ಹಿರೀಸಾವೆ: ಬೆಂಗಳೂರಿನಿಂದ ಐವರು ಯುವಕರನ್ನು ಹಾಸನ ಜಿಲ್ಲೆಗೆ ಕರೆ ತರುತ್ತಿದ್ದ ಖಾಸಗಿ ಆಂಬುಲೆನ್ಸ್ ಅನ್ನು ಹಿರೀಸಾವೆ ಸಮೀಪದ ಚೆಕ್ಪೋಸ್ಟ್ನಲ್ಲಿ ಮಂಗಳವಾರ ಪೊಲೀಸರು ಪತ್ತೆಹಚ್ಚಿ, ವಶಕ್ಕೆ ಪಡೆದಿದ್ದಾರೆ.
ಲಾಕ್ಡೌನ್ ಆದಾಗಿನಿಂದ ಆಂಬುಲೆನ್ಸ್ ಮತ್ತು ಗೂಡ್ಸ್ ವಾಹನದಲ್ಲಿ ಜನರನ್ನು ಸಾಗಣೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ 75ರ ಹಾಸನ –ಮಂಡ್ಯ ಗಡಿಯಲ್ಲಿನ ಚೆಕ್ಪೋಸ್ಟ್ನಲ್ಲಿ ಜಿಲ್ಲೆಗೆ ಬರುವ ಎಲ್ಲ ವಾಹನಗಳನ್ನು ತಪಾಸಣೆ ಮಾಡುವಂತೆ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಮಾಡಿದ್ದರು.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಐಯ್ಯಂಗಾರ್ ಕೇಕ್ ಸೆಂಟರನಲ್ಲಿ ಕೆಲಸ ಮಾಡುತ್ತಿದ್ದ, ಈ ಐವರು ಯುವಕರನ್ನು ಬೇಲೂರು ತಾಲ್ಲೂಕಿಗೆ ತಲುಪಿಸಲು, ₹7ಸಾವಿರ ಬಾಡಿಗೆ ಪಡೆಯಲಾಗಿತ್ತು. ವಾಹನದ ಚಾಲಕ ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದವರು. ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಎಸ್ಐ ಭವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.
ಹಿರೀಸಾವೆ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ. ಶಿವಸ್ಬಾಮಿ ಯುವಕರ ಆರೋಗ್ಯ ತಪಾಸಣೆ ಮಾಡಿ, ಎಲ್ಲರೂ ಆರೋಗ್ಯವಾಗಿ ಇದ್ದಾರೆ. ಇವರಗಳ ಬಗ್ಗೆ ಅಲ್ಲಿನ ತಾಲ್ಲೂಕು ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಿ, ಹೋಂ ಕ್ವಾರಂಟೈನ್ನಲ್ಲಿ ಇಡುವಂತೆ ತಿಳಿಸಲಾಗುವುದು ಎಂದು ಹೇಳಿದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಯುವಕರ ಪೋಷಕರನ್ನು ಕರೆಸಿ, ಅವರ ಗ್ರಾಮಗಳಿಗೆ ಕಳುಹಿಸಿ ಕೊಡಲಾಗುವುದು ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.