ADVERTISEMENT

ಕುಂಠಿತಗೊಂಡ ಇಳುವರಿ | ದರ ಏರುವ ನೀರಿಕ್ಷೆ: ಕಣ್ಣಿರು ತರಿಸುವುದೇ ಈರುಳ್ಳಿ?

ಲಕ್ಷ್ಮಣ ಎಚ್.ದೊಡ್ಡಮನಿ
Published 10 ಅಕ್ಟೋಬರ್ 2023, 6:55 IST
Last Updated 10 ಅಕ್ಟೋಬರ್ 2023, 6:55 IST
ಡಂಬಳದ ಎಪಿಎಂಸಿ ಮಾರುಕಟ್ಟೆಯ ಬಯಲಿನಲ್ಲಿ ಕಟಾವು ಮಾಡಿದ ಈರುಳ್ಳಿಯನ್ನು ಸ್ವಚ್ಛಗೊಳಿಸುತ್ತಿರುವ ಕಾರ್ಮಿಕರು
ಡಂಬಳದ ಎಪಿಎಂಸಿ ಮಾರುಕಟ್ಟೆಯ ಬಯಲಿನಲ್ಲಿ ಕಟಾವು ಮಾಡಿದ ಈರುಳ್ಳಿಯನ್ನು ಸ್ವಚ್ಛಗೊಳಿಸುತ್ತಿರುವ ಕಾರ್ಮಿಕರು   

ಡಂಬಳ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಹುತೇಕ ರೈತರ ಜಮೀನುಗಳು ಬಿತ್ತನೆಯಾಗದೆ ಖಾಲಿ ಉಳಿದಿವೆ. ಹಿಂಗಾರಿ ಮಳೆ ಕೈಹಿಡಿಯುವ ಲಕ್ಷಣಗಳು ಬಹುತೇಕ ಕಡಿಮೆ ಇದೆ. ನೀರಾವರಿ ಆಶ್ರಿತ ಜಮೀನುಗಳಲ್ಲಿ ರೈತರು ಈರುಳ್ಳಿ ಬೀಜ ಬಿತ್ತನೆ ಮಾಡಿದ್ದರು. ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುತ್ತಿಲ್ಲ. ಮತ್ತೊಂದಡೇ ಇಳುವರಿ ಕುಂಠಿತ ಪರಿಣಾಮ ಈರುಳ್ಳಿ ದರ ಈ ವರ್ಷ ಹೆಚ್ಚಳವಾಗುವ ನಿರೀಕ್ಷೆ ಇದ್ದು ಗ್ರಾಹಕರಲ್ಲಿ ಕಣ್ಣೀರು ತರಿಸುವ ಸಾಧ್ಯತೆ ಇದೆ.

ದೇಶದಲ್ಲಿ ಮಹಾರಾಷ್ಟ್ರವನ್ನು ಹೊರತು ಪಡಿಸಿದರೇ ಕರ್ನಾಟಕವೇ ಕೆಂಪು ಈರುಳ್ಳಿ ಬೆಳೆಯಲು ಅಗ್ರಸ್ಥಾನ ಪಡೆದಿದೆ. ರಾಜ್ಯದಲ್ಲಿ ಪ್ರತಿ ವರ್ಷ 1 ಲಕ್ಷ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದರೇ, 50 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯುವ ಗದಗ ಜಿಲ್ಲೆಯದ್ದೇ ಅರ್ಧಪಾಲು.

‘ಮೊದಲು ಬೀಜ, ಗೊಬ್ಬರ, ಕೂಲಿ ಕಾರ್ಮಿಕರ ಸಂಬಳ ಸೇರಿದಂತರೆ ಎಕರೆಗೆ ₹10 ರಿಂದ ₹15 ಸಾವಿರ ವೆಚ್ಚವಾಗುತ್ತಿತ್ತು. ಈಗ ಎಕರೆಗೆ ₹35ರಿಂದ ₹40 ಸಾವಿರ ಖುರ್ಚು ಬರುತ್ತಿದೆ. ಡಾವಣಗೇರಿ ಮೂಲದ ವ್ಯಾಪಾರಸ್ಥರು ನಮ್ಮ ಗ್ರಾಮಕ್ಕೆ ಬಂದು ಮೊದಲನೇ ಹಂತದ ಈರುಳ್ಳಿ ₹2,500 ಎರಡನೇ ಹಂತ ₹1,300 ಮೂರನೇ ಹಂತ ₹600 ರಂತೆ ಪ್ರತಿ ಕ್ವಿಂಟಲ್‌ಗೆ ಮಾರಾಟ ಮಾಡಿದ್ದೇವೆ. ಒಟ್ಟು ಒಂದು ಎಕರೆ ಜಮೀನಿನಲ್ಲಿ 250 ಚೀಲ ಇಳುವರಿ ಬಂದಿದ್ದು ಮೂರು ಲಕ್ಷಕ್ಕೆ ಮಾರಾಟ ಮಾಡಿದ್ದೇವೆ. ಮಳೆ ಉತ್ತಮವಾಗಿದ್ದರೆ ಇನ್ನೂ ಇಳುವರಿ ಬರುತ್ತಿತ್ತು’ ಎನ್ನುತ್ತಾರೆ ಮೂರನಾಲ್ಕು ದಿನದ ಹಿಂದೆ ಈರುಳ್ಳಿ ಮಾರಾಟ ಮಾಡಿದ ಡಂಬಳದ ರೈತ ಮಲ್ಲಿಕಾರ್ಜುನ ಪಾರಪ್ಪನವರ.‌

ADVERTISEMENT

ಈರುಳ್ಳಿ ಕಟಾವು ಮಾಡಿ ಸ್ವಚ್ಛಗೊಳಿಸುತ್ತಿದ್ದೇವೆ. ಮಾರುಕಟ್ಟೆಯಲ್ಲಿ ₹2,500ರಿಂದ ₹3,000 ಸಾವಿರ ವರೆಗೆ ಕೇಳುತ್ತಿದ್ದಾರೆ. ಈರುಳ್ಳಿ ಒಣಗಿಸಿ ಯೋಗ್ಯದರ ಬಂದರೆ ಮಾರಾಟ ಮಾಡುತ್ತೇವೆ. ಎನ್ನುತ್ತಾರೆ ರೈತರಾದ ಬಾಬುಸಾಬ್ ಕಾಸ್ತಾರ ಮತ್ತು ಅಬ್ದುಲ್‍ಸಾಬ್ ಕಾಸ್ತಾರ.

ಸಿಡ್ಸ್ ಭೀಮಾ ಶಕ್ತಿ, ಅರ್ಪಾ ಕಲ್ಯಾಣ, ಪೂಸಾ ರೆಡ್, ಬಳ್ಳಾರಿ ರೆಡ್, ನಾಸಿಕ್ ರೆಡ್ ಪಂಚಗಂಗಾ, ಇಂಡೋ ಅಮೇರಿಕನ್, ಕೃತಿಕಾ, ಜಿಂದಾಲ, ಪ್ರೇಮ ಪಂಚಗಂಗಾ, ಕಳಸ, ಸೇರಿದಂತೆ ಬ್ರಾಂಡೆಡ್ ಹಾಗೂ ಖುಲ್ಲಾ ಬೀಜಗಳನ್ನು ಈ ಭಾಗದ ರೈತರು ಹೆಚ್ಚು ಬಿತ್ತನೆ ಮಾಡಿದ್ದಾರೆ.

2023-24ನೇ ಸಾಲಿನಲ್ಲಿ 4,984 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ ಬಿತ್ತನೆಯಾಗಿದ್ದು 3201 ಹೆಕ್ಟೇರ್ ಪ್ರದೇಶದಲ್ಲಿ (ಶೇ64). ಖಾಸಗಿ ಕಂಪೆನಿಯಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಬೀಜವನ್ನು ರೈತರು ಬಿತ್ತನೆ ಮಾಡಿದ್ದಾರೆ ಎಂದು ಮುಂಡರಗಿ ತಾಲ್ಲೂಕು ಕೃಷಿ ಅಧಿಕಾರಿ ಮಹ್ಮದರಫೀ ಎಂ ತಾಂಬೋಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದತ್ತ ವ್ಯಾಪಾರಸ್ಥರು

ಈ ಸಲ ಈರುಳ್ಳಿ ದರ ಹೆಚ್ಚಾಗುವ ನಿರೀಕ್ಷೆಯಿಂದ ಬೆಂಗಳೂರು ಚಿತ್ರದುರ್ಗ ದಾವಣಗೆರೆ ಹುಬ್ಬಳ್ಳಿ ಧಾರವಾಡ ಮುಂತಾದ ನಗರ ಪ್ರದೇಶದಿಂದ ವ್ಯಾಪಾರಸ್ಥರು ಖರೀದಿ ಮಾಡಿಕೊಳ್ಳಲು ಗ್ರಾಮೀಣ ಪ್ರದೇಶದತ್ತ ಮುಖಮಾಡುತ್ತಿದ್ದು ರೈತರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದಡೆ ವ್ಯಾಪಾರಸ್ಥರು ಗ್ರಾಮೀಣ ಪ್ರದೇಶಕ್ಕೆ ಬಂದು ಖರೀದಿ ಮಾಡಿಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.

ಡಂಬಳದ ಎಪಿಎಂಸಿ ಮಾರುಕಟ್ಟೆಯ ಬಯಲಿನಲ್ಲಿ ಕಟಾವು ಮಾಡಿದ ಈರುಳ್ಳಿಯನ್ನು ಸ್ವಚ್ಛಗೊಳಿಸುತ್ತಿರುವ ಕಾರ್ಮಿಕರು
ಹೊಲದಿಂದ ಕಿತ್ತುಕೊಂಡು ಬಂದಿರುವ ಈರುಳ್ಳಿನ್ನು ಕೂಲಿ ಕಾರ್ಮಿಕರು ಕೊಯ್ಲು ಮಾಡುತ್ತಿರುವ ಚಿತ್ರಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.