
ಮಂಡ್ಯ: ವಿದ್ಯುತ್ ಉತ್ಪಾದನಾ ಕೇಂದ್ರದ ಕೆನಾಲ್ಗೆ ಬಿದ್ದ ಕಾಡಾನೆ
ಮಳವಳ್ಳಿ (ಮಂಡ್ಯ): ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಲುವೆಗೆ ಕಾಡಾನೆಯೊಂದು ಬಿದ್ದಿದ್ದು, ಮೂರು ದಿನಗಳಿಂದ ಮೇಲೆ ಬರಲು ಸಾಧ್ಯವಾಗದೆ ಪರದಾಡುತ್ತಿದೆ.
ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಪೂರೈಕೆ ಮಾಡುವ ಸುಮಾರು 20 ಅಡಿ ಅಳದ ಕೆನಾಲ್ ಗೇಟ್ ಮೂಲಕ ಶನಿವಾರ ರಾತ್ರಿ ಕಾಡಾನೆಯೊಂದು ನೀರು ಕುಡಿಯಲು ಇಳಿದಿದೆ. ಆದರೆ, ನೀರಿನ ಹರಿವಿನ ರಭಸಕ್ಕೆ ವಾಪಸ್ ಕಾಲುವೆಯಿಂದ ಮೇಲೆ ಬರಲು ಸಾಧ್ಯವಾಗದೆ ಅದರೊಳಗೆ ಓಡಾಡುತ್ತಿದೆ.
ಭಾನುವಾರ ಬೆಳಿಗ್ಗೆ ಆನೆಯ ಓಡಾಟವನ್ನು ಗಮನಿಸಿದ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿ, ಆನೆ ವಾಪಸ್ ಹೋಗಬಹುದು ಎಂದು ಕಾದಿದ್ದಾರೆ. ಆದರೆ, ಭಾನುವಾರ ಸಂಜೆವರೆಗೂ ಕಾಡಾನೆ ಮೇಲೆ ಬರಲಿಲ್ಲ. ಆಗ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯು ಕಾಲುವೆಯಿಂದ ಮೇಲೆ ಬರುವಂತೆ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಸಂಜೆಯಾದರೂ ಆನೆಯು ಗೇಟ್ನಿಂದ ಹೊರಬರದ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯದಿಂದ ನೀರಿನ ಹರಿವಿನ ಪ್ರಮಾಣವನ್ನು ಕಡಿಮೆ ಮಾಡಲು ಜಿಲ್ಲಾಧಿಕಾರಿ ಕುಮಾರ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಆನೆಯು ಆಹಾರವಿಲ್ಲದೇ ಆತಂಕದಲ್ಲಿ ಇರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಬ್ಬು ತರಿಸಿ ಕಾಲುವೆಗೆ ಹಾಕಿದ್ದಾರೆ. ಆನೆಯ ಪ್ರಜ್ಞೆ ತಪ್ಪಿಸಿ ಕ್ರೇನ್ ಮೂಲಕ ಮೇಲೆತ್ತುವ ಪ್ರಯತ್ನಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಎರಡು ಕ್ರೇನ್ ಗಳನ್ನು ತರಲಾಗಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.
ರಹಸ್ಯ ಕಾರ್ಯಾಚರಣೆ: ಮಾಧ್ಯಮದವರಿಗೆ ನಿರ್ಬಂಧ
ಕಾಡಾನೆ ಕಾಲುವೆಗೆ ಬಿದ್ದು ಮೂರು ದಿನ ಕಳೆದರೂ ಆನೆಯನ್ನು ರಕ್ಷಿಸದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವುದನ್ನು ಮನಗಂಡ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಾಹಿತಿಯನ್ನು ಗೋಪ್ಯವಾಗಿ ಇಡಲು ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಕೆಲಸ ಮಾಡುವ ಸ್ಥಳೀಯ ಉದ್ಯೋಗಿಗಳಿಗೆ ರಜೆ ನೀಡಿ ಕಳುಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
‘ಕಾರ್ಯಾಚರಣೆ ಸ್ಥಳಕ್ಕೆ ತೆರಳಲು ಮುಂದಾದ ಸ್ಥಳೀಯರು ಹಾಗೂ ಕೆಲ ಮಾಧ್ಯಮದವರನ್ನು ಸಹ ಆನೆ ಬಿದ್ದಿರುವ ಕಾಲುವೆಯಿಂದ ಮೂರು ಕಿಲೋ ಮೀಟರ್ ದೂರದಲ್ಲಿಯೇ ಗೇಟ್ ಹಾಕಿ ತಡೆಯಲಾಗುತ್ತಿದೆ. ಮಾಧ್ಯಮದವರಿಗೂ ಸರ್ಮಪಕವಾದ ಮಾಹಿತಿ ನೀಡುತ್ತಿಲ್ಲ. ಇಂಥ ರಹಸ್ಯ ಕಾರ್ಯಾಚರಣೆ ಏಕೆ’ ಎಂದು ಮಲ್ಲಿಕ್ಯಾತನಹಳ್ಳಿಯ ರವಿ ಪ್ರಶ್ನಿಸಿದ್ದಾರೆ.
ಡಿಸಿಎಫ್ ರಘು ಪ್ರತಿಕ್ರಿಯೆ
‘ನಾನು ಕಾರ್ಯಾಚರಣೆ ಸ್ಥಳದಲ್ಲೇ ಇದ್ದೇನೆ. ನನಗೆ ಮಾಧ್ಯಮದವರಿಗೆ ಮಾಹಿತಿ ನೀಡುವುದಕ್ಕಿಂತ ಕಾರ್ಯಾಚರಣೆ ಮುಖ್ಯ. ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಲುವೆಗೆ ಇಳಿದಿರುವ ಕಾಡಾನೆ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ’ಮಂಡ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.