ADVERTISEMENT

ಬೆಳೆ ನಷ್ಟ: ಎನ್‌ಡಿಆರ್‌ಎಫ್‌ ನಿಧಿಯಿಂದ ರೈತರಿಗೆ ಪರಿಹಾರ –ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 15:27 IST
Last Updated 18 ನವೆಂಬರ್ 2021, 15:27 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ    

ಹಾವೇರಿ: ನಿರಂತರ ಮಳೆಯಿಂದ ರಾಜ್ಯದ ವಿವಿಧೆಡೆ ಬೆಳೆ ನಷ್ಟವಾಗಿದೆ. ಕೂಡಲೇ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ರೈತರಿಗೆ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಶುಕ್ರವಾರದಿಂದ ಅತಿವೃಷ್ಟಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸುತ್ತೇನೆ. ಹಾವೇರಿ, ಹೊಸಪೇಟೆ, ಹೂವಿನಹಡಗಲಿ ಕಡೆ ಭತ್ತದ ಬೆಳೆ ಹೆಚ್ಚು ನಷ್ಟವಾಗಿದೆ. ಇದಕ್ಕೂ ಪರಿಹಾರ ನೀಡಲಾಗುವುದು ಎಂದರು.

ರಾಜ್ಯದ ಸೂರ್ಯಕಾಂತಿ ಬೀಜದ ಅಭಾವ ಕಂಡುಬಂದಿದೆ. ಆದರೆ, ರೈತರು ಅಂಗಡಿಯಲ್ಲಿ ಸಿಗುವ ನಕಲಿ ಬಿತ್ತನೆ ಬೀಜವನ್ನು ಖರೀದಿಸಬಾರದು. ಇದರಿಂದ ಬೆಳೆ ನಷ್ಟವಾದರೆ ರೈತರಿಗೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಪರವಾನಗಿ ಹೊಂದಿದ ಮಾರಾಟಗಾರರಿಂದ ಬೀಜ ಖರೀದಿಸಿ, ಕಡ್ಡಾಯವಾಗಿ ಬಿಲ್‌ ಪಡೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ಬಿಟ್ ಕಾಯಿನ್ ದಂಧೆಯಲ್ಲಿ ದಿ.ರಾಕೇಶ್ ಸಿದ್ದರಾಮಯ್ಯ ನಂಟು ಇರುವ ಬಗ್ಗೆ ಬಿಜೆಪಿ ಟ್ವೀಟ್ ಕುರಿತು ಮಾಧ್ಯಮದವರ ಪ್ರಶ್ನೆಗೆ, ‘ಇದ್ದಿರಬಹುದು, ಇಲ್ಲ ಅಂತಾ ಹೇಳೋಕೆ ಸಾಧ್ಯವಿಲ್ಲ. ಈ ಹುಡುಗರು ಯಾರ ಜೊತೆ ಯಾವ ಸಂಬಂಧ ಇಟ್ಟುಕೊಂಡಿರ್ತಾರೆ ಏನೇನು ಮಾಡಿರುತ್ತಾರೆ ಅಂತಾ ಹೇಳೋದು ಕಷ್ಟ. ಟ್ವೀಟ್ ಮಾಡಿರೋರಿಗೆ ಗೊತ್ತಿರುತ್ತೆ. ಯಾರ‍್ಯಾರು ಮಾಡಿರುತ್ತಾರೆ ಅಂತ ಎಂದು ಬಿ.ಸಿ.ಪಾಟೀಲ ಅವರು ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.