ಕಾಂಗ್ರೆಸ್ ಪಕ್ಷವು ಮೈಸೂರಿನಿಂದ ಆಯೋಜಿಸಿದ್ದ ಧರ್ಮಸ್ಥಳ ಯಾತ್ರೆಗೆ ಶಾಸಕರಾದ ಕೆ. ಹರೀಶ್ ಗೌಡ ಹಾಗೂ ತನ್ವೀರ್ ಸೇಠ್ ಚಾಲನೆ ನೀಡಿದರು– ಪ್ರಜಾವಾಣಿ ಚಿತ್ರ
ಮೈಸೂರು: ‘ನನ್ನ ಜಾತಿ, ಶಾಸಕ ಕೆ.ಹರೀಶ್ಗೌಡರ ಜಾತಿ ಯಾವುದು ಎಂಬುದು ಮುಖ್ಯವಲ್ಲ, ಸೌಹಾರ್ದಯುತವಾಗಿ ಬದುಕುವುದು ಮುಖ್ಯ’ ಎಂದು ಶಾಸಕ ತನ್ವೀರ್ ಸೇಠ್ ಪ್ರತಿಪಾದಿಸಿದರು.
ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಸಮಿತಿಯು ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಬುಧವಾರ ಆಯೋಜಿಸಿದ್ದ ಧರ್ಮಸ್ಥಳ ಕ್ಷೇತ್ರ ಯಾತ್ರೆ ಉದ್ಘಾಟಿಸಿ ಮಾತನಾಡಿದರು.
‘ಹಿಂದೂ, ಮುಸ್ಲಿಮರು ಭಾವೈಕ್ಯತೆಯಿಂದ ಇದ್ದಾರೆ. ಆದರೆ, ಈ ವಿಚಾರದಲ್ಲಿ ರಾಜಕಾರಣ ಸಲ್ಲದು. ಬಿಜೆಪಿ ಸಾವಿನ ಮನೆಯಲ್ಲಿ ಬೆಂಕಿ ಕಾಯಿಸುವ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.
‘ಧರ್ಮಸ್ಥಳ ಕ್ಷೇತ್ರದ ಕೋಟ್ಯಂತರ ಭಕ್ತರ ಭಾವನೆಗಳಿಗೆ ಘಾಸಿ ಮಾಡಬಾರದು. ಈಗ ಯಾತ್ರೆ ಆರಂಭಿಸಿರುವುದು ರಾಜಕೀಯವಲ್ಲ. ಇದರಿಂದ ತನಿಖೆ ಮೇಲೆ ಪರಿಣಾಮವಾಗದು’ ಎಂದರು.
ಶಾಸಕ ಕೆ.ಹರೀಶ್ ಗೌಡ ಅವರು, ‘ಎಲ್ಲಾ ಜಾತಿ ಧರ್ಮದ ಜನ ಒಟ್ಟಾಗಿ ಈ ಯಾತ್ರೆ ಮಾಡುತ್ತಿದ್ದೇವೆ. ನಾವು ದೇವಸ್ಥಾನ, ಮಸೀದಿಗಳಿಗೆ ಹೋಗುತ್ತೇವೆ. ನಮಗೆ ಭೇದ–
ಭಾವವಿಲ್ಲ’ ಎಂದು ಹೇಳಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಯಾರ ಪರ?
ಮಡಿಕೇರಿ: ‘ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಧರ್ಮಸ್ಥಳ ಪ್ರಕರಣದಲ್ಲಿ ಯಾರ ಪರ ಇದ್ದಾರೆ?’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ಕುಮಾರ್ ಸೊರಕೆ ಪ್ರಶ್ನಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ತನಿಖೆ ಭಾಗವಾಗಿ 13 ಕಡೆ ಅಗೆಯುವವರೆಗೆ ಬಿಜೆಪಿಯವರು ಸುಮ್ಮನಿದ್ದರು. ಈಗ ಬಿ.ಎಲ್.ಸಂತೋಷ್ ಅವರು ಧರ್ಮಸ್ಥಳದ ಪಾವಿತ್ರ್ಯ ಉಳಿಸಿ ಎಂದು ಹೋರಾಟಕ್ಕಿಳಿದಿದ್ದಾರೆ. ಹಾಗಾದರೆ ಇದು ಪ್ರಭಾಕರ್ ಭಟ್ ಹಾಗೂ ಬಿ.ಎಲ್.ಸಂತೋಷ್ ನಡುವಿನ ಹೋರಾಟವಾ ಎಂದರು.
ಜೆಡಿಎಸ್ –ಬಿಜೆಪಿ ಪ್ರತ್ಯೇಕ ಪಕ್ಷಗಳು. ಅವರವರ ಹೋರಾಟ ಅವರದ್ದು. ಧರ್ಮಸ್ಥಳದ ವಿಚಾರದಲ್ಲಿ ಪ್ರತ್ಯೇಕ ಹೋರಾಟ ನಡೆಸಿದರೂ ನಾವು ಒಟ್ಟಿಗೇ ಇದ್ದೇವೆ ಬಿಟ್ಟುಕೊಟ್ಟಿಲ್ಲ.–ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.