ADVERTISEMENT

ಬಂಗಾರಪೇಟೆ: ಹೊಲಗಳಿಗೆ 28 ಆನೆಗಳ ಲಗ್ಗೆ, ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 8:32 IST
Last Updated 30 ಜನವರಿ 2020, 8:32 IST
ಬಂಗಾರಪೇಟೆ ತಾಲ್ಲೂಕಿನ ಪಚ್ಚಾರ್ಲಹಳ್ಳಿ ಬಳಿ ಆನೆಗಳು ಗಡ್ಡೆ ಕೋಸಿನ ತೋಟ ನಾಶ ಪಡಿಸಿರುವುದು (ಎಡಚಿತ್ರ) ಪಚ್ಚಾರ್ಲಹಳ್ಳಿಯ ಇನ್ನೊಂಡು ಕಡೆ ಆನೆಗಳು ನಾಶ ಮಾಡಿರುವ ಟೊಮೆಟೊ ಬೆಳೆ
ಬಂಗಾರಪೇಟೆ ತಾಲ್ಲೂಕಿನ ಪಚ್ಚಾರ್ಲಹಳ್ಳಿ ಬಳಿ ಆನೆಗಳು ಗಡ್ಡೆ ಕೋಸಿನ ತೋಟ ನಾಶ ಪಡಿಸಿರುವುದು (ಎಡಚಿತ್ರ) ಪಚ್ಚಾರ್ಲಹಳ್ಳಿಯ ಇನ್ನೊಂಡು ಕಡೆ ಆನೆಗಳು ನಾಶ ಮಾಡಿರುವ ಟೊಮೆಟೊ ಬೆಳೆ   

ಬಂಗಾರಪೇಟೆ (ಕೋಲಾರ): ತಾಲ್ಲೂಕಿನ ಕಾಡಂಚಿನಲ್ಲಿ ಕೆಲ ವಾರದಿಂದ ಬೀಡುಬಿಟ್ಟಿರುವ ಆನೆ ಹಿಂಡು ಬುಧವಾರ ಮುಂಜಾನೆ ಬೂದಿಕೋಟೆ ಹೋಬಳಿ ವ್ಯಾಪ್ತಿಯ ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡಿದೆ.

ಪಚ್ಚಾರ್ಲಹಳ್ಳಿ ಗ್ರಾಮದ ಮುನಿಕೃಷ್ಣ ಅವರ ತೋಟದಲ್ಲಿ ಸುಮಾರು 35 ಮಾವಿನ ಮರಗಳನ್ನು ಮುರಿದಿವೆ. ರಾದಪ್ಪ ಎಂಬುವರ ಒಂದು ಎಕರೆ ಟೊಮೆಟೊ ತೋಟ, ಚಂದ್ರಪ್ಪ ಅವರ ಅರ್ಧ ಎಕರೆ ಫಾರಂ ಹುಲ್ಲನ್ನು ತುಳಿದುಹಾಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಮೀಪದ ಉಪಾಸಪುರ ಗ್ರಾಮದ ಕೃಷ್ಣಾ ಹಾಗೂ ನಾರಾಯಣಸ್ವಾಮಿ ಕಟಾವು ಮಾಡಿಟ್ಟಿದ್ದ ರಾಗಿಯನ್ನು ತಿಂದು ಚಲ್ಲಾಪಿಲ್ಲಿ ಮಾಡಿವೆ. ಮುನಿಲಕ್ಷ್ಮಮ್ಮ ಅವರ ಬಾಳೆ ಗಿಡಗಳನ್ನು ತುಳಿದು ಹಾಕಿದ್ದು, ಗೊನೆಗಳನ್ನು ತಿಂದಿವೆ. ಕೃಷ್ಣಪ್ಪ ಅವರ ಹುಣಸೆ ಮರದ ರೆಂಬೆಗಳನ್ನು ಮುರಿದಿವೆ ಎಂದು ಕೃಷ್ನಾ ಅವರು ತಿಳಿಸಿದ್ದಾರೆ.

ADVERTISEMENT

ಪಚ್ಚಾರ್ಲಹಳ್ಳಿ ಗ್ರಾಮದ ಮುನಿರಾಜು ಅವರ ಎರಡು ಎಕರೆ ರಾಗಿ ಕೃಷ್ಣಪ್ಪ ಅವರ ಎಲೆಕೋಸು ಹಾಗೂ ಹನಿ ನೀರಾವರಿಗೆ ಅಳವಡಿಸಿದ್ದ ಪಿವಿಸಿ ಪೈಪ್‌ಗಳನ್ನು ಕೆಡವಿ ತುಂಡರಿಸಿವೆ. ಚಿಂತಗುಮ್ಮನಹಳ್ಳಿ ಗ್ರಾಮದ ಕಮಲಮ್ಮ ಅವರ ಟೊಮೆಟೊ ತುಳಿದಿವೆ.

'ತಮಿಳುನಾಡಿನತ್ತ ಇದ್ದ ಸುಮಾರು 28ಕ್ಕೂ ಹೆಚ್ಚು ಆನೆಗಳು ಮಂಗಳವಾರ ರಾತ್ರಿ ಬೂದಿಕೋಟೆ ಹೊಲಗದ್ದೆಗಳಿಗೆ ನುಗ್ಗಿದೆ. ಬುಧವಾರ ಸಂಜೆ ಅವು ಮಾಲೂರು ತಾಲ್ಲೂಕಿನ ಸೊರಕಾಯಲಹಳ್ಳಿ ಬಳಿ ಕಂಡುಬಂದಿವೆ. ಎರಡು ಆನೆಗಳು ಮಾತ್ರ ಕನಮನಹಳ್ಳಿ ಬಳಿಯಿದೆ. ಅವನ್ನು ಹಿಮ್ಮಟ್ಟಿಸುವ ಕಾರ್ಯಾಚರಣೆ ನಡೆದಿದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಶ್ ಕುಮಾರ್ ತಿಳಿಸಿದ್ದಾರೆ.

ಮೂರ್ನಾಲ್ಕು ವರ್ಷದ ಹಿಂದೆ ವರ್ಷಕ್ಕೆ ಏಳೆಂಟು ಬಾರಿ ಬಂದು ಹೋಗುತ್ತಿದ್ದ ಆನೆಗಳು ಈಗ ತಿಂಗಳಿಗೆ ನಾಲ್ಕೈದು ಬಾರಿ ಕಾಡಂಚಿನ ಹೊಲಗದ್ದೆಗಳಿಗೆ ಲಗ್ಗೆಯಿಡುತ್ತಿವೆ. ಹೊಲದಲ್ಲಿ ಬೆಳೆದ ಪಸಲು ಮನೆಗೆ ಬರುವುದು ಕಾತರಿಯಿಲ್ಲವಾಗಿದೆ. ರೈತರಿಗೆ ತೀರ ನಷ್ಟು ಉಂಟಾಗುತ್ತಿದ್ದು, ಈ ಭಾಗದ ರೈತರ ಸಮಸ್ಯೆ ಕೇಳುವವರೇ ಇಲ್ಲವಾಗಿದೆ ಎನ್ನುವುದು ರೈತರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.