ಕೆಜಿಎಫ್: ರಾಬರ್ಟಸನ್ಪೇಟೆ ನಗರಸಭೆ ಸುಪರ್ದಿಯಲ್ಲಿರುವ ಕ್ರೀಡಾಂಗಣ ಅವ್ಯವಸ್ಥೆಗಳ ಗೂಡಾಗಿದ್ದು, ಕ್ರೀಡಾಪಟುಗಳಿಗೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ.
ಶಾಸಕ ಎಸ್.ರಾಜೇಂದ್ರನ್ ಅವಧಿಯಲ್ಲಿ ನಗರಸಭೆ ಮೈದಾನವನ್ನು ಕ್ರೀಡಾಂಗಣವನ್ನಾಗಿ ಮಾಡಲಾಗಿತ್ತು. ಎರಡು ಭಾಗದಲ್ಲಿ ಕಟ್ಟಡ ನಿರ್ಮಿಸಿ ಪ್ರೇಕ್ಷಕರು ಕುಳಿತುಕೊಳ್ಳಲು ಅನುಕೂಲ ಮಾಡಿಕೊಡಲಾಗಿತ್ತು. ಅದಕ್ಕೆ ಹೊಂದಿಕೊಂಡ ಹಿಂದಿನ ಪ್ರದೇಶದಲ್ಲಿನ ಅಂಗಡಿಗಳನ್ನು ನಗರಸಭೆ ಬಾಡಿಗೆಗೆ ನೀಡಿತ್ತು. ನಂತರ ಕೆ.ಎಚ್.ಮುನಿಯಪ್ಪ ಸಂಸದರಾಗಿದ್ದಾಗ ಹೋಂಡಾ ಕಂಪನಿಯ ಸಿಎಸ್ಆರ್ ನಿಧಿಯಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣವನ್ನು ಆಧುನೀಕರಣಗೊಳಿಸಲಾಯಿತು. ನಂತರ ಮುಂದಿನ ಉಸ್ತುವಾರಿಯನ್ನು ನಗರಸಭೆಗೆ ನೀಡಿತು.
ನಗರಸಭೆ ಆಧುನಿಕ ಕ್ರೀಡಾಂಗಣದ ಸವಲತ್ತುಗಳನ್ನು ಕ್ರೀಡಾಪಟುಗಳಿಗೆ ನೀಡುವ ಕಾರ್ಯದಿಂದ ವಿಮುಖವಾಯಿತು. ಟ್ರಾಕ್ ನಿರ್ಮಾಣವಾಗಲೇ ಇಲ್ಲ. ಸಣ್ಣ ಮಳೆ ಬಂದರೂ ಈಡೀ ಕ್ರೀಡಾಂಗಣ ಕೆಸರು ಮಯವಾಗುತ್ತದೆ. ನೀರು ಹೊರಗೆ ಹೋಗಲು ಸೌಲಭ್ಯವಿಲ್ಲ. ಹಾಗಾಗ ನಡೆಯುವ ಕ್ರೀಡೆಗಳಿಗೆ ಮತ್ತು ಸಂಜೆ ಹಾಗೂ ಮುಂಜಾನೆ ವಾಯುವಿಹಾರಕ್ಕೆ ಬರುವವರಿಗೆ ಸೂಕ್ತ ವ್ಯವಸ್ಥೆಗಳಿಲ್ಲ.
ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಿದ್ದರೂ, ಶೌಚಾಲಯ ಬಾಗಿಲು ತೆಗೆಯುವುದೇ ಇಲ್ಲ. ಅಕಸ್ಮಾತ್ ತೆಗೆದರೂ ಅದನ್ನು ಉಪಯೋಗಿಸಲಾಗದಷ್ಟು ಅಶುಚಿತ್ವವಿದೆ. ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯೂ ಇಲ್ಲದಂತಾಗಿದೆ.
ಈಚೆಗೆ ಶಾಲಾ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರೀಡಾಂಗಣದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಹೆಣ್ಣು ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಹೋಗಿದ್ದಾರೆ. ಗಂಡು ಮಕ್ಕಳು ಶೌಚಕ್ಕೆ ಬಯಲನ್ನು ಆಶ್ರಯಿಸಿದ್ದಾರೆ. ಇದನ್ನು ಪೋಷಕರು ಪಶ್ನಿಸಿದ್ದಕ್ಕೆ ಮಧ್ಯಾಹ್ನನ ನಂತರ ಶೌಚಾಲಯ ಬಾಗಿಲು ತೆರೆದು ನೀರಿನ ವ್ಯವಸ್ಥೆ ಮಾಡಿದ್ದಾರೆ.
ಶೌಚಾಲಯದಲ್ಲಿನ ಕಮೋಡ್ಗಳನ್ನು ಕ್ರೀಡಾಂಗಣಕ್ಕೆ ಬಂದವರು ಒಡೆದು ಹಾಕುತ್ತಾರೆ. ಕಿಡಿಗೇಡಿಗಳು ಪೆವಿಲಿಯನ್ನಲ್ಲಿ ಕಲ್ಲುಗಳನ್ನು ಹಾಕುತ್ತಾರೆ. ಇದರಿಂದ ಎಷ್ಟೇ ಪ್ರಯತ್ನ ಪಟ್ಟರೂ ಕ್ರೀಡಾಂಗಣವನ್ನು ಸ್ವಚ್ಛವಾಗಿಡಲು ಸಾಧ್ಯವಾಗುತ್ತಿಲ್ಲ ಎಂಬುದು ನಗರಸಭೆ ಸಿಬ್ಬಂದಿ ಮಾತಾಗಿದೆ.
ಕ್ರೀಡಾಂಗಣವನ್ನು ಕಾರ್ಯಕ್ರಮಕ್ಕೆ ತೆಗೆದುಕೊಳ್ಳುವವರಿಗೆ ಏನೇ ಸಹಾಯ ಕೇಳಿದರೂ ನಗರಸಭೆಯಿಂದ ಮಾಡಿಕೊಡಲಾಗುತ್ತದೆ.ಆಂಜನೇಯಲು ನಗರಸಭೆ ಆಯುಕ್ತ
ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡೆಗೆಂದೇ ಕ್ರೀಡಾಂಗಣ ನಿರ್ಮಿಸಲಾಗಿದೆ. ನಮ್ಮ ತಾಲ್ಲೂಕಿನಲ್ಲಿ ಮಾತ್ರ ಕ್ರೀಡಾಂಗಣ ಇಲ್ಲ.ದೀವು ಕ್ರೀಡಾ ತರಬೇತುದಾರ
ಕ್ರೀಡಾಂಗಣದಲ್ಲಿ ಶೌಚಾಲಯ ಸೌಲಭ್ಯ ಇಲ್ಲದ ಕಾರಣ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಬಳಸಿದೆವು.ದೀಪಾ ಕ್ರೀಡಾಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.