ADVERTISEMENT

ಹೊಳೆನರಸೀಪುರ: ಹನುಮೋತ್ಸವ ಸದಸ್ಯರಿಂದಲೇ ಸ್ವಯಂಪ್ರೇರಿತ ಸಿದ್ಧತೆ

ಎಚ್.ವಿ.ಸುರೇಶ್ ಕುಮಾರ್‌
Published 9 ಡಿಸೆಂಬರ್ 2025, 2:17 IST
Last Updated 9 ಡಿಸೆಂಬರ್ 2025, 2:17 IST
ಹನುಮೋತ್ಸವದ ಅಂಗವಾಗಿ ಹೊಳೆನರಸೀಪುರ ಪಟ್ಟಣವನ್ನು ವಿದ್ಯುತ್ ದೀಪ, ಕೇಸರಿ ಬಂಟಿಂಗ್‌ಗಳಿಂದ ಸಿಂಗರಿಸಲಾಗುತ್ತಿದೆ.
ಹನುಮೋತ್ಸವದ ಅಂಗವಾಗಿ ಹೊಳೆನರಸೀಪುರ ಪಟ್ಟಣವನ್ನು ವಿದ್ಯುತ್ ದೀಪ, ಕೇಸರಿ ಬಂಟಿಂಗ್‌ಗಳಿಂದ ಸಿಂಗರಿಸಲಾಗುತ್ತಿದೆ.   

ಹೊಳೆನರಸೀಪುರ: ಇಲ್ಲಿನ ಹನುಮೋತ್ಸವ ಆಚರಣಾ ಸೇವಾ ಸಮಿತಿ ವತಿಯಿಂದ ಡಿಸೆಂಬರ್ 13 ರಂದು ಬೃಹತ್ ಹನುಮೋತ್ಸವ ಆಚರಿಸಲಾಗುತ್ತಿದ್ದು, ಪಟ್ಟಣವನ್ನು ವಿದ್ಯುತ್ ದೀಪ, ಕೇಸರಿ ಬಂಟಿಂಗ್ಸ್‌ಗಳಿಂದ ಸಿಂಗರಿಸಲಾಗುತ್ತಿದೆ.

ಇಲ್ಲಿನ ಗಾಂಧಿ ವೃತ್ತ, ಸುಭಾಶ್ ವೃತ್ತ, ಪೇಟೆ ಮುಖ್ಯರಸ್ತೆ, ಕೋಟೆ ಮುಖ್ಯರಸ್ತೆ, ಅರಕಲಗೂಡು ರಸ್ತೆಯಲ್ಲಿ ದೀಪಾಲಂಕಾರ ಮಾಡಿದ್ದು, ಬಿಸಿಲು ನೆಲಕ್ಕೆ ಬೀಳದಂತೆ ಕೇಸರಿ ಬಂಟಿಂಗ್ಸ್‌ಗಳನ್ನು ಹಾಕಲಾಗಿದೆ. ಹನುಮೋತ್ಸವಕ್ಕೆ ಶುಭ ಕೋರುವವರ ಕಟೌಟ್‌ಗಳು ರಾಜಾಜಿಸುತ್ತಿವೆ. ಅಧ್ಯಕ್ಷರು, ಪದಾಧಿಕಾರಿಗಳೇ ಇಲ್ಲದ ಹನುಮೋತ್ಸವದ ಸಮಿತಿಯ ಸದಸ್ಯರೇ, ಎಲ್ಲ ಸಿದ್ಧತೆಗಳಲ್ಲಿ ತೊಡಗಿದ್ದಾರೆ.

ಡಿಸೆಂಬರ್ 13 ರಂದು ಬೆಳಿಗ್ಗೆ 9ರಿಂದಲೇ ಹತ್ತಾರು ಕಲಾತಂಡಗಳ ಜೊತೆಯಲ್ಲಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಹೊರಡುವ ಹನುಮೋತ್ಸವ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.

ADVERTISEMENT

ಸಂಜೆ 6 ಗಂಟೆಯ ನಂತರ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂಭಾಗ ಹಾಕಲಾಗುವ ಬೃಹತ್ ವೇದಿಕೆಯಲ್ಲಿ ಸ್ವಾಮೀಜಿಗಳಿಂದ ಹನುಮೋತ್ಸವದ ಮಹತ್ವದ ಬಗ್ಗೆ ಉಪನ್ಯಾಸ ನಡೆಯಲಿದೆ. ನಂತರ ಇದೇ ವೇದಿಕೆಯಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಪ್ರಥಮ ಬಹುಮಾನವಾಗಿ ₹ 30 ಸಾವಿರ ನೀಡುತ್ತಿದ್ದೇವೆ ಎನ್ನುತ್ತಾರೆ ಸಮಿತಿಯ ಪ್ರದೀಪ್‌ ರಾಜ್.

ನಮ್ಮ ಹನುಮೋತ್ಸವ ಸಮಿತಿಯಲ್ಲಿ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಿಸಿಕೊಂಡಿಲ್ಲ. ಇಲ್ಲಿ ಎಲ್ಲರೂ ಅಧ್ಯಕ್ಷರು, ಕಾರ್ಯದರ್ಶಿ ಎನ್ನುವ ಸಮಿತಿಯ ಆಡಿಟರ್ ರಾಘವೇಂದ್ರ, ಎಲ್ಲರೂ ಒಟ್ಟಾಗಿ ಕೆಲಸಗಳನ್ನು ಮಾಡುತ್ತಿದ್ದೇವೆ. ಸಾರ್ವಜನಿಕರು, ವರ್ತಕರು, ಅಧಿಕಾರಿಗಳು, ನೌಕರರು ಸ್ವಯಂಪ್ರೇರಣೆಯಿಂದ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

‘ಹನುಮೋತ್ಸವ ಅದ್ಧೂರಿಯಾಗಿ ಆಚರಿಸಲು ಯುವಕರ ತಂಡ ಮುಂದಾಗಿದ್ದು, ಅದರ ಯಶಸ್ಸಿಗೆ ಸೂಕ್ತ, ಮಾರ್ಗದರ್ಶನ ನೀಡಲಾಗುತ್ತಿದೆ’ ಎಂದು ವರ್ತಕರ ಸಂಘದ ಅಧ್ಯಕ್ಷ, ಪುರಸಭೆ ಮಾಜಿ ಅಧ್ಯಕ್ಷ ಕೆ. ಶ್ರೀಧರ್‌ ಹೇಳಿದರು.

ಕಳೆದ ವರ್ಷದ ಹನುಮೋತ್ಸವ ಯಶಸ್ವಿಯಾಗಿದ್ದರಿಂದ ಸಾರ್ವಜನಿಕರ ಒತ್ತಾಯದ ಮೇರೆಗೆ ಈ ವರ್ಷವೂ ಅದ್ಧೂರಿ ಹನುಮೋತ್ಸವ ಆಚರಿಸಲು ತಿಂಗಳಿಂದ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ.
ಸ್ಟುಡಿಯೋ ರಂಗನಾಥ್ ಸಮಿತಿ ಸದಸ್ಯ
ಹನುಮೋತ್ಸವಕ್ಕೆ ವಿವಿಧೆಡೆಗಳಿಂದ ಸಾವಿರಾರು ಜನರು ಬರಲಿದ್ದು ಮಧ್ಯಾಹ್ನ ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದೇವೆ.
ಬಾಬು ಉಪ್ಪಾರ್ ಸಮಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.