ಹಾಸನ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆಸುವ ಮಟ್ಟಕ್ಕೆ ರಾಜಕೀಯ ಪರಿಸ್ಥಿತಿ ಹೋಗಬಾರದು. ರಾಜಕೀಯದಲ್ಲಿ ಸೋಲು, ಗೆಲುವು ಸಾಮಾನ್ಯ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಮತಾ ಕಾಲಿಗೆ ಗಾಯವಾಗಿದೆ. ನಂದಿ ಗ್ರಾಮದಲ್ಲೇ ಸ್ಪರ್ಧಿಸುವುದಾಗಿ ಪಣ ತೊಟ್ಟಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.
ಮಧು ಬಂಗಾರಪ್ಪ ಪಕ್ಷ ತ್ಯಜಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೌಡರು, ‘ಯಾರ್ಯಾರು ಹೇಗೆ ನಡೆದುಕೊಂಡಿದ್ದಾರೆ ಎಂಬುದು ಗೊತ್ತಿದೆ. ಪಕ್ಷ ಬಿಡುವ ವಿಚಾರವಾಗಿ ಮಾತನಾಡುವುದಿಲ್ಲ. ಈ ಬಗ್ಗೆ ಕುಮಾರಸ್ವಾಮಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಿಂಧಗಿಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಕರೆದೊಯ್ದಿದ್ದಾರೆ. ಈಗ ಯಾವುದೇ ಚುನಾವಣೆ ಇಲ್ಲದ ಕಾರಣ ಅನವಶ್ಯಕ ಚರ್ಚೆ ಬೇಡ’ಎಂದು ಉತ್ತರಿಸಿದರು.
‘ಹಾಸನ ಜಿಲ್ಲೆಯ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದೆ. ಆದರೆ ಆರೋಗ್ಯ ಪರಿಸ್ಥಿತಿ ಸರಿಯಲ್ಲ. ಸುಧಾರಿಸಿದ ನಂತರ ಪ್ರವಾಸ ಕೈಗೊಳ್ಳುವೆ. ವೈದ್ಯರು ಪ್ರಯಾಣ ಮಾಡದಂತೆ ಸಲಹೆ ನೀಡಿದ್ದಾರೆ. ಮುಂಚೆ ನಾನೇ ನಡೆದುಕೊಂಡು ಬರುತ್ತಿದ್ದೆ. ಈಗ ಅಷ್ಟೊಂದು ಶಕ್ತಿ ಇಲ್ಲ. ಮುಂದಿನ ವರ್ಷ ನನ್ನ ಆರೋಗ್ಯ ಸ್ಥಿತಿ ಹೇಗಿರುತ್ತದೋ ಗೊತ್ತಿಲ್ಲ. ಹಾಗಾಗಿ ಈ ಬಾರಿ ಮನೆ ದೇವರು ಈಶ್ವರ ದರ್ಶನ ಪಡೆಯುವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.