ಹಾನಗಲ್: ‘ಚುನಾವಣೆಗಳಲ್ಲಿ ರೈತರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದು ರೈತರನ್ನೇ ಮರೆಯುವ ಸರ್ಕಾರದ ಧೋರಣೆಗಳು ಅಸಹಿಷ್ಣು ಆಗಿವೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕಿಡಿಕಾರಿದರು.
ಸೋಮವಾರ ಇಲ್ಲಿನ ವಿರಕ್ತಮಠದ ಶ್ರೀ ಸದಾಶಿವ ಮಂಗಲ ಭವನದಲ್ಲಿ ಆಯೋಜಿಸಿದ್ದ ನರಗುಂದ ಬಂಡಾಯದ ರೈತ ಹುತಾತ್ಮ ದಿನಾಚರಣೆಯ 45ನೇ ವರ್ಷದ ಹಾವೇರಿ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರಗುಂದ ಬಂಡಾಯದಲ್ಲಿ ಮೂವರು ರೈತರು ಬಲಿಯಾಗಿ ಇಡೀ ರಾಜ್ಯದಲ್ಲಿ ರೈತ ಸಂಘ ಉದಯವಾಗಲು ಕಾರಣವಾಯಿತು. ಅಧಿಕಾರಿಗಳ ದೌರ್ಜನ್ಯಕ್ಕೆ ರೈತರು ಕೊಲೆಯಾದರು. ಕೊಲೆಗಡುಕ ಸರ್ಕಾರಗಳು ನಮಗೆ ಬೇಕಾಗಿಲ್ಲ. ಕೃಷಿಕರನ್ನು ಕಾಪಾಡುವ ಸರ್ಕಾರ ಬೇಕು. ರೈತರನ್ನು ದಿವಾಳಿ ಮಾಡುವ ಸರ್ಕಾರದ ಕಾನೂನುಗಳು ಒಳ್ಳೆಯ ಬೆಳವಣಿಗೆ ಅಲ್ಲ. ರೈತರೇ ಒಟ್ಟಾಗಿರಿ. ಸರ್ಕಾರಕ್ಕೆ ತಕ್ಕ ಉತ್ತರ ಕೊಡಲು, ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಒಟ್ಟಾಗಿ ಬನ್ನಿ ಎಂದು ಕರೆ ನೀಡಿದರು.
ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ವರದಾ-ಬೇಡ್ತಿ ನದಿ ಜೋಡಣೆ ಕಾಮಗಾರಿ ಶೀಘ್ರ ಅನುಷ್ಠಾನಗೊಳ್ಳಬೇಕಿದ್ದು, ರಕ್ತ ಹರಿಸಿಯಾದರೂ ಅದನ್ನು ಪಡೆಯಲು ನಾವು ಸಿದ್ಧ ಎಂದರು.
ಡಿಸಿಸಿ ಸೇರಿದಂತೆ ಬ್ಯಾಂಕ್ಗಳಲ್ಲಿ ಸಾಲ ಸಿಗುತ್ತಿಲ್ಲ. ಕಿರುಕುಳ ಹೆಚ್ಚಾಗಿದೆ. ರೈತರ ಧಾನ್ಯ ಸಂಗ್ರಹಕ್ಕೆ ಗೋದಾಮುಗಳಿಲ್ಲ. ಅತಿವೃಷ್ಟಿಗೆ ಪರಿಹಾರವಿಲ್ಲ. ಯೂರಿಯಾ ಪೂರೈಸಲು ಸರ್ಕಾರದಿಂದ ಆಗುತ್ತಿಲ್ಲ. ರೈತರಿಗೆ ಯಾವುದೇ ಸೌಲಭ್ಯಗಳು ಸಕಾಲಿಕವಾಗಿ ಸಿಗುತ್ತಿಲ್ಲ. ಅಧಿಕಾರಿಗಳ ದಿವ್ಯ ಮೌನದ ಹಿಂದೆ ಸರ್ಕಾರದ ವೈಫಲ್ಯವಿದೆ. ಇದೆಲ್ಲ ಸರಿಯಾಗದಿದ್ದರೆ ಹೋರಾಟವೇ ಅನಿವಾರ್ಯ ಎಂದು ಎಚ್ಚರಿಸಿದರು.
ನಿವೃತ್ತ ಉಪನ್ಯಾಸಕ, ರೈತ ಸಂಘದ ಮುಖಂಡ ಎಚ್.ಎಚ್.ಮುಲ್ಲಾ ನರಗುಂದ ರೈತ ಬಂಡಾಯದ ಇತಿಹಾಸ ತಿಳಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ, ಪ್ರಮುಖರಾದ ಅಡಿವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ಮಾಲತೇಶ ಪೂಜಾರ, ಸುರೇಶಗೌಡ ಪಾಟೀಲ, ಪ್ರೇಮಾ ಪೂಜಾರ, ಮಹೇಶ ವಿರುಪಣ್ಣನವರ, ಜಯಣ್ಣ ವಾಸನ, ರುದ್ರಗೌಡ ಕಾಡನಗೌಡ್ರ, ಸುರೇಶ ಹೊನ್ನಪ್ಪನವರ, ದಿಳ್ಳೆಪ್ಪ ಮಣ್ಣೂರ, ಪರಸಪ್ಪ ಮಡಿವಾಳರ, ರಾಜು ತರ್ಲಘಟ್ಟ, ಚನ್ನಪ್ಪ ಮರಡೂರ, ಶಂಕ್ರಣ್ಣ ಶಿರಗಂಬಿ, ಪ್ರಭಣ್ಣ ಪ್ಯಾಟಿ, ರುದ್ರಪ್ಪ ಹಣ್ಣಿ, ಮಹಮದ್ಗೌಸ ಪಾಟೀಲ, ಶಿವಬಸಪ್ಪ ಗೋವಿ, ಶಂಕರಗೌಡ ಶಿರಗಂಬಿ, ಮುತ್ತಣ್ಣ ಗುಡಗೇರಿ ಮತ್ತು ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.