ADVERTISEMENT

ಹುಣಸೂರು ಹೊರ ವಲಯದ ಗುಜರಿಯಲ್ಲಿ ಅಕ್ರಮ ದಾಸ್ತಾನು: 1,300 ಚೀಲ ಯೂರಿಯಾ ಗೊಬ್ಬರ ವಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 4:56 IST
Last Updated 18 ಫೆಬ್ರುವರಿ 2026, 4:56 IST
ಹುಣಸೂರು ನಗರದ ಹೊರವಲಯ ಕಲ್ಲಬೆಟ್ಟದ ಬಳಿ ಗುಜರಿಯಲ್ಲಿ ಸಂಗ್ರಹಿಸಿದ್ದ ಯೂರಿಯಾ ರಸಗೊಬ್ಬರವನ್ನು ಮಂಗಳವಾರ ಪೊಲೀಸ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದರು. ಡಿವೈಎಸ್ಪಿ ರವಿ, ಕೃಷಿ ಅಧಿಕಾರಿಗಳಾದ ಅನಿಲ್‌ ಮತ್ತು ಜಯಕುಮಾರ್‌ ಪಾಲ್ಗೊಂಡಿದ್ದರು
ಹುಣಸೂರು ನಗರದ ಹೊರವಲಯ ಕಲ್ಲಬೆಟ್ಟದ ಬಳಿ ಗುಜರಿಯಲ್ಲಿ ಸಂಗ್ರಹಿಸಿದ್ದ ಯೂರಿಯಾ ರಸಗೊಬ್ಬರವನ್ನು ಮಂಗಳವಾರ ಪೊಲೀಸ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದರು. ಡಿವೈಎಸ್ಪಿ ರವಿ, ಕೃಷಿ ಅಧಿಕಾರಿಗಳಾದ ಅನಿಲ್‌ ಮತ್ತು ಜಯಕುಮಾರ್‌ ಪಾಲ್ಗೊಂಡಿದ್ದರು   

ಹುಣಸೂರು: ನಗರ ಹೊರ ವಲಯದ ಕಲ್ಲಬೆಟ್ಟದ ಬಳಿ ಗುಜರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 1,300 ಚೀಲ ಯುರಿಯಾ ಗೊಬ್ಬರವನ್ನು ಪೊಲೀಸ್‌ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ವಶಕ್ಕೆ ಪಡೆದರು.

ನಗರದ ಹೊರ ವಲಯದಲಿನ ಯಜಾಸ್‌ ಪಾಷ ಒಡೆತನದ ಗುಜರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ₹ 18 ಲಕ್ಷ ಮೌಲ್ಯದ 1,300 ಚೀಲ ಸರ್ಕಾರದ ಯೂರಿಯಾ ರಸಗೊಬ್ಬರ ದಾಸ್ತಾನು ಮಾಡಿದ್ದು, ಸರ್ಕಾರದ ಹೆಸರಿನ ಚೀಲದಲ್ಲಿದ್ದ ಗೊಬ್ಬರವನ್ನು ಖಾಸಗಿ ಕಾರ್ಖಾನೆ ಹೆಸರಿನಲ್ಲಿನ ಚೀಲಕ್ಕೆ ಬದಲಾಯಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೋಮವಾರ ರಾತ್ರಿ ಬೀಟ್‌ನಲ್ಲಿದ್ದ ಪೊಲೀಸ್‌ ಸಿಬ್ಬಂದಿಗೆ ಅನಾಮಧೇಯ ದೂರವಾಣಿ ಕರೆ ಮಾಡಿದ ವ್ಯಕ್ತಿ, ನಗರದ ಹೊರ ವಲಯದ ಗುಜರಿಯಲ್ಲಿ ಅಕ್ರಮವಾಗಿ ಯೂರಿಯಾ ಗೊಬ್ಬರವನ್ನು ದಾಸ್ತಾನು ಮಾಡಿ ಖಾಸಗಿ ಕಂಪನಿ ಲೇಬಲ್‌ ಹೊಂದಿರುವ ಚೀಲಕ್ಕೆ ಬದಲಾಯಿಸಿ ಕೇರಳ ರಾಜ್ಯಕ್ಕೆ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ನೀಡಿದರು. ದೂರಿನ ಆಧಾರದ ಮೇಲೆ ಸ್ಥಳೀಯ ಪೊಲೀಸ್‌ ಮತ್ತು ಡಿಆರ್‌ ತುಕುಡಿ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ಡಿವೈಎಸ್‌ಪಿ ರವಿ ಮಾಹಿತಿ ನೀಡಿದರು.

ADVERTISEMENT

ಈ ಪ್ರಕರಣದಲ್ಲಿ ಕನಿಷ್ಠ 10 ಜನ ಇರುವ ಬಗ್ಗೆ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದ್ದು, ದಾಳಿ ನಡೆದ ಸಮಯದಲ್ಲಿ ಗುಜರಿಯಲ್ಲಿ ಇದ್ದವರು ತಲೆ ಮರೆಸಿಕೊಂಡಿದ್ದಾರೆ. ಈ ಸ್ಥಳದಲ್ಲಿ ಗೊಬ್ಬರ ತುಂಬಿಸಿದ್ದ ಮೂರು ಲಾರಿ ಹಾಗೂ ಇತರೆ ಮೂರು ಲಾರಿ ಸೇರಿದಂತೆ 1,300 ಯೂರಿಯಾ ಚೀಲ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ’ ಎಂದರು.

‘ಯೂರಿಯಾ ಗೊಬ್ಬರ ದಾಸ್ತಾನು ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದ್ದು, ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಲು ಇಲಾಖೆ ಪರ್ಮಿಟ್‌ನಲ್ಲಿ ಖರೀದಿಸಿದ್ದಾರೆ. ಈ ಪ್ರಮಾಣದ ಗೊಬ್ಬರ ಒಂದೇ ತಾಲ್ಲೂಕಿನಿಂದ ಸಂಗ್ರಹಿಸಲು ಸಾಧ್ಯವಿಲ್ಲ, ನೆರೆಯ ತಾಲ್ಲೂಕು ಕೇಂದ್ರಗಳಿಂದ ಅಕ್ರಮವಾಗಿ ಖರೀದಿಸಿ ಇಲ್ಲಿ ದಾಸ್ತಾನು ಮಾಡಿದ್ದಾರೆ. ಜಪ್ತಿ ಮಾಡಿರುವ ಯೂರಿಯಾ ಮದ್ರಾಸ್‌ ಫರ್ಟಿಲೈಸರ್‌ ಪ್ರವೈಟ್‌ ಕಂಪನಿಗೆ ಸೇರಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್‌ ತಿಳಿಸಿದರು. 

‘ಜಪ್ತಿ ಮಾಡಿದ ರಸಗೊಬ್ಬರವನ್ನು ಚಿಲ್ಕುಂದ ಗೋದಾಮಿನಲ್ಲಿ ಶೇಖರಿಸಿಡಲು ಜಿಲ್ಲಾ ಕೃಷಿ ಇಲಾಖೆಯಿಂದ ವಿಶೇಷ ಅನುಮತಿ ಪಡೆದಿದ್ದು, ಗುಜರಿಯಿಂದ ಎಲ್ಲಾ 1,300 ಮೂಟೆಯನ್ನು ತೂಕ ಮಾಡಿದ ಬಳಿಕ ಸಾಗಾಣಿಕೆ ಮಾಡಿ ಪ್ರಕರಣ ದಾಖಲಿಸಲಿದ್ದೇವೆ’ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಕೃಷಿ ಅಧಿಕಾರಿ ಜಯಕುಮಾರ್‌, ಉಪ ಕೃಷಿ ನಿರ್ದೇಶಕ ಧನಂಜಯ, ಜಂಟಿ ಕೃಷಿ ನಿರ್ದೇಶಕ ರವಿ ಕೆ.ಎಚ್‌, ಪೊಲೀಸ್‌ ಅಧಿಕಾರಿ ಮಹೇಶ್‌ ಮತ್ತು ಸಿಬ್ಬಂದಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.