ADVERTISEMENT

ಮಡಿಕೇರಿ ದಸರಾಕ್ಕೆ ಚಾಲನೆ: ಶಕ್ತಿದೇವತೆಗಳ ಕರಗಕ್ಕೆ ಪೂಜೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 13:45 IST
Last Updated 7 ಅಕ್ಟೋಬರ್ 2021, 13:45 IST
ಶಕ್ತಿ ದೇವತೆಯ ಕರಗ ಹೊರಡಿಸುವ ಮೂಲಕ ಮಡಿಕೇರಿ ದಸರಾಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.
ಶಕ್ತಿ ದೇವತೆಯ ಕರಗ ಹೊರಡಿಸುವ ಮೂಲಕ ಮಡಿಕೇರಿ ದಸರಾಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.   

ಮಡಿಕೇರಿ: ಇಲ್ಲಿನ ಬನ್ನಿಮಂಟಪದ ಪಂಪಿನಕೆರೆಯ ಬಳಿ ಗುರುವಾರ ಸಂಜೆ ನಾಲ್ಕು ಶಕ್ತಿದೇವತೆಗಳ ಕರಗಕ್ಕೆ ಪೂಜೆ ಸಲ್ಲಿಸಿ ಮಡಿಕೇರಿ ದಸರಾಕ್ಕೆ ಚಾಲನೆ ನೀಡಲಾಯಿತು.

ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ಕುಂದೂರು ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮನ ಕರಗೋತ್ಸವದ ನಗರ ಪ್ರದಕ್ಷಿಣೆ ಸಹ ಆರಂಭವಾಯಿತು. ರಸ್ತೆಬದಿಯಲ್ಲಿ ನಿಂತಿದ್ದ ಭಕ್ತರು ನಮಿಸಿದರು. ಒಂಬತ್ತು ದಿನಗಳ ಕಾಲ, ಕರಗಗಳು ಮನೆ ಮನೆ ಸಂಚಾರ ಮಾಡಲಿವೆ.

ಕೋವಿಡ್‌ ಕಾರಣಕ್ಕೆ ಸರಳವಾಗಿ ದಸರಾ ನಡೆಯುತ್ತಿದ್ದು ಈ ವರ್ಷವೂ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ಕ್ರೀಡಾಕೂಟ ಹಾಗೂ ಕವಿಗೋಷ್ಠಿ ರದ್ದುಗೊಂಡಿವೆ. ವಿಜಯದಶಮಿ ದಿನ ರಾತ್ರಿ ವಿವಿಧ ದೇವಸ್ಥಾನಗಳ ಮಂಟಪಗಳ ಮೆರವಣಿಗೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಜನರು ಸೇರುವಂತಿಲ್ಲ ಎಂದು ಜಿಲ್ಲಾಡಳಿತ ಸೂಚಿಸಿದೆ.

‘ಕೋವಿಡ್‌ ಸಾಂಕ್ರಾಮಿಕ ಕಾಯಿಲೆಯು ಸತತ ಎರಡನೇ ವರ್ಷವೂ ದಸರಾ ಸಂಭ್ರಮ ಕಸಿದುಕೊಂಡಿದೆ. ಕರಗೋತ್ಸವವನ್ನು ಯಾವ ಕಾರಣಕ್ಕೂ ಸ್ಥಗಿತ ಮಾಡುವಂತಿಲ್ಲ. ಬಹಳ ಹಿಂದೆ ನಗರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿತ್ತು. ರೋಗ ನಿವಾರಣೆಗೆ ಕರಗ ಹೊರಡಿಸುವಂತೆ ಧಾರ್ಮಿಕರ ಮುಖಂಡರು ಸಲಹೆ ನೀಡಿದ್ದರು. ಅಂದಿನಿಂದ ಕರಗ ಕರಗೋತ್ಸವ ಆರಂಭವಾಯಿತು’ ಎಂದು ನಗರ ಸತೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.