
ಮೈಸೂರು: ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹಾಗೂ ಸೈಬರ್ ಭದ್ರತೆ ವಿಷಯಗಳು ಭವಿಷ್ಯದಲ್ಲಿ ಡಿಜಿಟಲ್ ತಂತ್ರಜ್ಞಾನದ ಅವಳಿ ಸ್ತಂಭಗಳಂತೆ ರೂಪುಗೊಳ್ಳುತ್ತವೆ’ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಜಿ. ಹೇಮಂತ್ ಕುಮಾರ್ ಹೇಳಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ವಿಜ್ಞಾನ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ತಂತ್ರಜ್ಞಾನದಲ್ಲಿ ಉದ್ಯಮದ ಪ್ರಸ್ತುತತೆ: ಸೈಬರ್ ಭದ್ರತೆ, ಎಐ ಮತ್ತು ವೆಬ್ ಡೆವಲಪ್ಮೆಂಟ್’ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಎಐನಿಂದ ಉದ್ಯೋಗ ನಷ್ಟವಾಗಲಿದೆ ಎಂಬುದು ವಿದ್ಯಾರ್ಥಿಗಳ ಆತಂಕ. ಆದರೆ ಈ ಭಯ ಬಿಟ್ಟು ನಾವೀನ್ಯತೆ ಬೆಳೆಸಿಕೊಳ್ಳಲು ಗಮನ ನೀಡಬೇಕು. ಡ್ರೋನ್ ಡೆಲಿವರಿ, ಕ್ಯಾಂಪಸ್ ಕ್ಲೀನಿಂಗ್ ರೋಬೋಟ್, ಕೃಷಿಗೆ ಸ್ಮಾರ್ಟ್ ಡ್ರೋನ್ಗಳಂತಹ ನವೀನ ಆಲೋಚನೆಗಳನ್ನು ರೂಪಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
‘ಎಐ ಹೊಸ ತಂತ್ರಜ್ಞಾನವಲ್ಲ. ಅದು ದಶಕಗಳ ಹಿಂದೆಯೇ ಸಂಶೋಧನಾ ಹಂತದಲ್ಲಿ ಇತ್ತು. ಆದರೆ ವೇಗವಾದ ಪ್ರೊಸೆಸರ್ಗಳು ಮತ್ತು ದೊಡ್ಡ ಪ್ರಮಾಣದ ಡೇಟಾ ಸಂಗ್ರಹಣಾ ಸಾಮರ್ಥ್ಯ ಬೆಳವಣಿಗೆಯಿಂದ ಈಗ ಅದು ವ್ಯಾಪಕವಾಗಿ ಬಳಕೆಗೆ ಬಂದಿದೆ. ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಶೇ 40ರಷ್ಟು ಯುವಜನರು ಇದ್ದು, ಈ ಯುವ ಬುದ್ಧಿಮತ್ತೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ವಿಶ್ವ ಮಟ್ಟದಲ್ಲಿ ನಾಯಕತ್ವ ಸಾಧಿಸಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ, ‘ಸೈಬರ್ ಸುರಕ್ಷತೆಯನ್ನು ಕಲಿಯುವುದರಿಂದ ಆನ್ಲೈನ್ ಬೆದರಿಕೆಗಳಿಂದ ಡೇಟಾ ಮತ್ತು ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಹ್ಯಾಕಿಂಗ್ ಮತ್ತು ಮಾಲ್ವೇರ್ನಂತಹ ಸೈಬರ್ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸದೃಢವಾದ ವೃತ್ತಿ ಅವಕಾಶಗಳನ್ನು ಸಹ ನೀಡುತ್ತದೆ’ ಎಂದು ತಿಳಿಸಿದರು.
ಪ್ರಾಂಶುಪಾಲ ಎಂ. ಪ್ರಭು, ‘ಅಮೆರಿಕದ ಸಂಸ್ಥೆಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾಗಿ ಮಾರ್ಪಟ್ಟಿವೆ. ಟೆಕ್ಸಾಸ್ ಮತ್ತು ನ್ಯೂಯಾರ್ಕ್ನಂತಹ ಬಹು ದೊಡ್ಡ ವಾಣಿಜ್ಯ ನಗರಗಳಲ್ಲಿ ದತ್ತಾಂಶ ಕೇಂದ್ರಗಳಿಗೆ ಬೃಹತ್ ಪ್ರಮಾಣದಲ್ಲಿ ಹೂಡಿಕೆಯನ್ನು ಮಾಡುತ್ತಿವೆ. ಈ ಸಂಸ್ಥೆಗಳ ಕ್ಲೌಡ್ ಉಪಕರಣಗಳು ಫಾರ್ಚೂನ್- 10ರ ಹೆಚ್ಚಿನ ಭಾಗಕ್ಕೆ ಶಕ್ತಿ ತುಂಬುತ್ತಿವೆ’ ಎಂದು ಮಾಹಿತಿ ನೀಡಿದರು.
ವಿಭಾಗದ ಮುಖ್ಯಸ್ಥ ವಿದ್ಯಾಶಂಕರ ಇದ್ದರು.
ಯಶಸ್ವಿ ವ್ಯಕ್ತಿಗಳನ್ನು ಕೃತಕ ಬುದ್ಧಿಮತ್ತೆ ಬದಲಾಯಿಸುವುದಿಲ್ಲ. ಎಐ ಬಳಸುವವರು ಹೆಚ್ಚು ವೇಗವಾಗಿ ಯಶಸ್ವಿಯಾಗುತ್ತಾರೆಜಿ. ಹೇಮಂತ್ಕುಮಾರ್ ವಿಶ್ರಾಂತ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.