ಮೈಸೂರು: ‘ಯುವ ಸಮೂಹ ಕೌಶಲ ವೃದ್ಧಿಸಿಕೊಳ್ಳುವ ಜೊತೆಗೆ ಹೊಸ ಚಿಂತನೆ ಅಭಿವ್ಯಕ್ತಿಸಬೇಕು’ ಎಂದು ಎಚ್ಎಸ್ಎ ಇಂಡಿಯಾದ ಹಣಕಾಸು ಮತ್ತು ಆಡಳಿತ ವಿಭಾಗದ ಮುಖ್ಯಸ್ಥೆ ಉಷಾ ಸುಬ್ರಮಣಿಯನ್ ಹೇಳಿದರು.
ಮಾನಸಗಂಗೋತ್ರಿಯ ಸಮಾಜ ಕಾರ್ಯ ವಿಭಾಗ, ಹ್ಯಾನ್ಸ್ ಸೀಡೆಲ್ ಫೌಂಡೇಷನ್ (ಎಚ್ಎಸ್ಎ) ಹಾಗೂ ಗ್ರಾಸ್ರೂಟ್ಸ್ ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್ಮೆಂಟ್ (ಜಿಆರ್ಎಎಎಂ) ಅಂತರರಾಷ್ಟ್ರೀಯ ಯುವ ದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.
ತಂತ್ರಜ್ಞಾನ ಬೆನ್ನತ್ತಿ ಹೋಗುತ್ತಿರುವ ಯುವ ಸಮೂಹದಲ್ಲಿ ಹೊಸತನದ ಆಲೋಚನೆ, ಚಿಂತನೆಗಳಿದ್ದು, ಇವುಗಳನ್ನು ಅಭಿವ್ಯಕ್ತಿಸಲು ಸರಿಯಾದ ವೇದಿಕೆ ಸಿಗಬೇಕಿದೆ ಎಂದರು.
ಯುವಕರಿಗೆ ಉನ್ನತ ಶಿಕ್ಷಣ ಪಡೆದು ವಿದೇಶಗಳಲ್ಲಿ ಹೆಚ್ಚಿನ ಶಿಕ್ಷಣ, ಉದ್ಯೋಗಾವಕಾಶ ಮಾಡಲು ಸಾಕಷ್ಟು ಅವಕಾಶಗಳಿವೆ. ಆದರೂ ಕೆಲವು ಯುವಕರು ಜಿಆರ್ಎಎಎಂ ಸಂಸ್ಥೆ ಮೂಲಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.
ಜಿಆರ್ಎಎಎಂ ಕಾರ್ಯನಿರ್ವಾಹಕ ನಿರ್ದೇಶಕ ಬಸವರಾಜು ಆರ್.ಶ್ರೇಷ್ಠ ಮಾತನಾಡಿ, ದೇಶದಲ್ಲಿ ಶೇ 27ರಷ್ಟು ಯುವಕರು ಮಾತ್ರ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಉಳಿದ ಶೇ 63ರಷ್ಟು ವಿದ್ಯಾರ್ಥಿಗಳಿಗೆ ಆರ್ಥಿಕ, ಸಾಮಾಜಿಕವಾಗಿ ಸಮಸ್ಯೆಯಿಂದ ಅವಕಾಶ ದೊರೆತಿಲ್ಲ. ದೇಶದಲ್ಲಿ 75 ಕೋಟಿಗೂ ಅಧಿಕ ಯುವ ಸಮುದಾಯವಿದ್ದು, ಇವರಿಂದ ನವ ಭಾರತ ನಿರ್ಮಾಣ ಸಾಧ್ಯವಿದೆ’ ಎಂದರು.
ಯುವಕರ ಅಭಿವೃದ್ಧಿ ವರದಿ ಸೂಚ್ಯಂಕದ ಪ್ರಕಾರ, ಯುವಕರ ಸಾಮಾಜಿಕ ಭಾಗಹಿಸುವಿಕೆ ಶೇ 4 ಹಾಗೂ ರಾಜಕೀಯವಾಗಿ ಭಾಗವಿಸುವಿಕೆ ಶೇ 1ರಷ್ಟಿದೆ ಎಂದು ತಿಳಿಸಿದರು.
ಜಿಆರ್ಎಎಎಂನ ಅಕ್ಷತಾ ಮತ್ತು ಧನರಾಜ್ಗೌಡ ಸಂವಾದ ನಡೆಸಿಕೊಟ್ಟರು. ರಸಪ್ರಶ್ನೆ, ಪೋಸ್ಟರ್ ಪ್ರಸೆಂಟೇಷನ್, ನಾಗರಿಕ ಪತ್ರಕರ್ತರ ವಿಡಿಯೊ ಪ್ಲೇ ಹಾಗೂ ಸಾಮಾಜಿಕ ಸಂದೇಶವುಳ್ಳ ಬೀದಿ ನಾಟಕ ಪ್ರದರ್ಶನ ನಡೆಯಿತು. ಮೈಸೂರಿನ 10ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿ ತಂಡ ಭಾಗವಹಿಸಿದ್ದವು.
ಪತ್ರಕರ್ತ ಕೀರ್ತಿ ಕೋಲ್ಗರ್, ಸಂಕಲ್ಪ ಸಮೂಹ ನಿರ್ದೇಶಕ ನಿಖಿಲ್ ಜಗದೀಶ್, ಮಾನಸಗಂಗೋತ್ರಿ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಚಂದ್ರವೌಳಿ, ಪ್ರಾಧ್ಯಾಪಕಿ ಎಚ್.ಪಿ. ಜ್ಯೋತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.