ಹಳೇಬೀಡು: ದೇವಾಲಯದ ಸುತ್ತಮುತ್ತಲೂ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚುವಾಗ ಹಲವು ವಿಗ್ರಹಗಳಿಗೆ
ಹಾನಿಯಾಗಿರುವುದು ವರದಿಯಾಗಿದೆ.
ಜೈನಬಸದಿ ಹಿಂಭಾಗದಲ್ಲಿ ಪುರಾತತ್ವ ವಿಭಾಗದಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು,ಈಕಾರ್ಯ ಸುಗಮವಾಗಿ ನಡೆಯುವ ಉದ್ದೇಶದಿಂದ ಗಿಡ ಗಂಟಿ ನಾಶಪಡಿಸಲು ಶನಿವಾರ ಬೆಂಕಿ ಹಾಕಿದ್ದ ವೇಳೆ ಅಚಾತುರ್ಯ ನಡೆದಿದ್ದು, ಭಾನುವಾರ ಈ ವಿಚಾರ ಬೆಳಕಿಗೆ ಬಂದಿದೆ.
ಈ ದೇವಾಲಯದ ಸುತ್ತಲೂ ಇರುವ ಕಳೆಗಳನ್ನು ಕಿತ್ತು ಆವರಣವನ್ನು ಶುಚಿಗೊಳಿಸುವ ಉದ್ದೇಶದಿಂದ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಬೆಂಕಿ ಕೆನ್ನಾಲಗೆ ಚಾಚಿ ದೇವಸ್ಥಾನದಲ್ಲಿರುವ ಐತಿಹಾಸಿಕ ವಿಗ್ರಹಗಳು ಸುಟ್ಟು ಹೋಗಿವೆ. ಇದರಿಂದ ವಿಗ್ರಹಗಳು ಭಗ್ನವಾಗಿವೆ.
‘ಬಿಸಿಲಿಗೆ ಒಣಗಿದ್ದ ಗಿಡ, ಬಳ್ಳಿಗಳು ಧಗಧಗನೆ ಹೊತ್ತಿಕೊಂಡು ಉರಿದಿದ್ದು, ಕೆರೆ ದಂಡೆಯಲ್ಲಿ ಹುಚ್ಚೇಶ್ವರ (ಬ್ರಹ್ಮೇಶ್ವರ) ಸ್ಮಾರಕದ ಬಹುಭಾಗ ಬೆಂಕಿಯ ಜ್ವಾಲೆಗೆ ಸಿಲುಕಿ ಕರಕಲಾಗಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.
ಭಾರತೀಯ ಪುರಾತತ್ವ ವಿಭಾಗದಿಂದ ನಿಯೋಜಿರಾಗಿದ್ದ ಕಾರ್ಮಿಕರು ಇಂಥದ್ದೊಂದು ಬೇಜವಾಬ್ದಾರಿಯ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಬೆಂಕಿ ನಂದಿಸಲು ಕಾರ್ಮಿಕರು ಪ್ರಯತ್ನ ಪಟ್ಟರೂ ವಿಗ್ರಹಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಸ್ಥಳಕ್ಕೆ ಭೇಟಿ ನೀಡಲು ಮಾಧ್ಯಮದವರಿಗೆ ಅವಕಾಶ ನೀಡಲಿಲ್ಲ.
‘ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ’ ಎಂದು ಪುರಾತತ್ವ ವಸ್ತು ಸಂಗ್ರಹಾಲಯದ ಸಹಾಯಕ ಅಧಿಕಾರಿ ನಾಗನೂರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.