
ಬೇಲೂರು: ಕೇಶ ತೈಲ ಮಾರಲೆಂದು ಹೊರದೇಶಕ್ಕೆ ತೆರಳಿದ್ದ ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದ ಆದಿವಾಸಿ ಕುಟುಂಬವೊಂದು ಬಹರೇನ್ನಲ್ಲಿ ಸಿಲುಕಿಕೊಂಡಿದೆ.
ಇಸ್ರೇಲ್–ಇರಾನ್ ಮಧ್ಯೆ ಯುದ್ಧ ಆರಂಭವಾಗಿದ್ದು, ಭಾರತಕ್ಕೆ ಮರಳಲು ವಿಮಾನಗಳು ಇಲ್ಲ. ವಿಮಾನ ಹಾರಾಟ ಸ್ಥಗಿತವಾಗಿದ್ದರಿಂದ ಈ ಕುಟುಂಬ, ಬಹರೇನ್ ರಾಜಧಾನಿ ಮನಾಮಾದಲ್ಲಿ ಸಿಲುಕಿದೆ.
ಅಂಗಡಿಹಳ್ಳಿ ಗ್ರಾಮದ ಪಂಜು, ಪತ್ನಿ ಜಮುನಾ, ಮಗಳು ಹಾಗೂ ಮಗ ಧೀರೇಂದ್ರ ಹಾಗೂ ಸತೀಶ್ ಸೇರಿ ಒಟ್ಟು ಏಳು ಮಂದಿ ಒಂದು ತಿಂಗಳ ಹಿಂದೆಯಷ್ಟೆ ಕೇಶ ತೈಲ ಮಾರಲೆಂದು ಗಲ್ಫ್ ದೇಶಗಳಿಗೆ ತೆರಳಿದ್ದರು.
ಇದೀಗ ಬಹರೇನ್ನಲ್ಲಿದ್ದು, ವಿಡಿಯೊ ಮಾಡಿ ವಾಟ್ಸ್ಆ್ಯಪ್ ಮೂಲಕ ತಮ್ಮ ಸಂಬಂಧಿಕರಿಗೆ ಕಳುಹಿಸಿದ್ದಾರೆ. ಕುಟುಂಬವನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
‘ನಾವು ಇರುವ ಕಟ್ಟಡದ ಪಕ್ಕದ ಕಟ್ಟಡದಲ್ಲೆ ಬಾಂಬ್ ಸ್ಫೋಟವಾಗಿದೆ. ನಮ್ಮ ಸ್ನೇಹಿತರು ನಮ್ಮನ್ನು ಬಚಾವ್ ಮಾಡಿ ಬೇರೆಡೆ ಸ್ಥಳಾಂತರಿಸಿದ್ದಾರೆ. ಕುಡಿಯಲು ನೀರಿಲ್ಲ. ತಿನ್ನಲು ಏನು ಸಿಗುತ್ತಿಲ್ಲ. ನಾವು ನಮ್ಮ ದೇಶಕ್ಕೆ ಹಿಂದಿರುಗುತ್ತೇವೆ. ನಮ್ಮನ್ನು ಕರ್ನಾಟಕ ಸರ್ಕಾರ, ಭಾರತ ಸರ್ಕಾರ ರಕ್ಷಿಸಿ’ ಎಂದು ಮನವಿ ಮಾಡಿದ್ದಾರೆ.
‘ನಮ್ಮ ಆದಿವಾಸಿ ಜನರು ನೋವಿನೆಣ್ಣೆ, ಕೇಶ ತೈಲ ಸೇರಿ ಇತರೆ ವಸ್ತುಗಳನ್ನು ಮಾರಲೆಂದು ಹೊರದೇಶಗಳಿಗೆ ತೆರಳುವುದು ಮಾಮೂಲಿ. ನಮ್ಮೂರಿನ ಪಂಜು ಕುಟುಂಬವೂ ಹೋಗಿದೆ. ಆದರೆ ಇರಾನ್, ಇಸ್ರೆಲ್ ಯುದ್ಧದ ನಡುವೆ ಬಹರೇನ್ನಲ್ಲಿ ಸಿಲುಕಿದ್ದು ಅವರನ್ನು ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುತುವರ್ಜಿ ವಹಿಸಿ ರಕ್ಷಿಸಬೇಕಿದೆ. ಬದುಕಿ ಬರುವುದೇ ಕಷ್ಟ ಎಂಬ ಸ್ಥಿತಿಯಲ್ಲಿರುವ ನಮ್ಮ ಕುಟುಂಬಕ್ಕೆ ಸರ್ಕಾರಗಳು ಆಸರೆಯಾಗಬೇಕಿದೆ’ ಎಂದು ಹಕ್ಕಿಪಿಕ್ಕಿ ಹಾಗೂ ಆದಿವಾಸಿ ಸಮುದಾಯದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹೂರಾಜು ಅಂಗಡಿಹಳ್ಳಿ ಮನವಿ ಮಾಡಿದ್ದಾರೆ.
ದುಬೈನ ಹೋಟೆಲ್ನಲ್ಲಿ ಸಿಲುಕಿದ ಐವರು
(ಅರಸೀಕೆರೆ ವರದಿ): ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಇಲ್ಲಿನ ಜಯಂತ ಹಾಗೂ ಸ್ನೇಹಿತರು ಸೇರಿ ಐವರು ದುಬೈನ ಹೋಟೆಲ್ನಲ್ಲಿ ಸಿಲುಕಿದ್ದಾರೆ.
ಅಬುಧಾಬಿಗೆ ತೆರಳಿದ್ದ ಐವರಿಗೆ, ದುಬೈಗೆ ತೆರಳುವಂತೆ ಶನಿವಾರ ಸೂಚನೆ ನೀಡಲಾಗಿತ್ತು. ಅದರಂತೆ ದುಬೈಗೆ ಬಂದಿರುವ ಜಯಂತ ಹಾಗೂ ಅವರ ಸ್ನೇಹಿತರು ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ.
‘ಸದ್ಯಕ್ಕೆ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ನಮಗೆ ಯಾವುದೇ ಸಮಸ್ಯೆ ಇಲ್ಲ. ಇಲ್ಲಿನ ರಸ್ತೆಗಳಲ್ಲಿ ಪೊಲೀಸರು, ಆಂಬುಲೆನ್ಸ್ಗಳನ್ನು ಬಿಟ್ಟರೆ ಬೇರೆ ವಾಹನಗಳ ಓಡಾಡುತ್ತಿಲ್ಲ. ರಸ್ತೆಗಳು ಸಂಪೂರ್ಣ ಖಾಲಿಯಾಗಿವೆ. ನಾವು ಹೊರಡಬೇಕಿದ್ದ ವಿಮಾನ ಸಂಚಾರ ರದ್ದಾಗಿದೆ. ಬೇರೆ ವಿಮಾನ ವ್ಯವಸ್ಥೆ ಮಾಡುವುದಾಗಿ ಇಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಜಯಂತ ಮಾಹಿತಿ ನೀಡಿದ್ದಾರೆ.
ದುಬೈನಲ್ಲಿ ಸಿಲುಕಿರುವ ಕನ್ನಡಿಗರಿಗೆ ನೆರವು ಬೇಕಾದಲ್ಲಿ ನನ್ನ ನಂಬರ್ +971555114205 ಇಲ್ಲಿಗೆ ಕರೆ ಮಾಡಿ.– ಯತೀಶ್ಗೌಡ, ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ
ಹೊರದೇಶದಲ್ಲಿ ಸಿಲುಕಿದ್ದರೆ ಮಾಹಿತಿ ನೀಡಿ
ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ಶುರುವಾಗಿದ್ದು ಅಪಾರ ಪ್ರಮಾಣದ ಸಾವು ನೋವು ಸಂಭವಿಸುತ್ತಿದೆ. ಕರ್ನಾಟಕದ ಹಲವರು ಮಧ್ಯ ಪ್ರಾಚ್ಯ ಹಾಗೂ ಗಲ್ಫ್ ದೇಶಗಳಲ್ಲಿ ಸಿಲುಕಿಕೊಂಡಿರುವ ಮಾಹಿತಿಯಿದೆ. ಹಾಸನ ಜಿಲ್ಲೆಯ ಸಾರ್ವಜನಿಕರು ಯಾರಾದರೂ ಈ ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿದ್ದರೆ ಕೂಡಲೇ ಹಾಸನ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಅಥವಾ ದೂರವಾಣಿ ಸಂಖ್ಯೆ: 08172-261111 ಟೋಲ್ ಫ್ರೀ ನಂಬರ್ 08172-1077 ಇಲ್ಲಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.