲ್ಲಿಕೆಯಲ್ಲಿ ನಿಯಮ ಪಾಲಿಸಿಲ್ಲ: ವಕೀಲರು ವಾಪಸ್

ಧಾರವಾಡ: ದೇಶದ್ರೋಹ ಪ್ರಕರಣದಲ್ಲಿ ಆರೋಪಿಗಳ ಜಾಮಿನಿಗೆ ಅರ್ಜಿ ಸಲ್ಲಿಸಲು ನಿಯಮದಂತೆ ಸಿಇಒ ಮೂಲಕ ಸಲ್ಲಿಸಿಲ್ಲ ಎಂದು ನ್ಯಾಯಾಲಯ ಹೇಳಿದ್ದರಿಂದ, ಬೆಂಗಳೂರಿನಿಂದ ಬಂದ ವಕೀಲರು ಪ್ರತಿಭಟನೆ ಎದುರಿಸಿ ಮರಳಿದರು.

ಹುಬ್ಬಳ್ಳಿಗೆ ಬಂದ ನಾಲ್ವರು ವಕೀಲರು ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ಪಡೆದು, ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಬಂದು ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯ ಆವರಣ ಪ್ರವೇಶಿಸಿ ಅರ್ಜಿ ಸಲ್ಲಿಸಿದ್ದರು.

ಆದರೆ ಕೋರ್ಟ್ ನಿಯಮದಂತೆ ಅರ್ಜಿಯನ್ನು ಕೋರ್ಟ್ ಸಿಇಒ ಮೂಲಕವೇ ಸಲ್ಲಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದ್ದರಿಂದ, ಕೆಲವೇ ಕ್ಷಣಗಳಲ್ಲಿ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.