ಗದಗ: ‘ಮಕ್ಕಳಿಲ್ಲದ ದಂಪತಿಗೆ ಮಗುವೊಂದನ್ನು ಹಸ್ತಾಂತರಿಸುವುದು ಪುಣ್ಯದ ಕಾರ್ಯ’ ಎಂದು ನಗರದ ಬಾಲವಿನಾಯಕ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ರವಿ ಹೇಳಿದರು.
ಬೆಟಗೇರಿಯ ಸೇವಾ ಭಾರತಿ ಸಂಸ್ಥೆಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ ಪೋಷಣೆಗೊಂಡ ಮಗುವನ್ನು ಕೇರಳದ ದಂಪತಿಗೆ ದತ್ತುಮಗು ಹಸ್ತಾಂತರಿಸಿ ಮಾತನಾಡಿದರು.
‘ಅಲಕ್ಷಿತ ಮಗುವನ್ನು ದತ್ತು ಸ್ವೀಕಾರ ಸಂಸ್ಥೆಯೊಂದು ಸಂರಕ್ಷಿಸಿ ಪೋಷಣೆ ಮಾಡಿ, ಕಾನೂನು ಪ್ರಕಾರ ಮಕ್ಕಳಿಲ್ಲದ ದಂಪತಿಗೆ ಹಸ್ತಾಂತರಿಸುವ ಮೂಲಕ ಆ ಮಗುವಿಗೆ ಭವ್ಯ ಭವಿಷ್ಯವನ್ನು ರೂಪಿಸುವುದು ಒಂದೆಡೆಯಾದರೆ, ಮಕ್ಕಳಿಲ್ಲದ ಕೊರಗಿನಲ್ಲಿರುವ ದಂಪತಿಯ ಮಡಿಲಿಗೆ ಮಗುವನ್ನು ಹಸ್ತಾಂತರಿಸುವುದು ಮಹತ್ಕಾರ್ಯವಾಗಿದೆ. ಮಗುವನ್ನು ಪಡೆದ ದಂಪತಿ ಈ ಮಗುವಿಗೆ ಒಳ್ಳೆ ಸಂಸ್ಕಾರ, ಶಿಕ್ಷಣ, ಭವಿಷ್ಯ ನೀಡಲಿ’ ಎಂದರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಾಂತ ಪ್ರಚಾರಕ ನರೇಂದ್ರ ಮಾತನಾಡಿ, ‘ಅಮೂಲ್ಯ ದತ್ತು ಕೇಂದ್ರವು ಮನುಷ್ಯತ್ವ ಮತ್ತು ಮಾನವೀಯ ಕಾರ್ಯಕ್ಕೆ ತನ್ನನ್ನು ಸಮರ್ಪಿಸಿಕೊಂಡಿದೆ. ಇದುವರೆಗೂ 68 ಮಕ್ಕಳಿಗೆ ಬದುಕು ನೀಡುವಲ್ಲಿ ತನ್ನದೇ ಆದ ಅಮೂಲ್ಯ ಸೇವೆ ಸಲ್ಲಿಸುತ್ತ ಮುನ್ನಡೆದಿರುವ ಅಮೂಲ್ಯ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ’ ಎಂದು ಬಣ್ಣಿಸಿದರು.
ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾ ವೇದಿಕೆಯಲ್ಲಿದ್ದರು. ನಾಗವೇಣಿ ಕಟ್ಟಿಮನಿ ಪ್ರಾರ್ಥಿಸಿದರು. ನರಸಿಂಹ ಕಾಮಾರ್ತಿ ಪರಿಚಯಿಸಿದರು. ಮಂಜುನಾಥ ಚನ್ನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ರಾಜಪುರೋಹಿತ ನಿರೂಪಿಸಿದರು. ರಾಜೇಶ ಖಟವಟೆ ವಂದಿಸಿದರು.
ಬಸವರಾಜ ನಾಗಲಾಪೂರ, ಲಲಿತ್ ಜೈನ್, ಗಣೇಶ ಮಾಗುಂಡ, ಬಸವರಾಜ ಪಟ್ಟಣಶೆಟ್ಟಿ, ಪ್ರಮೋದ ಹಿರೇಮಠ, ಶ್ರೀಧರ ಕಾಂಬಳೆ, ಅಭಿಷೇಕ ಮಾಳೋದೆ, ಜ್ಯೋತಿ ಸಂಗಮದ ಸೇರಿದಂತೆ ದತ್ತು ಕೇಂದ್ರದ ಆಯಾಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.