ADVERTISEMENT

ಸಾಲ ಕೊಡಲಿಲ್ಲವೆಂದು ಆಕ್ರೋಶ; ಕೆನರಾ ಬ್ಯಾಂಕಿಗೆ ಬೆಂಕಿ ಹಚ್ಚಿದ ಗ್ರಾಹಕ!

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 2:59 IST
Last Updated 10 ಜನವರಿ 2022, 2:59 IST
ಹೆಡಿಗ್ಗೊಂಡ ಗ್ರಾಮದ ಕೆನರಾ ಬ್ಯಾಂಕ್‌ ಶಾಖೆಗೆ ಬೆಂಕಿ ಬಿದ್ದ ಪರಿಣಾಮ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು 
ಹೆಡಿಗ್ಗೊಂಡ ಗ್ರಾಮದ ಕೆನರಾ ಬ್ಯಾಂಕ್‌ ಶಾಖೆಗೆ ಬೆಂಕಿ ಬಿದ್ದ ಪರಿಣಾಮ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು    

ಹಾವೇರಿ: ಸಾಲಕೊಡಲಿಲ್ಲ ಎಂದು ಆಕ್ರೋಶಗೊಂಡ ಗ್ರಾಹಕನೊಬ್ಬ ಕೆನರಾ ಬ್ಯಾಂಕ್‌ ಶಾಖೆಗೆ ನುಗ್ಗಿ ಬೆಂಕಿ ಹಚ್ಚಿದ ಘಟನೆ ಬ್ಯಾಡಗಿ ತಾಲ್ಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.

ರಟ್ಟೀಹಳ್ಳಿ ಪಟ್ಟಣದ ವಸೀಂ ಹಜರಾತ್‌ಸಾಬ್‌ ಮುಲ್ಲಾ (33) ಬೆಂಕಿ ಹಚ್ಚಿದ ಆರೋಪಿ.

ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಲೋನ್‌ ಕೊಡಲು ನಿರಾಕರಿಸಿದರು ಎಂದು ಕುಪಿತಗೊಂಡ ವಸೀಂ, ಶನಿವಾರ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಬೈಕ್‌ನಲ್ಲಿ ಪೆಟ್ರೋಲ್‌ ಸಮೇತ ಬ್ಯಾಂಕ್‌ ಬಳಿ ಬಂದಿದ್ದಾನೆ. ಗ್ರಾಮ ಪಂಚಾಯಿತಿ ಕಟ್ಟಡದ ಮೇಲಂತಸ್ತಿನಲ್ಲಿದ್ದಬ್ಯಾಂಕ್‌ ಕಟ್ಟಡದ ಹಿಂಬದಿಯ ಕಿಟಕಿ ಗಾಜು ಒಡೆದು ಒಳಗಡೆ ಹೋಗಿ, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ.

ADVERTISEMENT

ನಂತರ ಕಟ್ಟಡದಿಂದ ಜಿಗಿದು ಹೋಗುವಾಗ, ಸದ್ದು ಕೇಳಿದ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಯಿಂದ ಲಕ್ಷಾಂತರ ಮೌಲ್ಯದ ಪೀಠೋಪಕರಣ, ಕಂಪ್ಯೂಟರ್‌, ಪ್ರಿಂಟರ್‌, ನೋಟು ಎಣಿಸುವ ಯಂತ್ರ, ಕಾಗದ ಪತ್ರಗಳು ಸುಟ್ಟು ಹೋಗಿವೆ.ಭದ್ರತಾ ಕೊಠಡಿಯಲ್ಲಿದ್ದ ನೋಟುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.ಕಾಗಿನೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.