ADVERTISEMENT

ಮಹಾ ಕುಂಭ ಮೇಳಕ್ಕೆ ಬರುವ ಭಕ್ತರಿಗೆ ಅಗತ್ಯ ವ್ಯವಸ್ಥೆ: ಸುತ್ತೂರು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 7:02 IST
Last Updated 12 ಅಕ್ಟೋಬರ್ 2022, 7:02 IST
ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಸಚಿವರಾದ ನಾರಾಯಣಗೌಡ ಹಾಗೂ ಕೆ.ಗೋಪಾಲಯ್ಯ ಮತ್ತು ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ ಕುಂಭಮೇಳಕ್ಕೆ ಅಧಿಕೃತವಾಗಿ ಮೈಸೂರಿನಲ್ಲಿ ಬುಧವಾರ ಆಹ್ವಾನಿಸಿದರು  -ಪ್ರಜಾವಾಣಿ ಚಿತ್ರ
ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಸಚಿವರಾದ ನಾರಾಯಣಗೌಡ ಹಾಗೂ ಕೆ.ಗೋಪಾಲಯ್ಯ ಮತ್ತು ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ ಕುಂಭಮೇಳಕ್ಕೆ ಅಧಿಕೃತವಾಗಿ ಮೈಸೂರಿನಲ್ಲಿ ಬುಧವಾರ ಆಹ್ವಾನಿಸಿದರು -ಪ್ರಜಾವಾಣಿ ಚಿತ್ರ   

ಮೈಸೂರು: ‘ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ–ಸಂಗಾಪುರ–‍ಪುರದಲ್ಲಿರುವ ಕಾವೇರಿ–ಹೇಮಾವತಿ–ಲಕ್ಷ್ಮಣತೀರ್ಥ ನದಿಗಳ ಸಂಗಮ ಸ್ಥಳದಲ್ಲಿ ಅ.13ರಿಂದ 16ರವರೆಗೆ ಮಲೆಮಹದೇಶ್ವರ ಮಹಾ ಕುಂಭ ಮೇಳ ನಡೆಯಲಿದ್ದು, ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಕ್ತರು ಯಾವುದೇ ಆತಂಕವಿಲ್ಲದೆ ಭಾಗವಹಿಸಬೇಕು’ ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಸುತ್ತೂರು ಶಾಖಾ ಮಠದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013ರ ನಂತರ ಈಗ ಕುಂಭಮೇಳ ನಡೆಸಲಾಗುತ್ತಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು 3–4 ತಿಂಗಳುಗಳಿಂದಲೇ ಅಲ್ಲಿನ ಸಚಿವರ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ. ಭಕ್ತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಗತ್ಯವಾದ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ಹೇಳಿದರು.

‘ತ್ರಿವೇಣಿ ಸಂಗಮದ ಪವಿತ್ರ ಸ್ಥಳವದು. ಮಹದೇಶ್ವರರು ಕರ್ನಾಟಕದಲ್ಲಿ ಮೊದಲು ಅಂಬಿಗರಹಳ್ಳಿಗೆ ಬಂದರು ಎಂಬ ಪ್ರತೀತಿ ಇದೆ. ಅಲ್ಲಿಂದಲೇ ಪವಾಡಗಳನ್ನು ಆರಂಭಿಸಿದರು ಎಂಬ ನಂಬಿಕೆ ಇದೆ’ ಎಂದು ತಿಳಿಸಿದರು.

ADVERTISEMENT

‘ಯಾತ್ರೆಯ ರಥಯಾತ್ರೆಗೆ ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.

ವಿಶೇಷ ಗಂಗಾರತಿಗೆ ಯೋಗಿ:‘ನಾಲ್ಕು ದಿನಗಳವರೆಗೆ ವಿವಿಧ ಧಾರ್ಮಿಕ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 15ರಂದು ಸಂಜೆ ತ್ರಿವೇಣಿ ಸಂಗಮದಲ್ಲಿ ವಿಶೇಷ ಗಂಗಾರತಿ ನೆರವೇರಲಿದೆ. 16ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಮೊದಲಾದವರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಶ್ರೀರಂಗಪಟ್ಟಣ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಮೂರು ನದಿಗಳ ಸಂಗಮವು ಗೋಚರಿಸುವ ಪವಿತ್ರ ಸ್ಥಳವಿದು. ಹೀಗಾಗಿ, ಅಲ್ಲಿನ ಕುಂಭಮೇಳಕ್ಕೆ ಹಾಗೂ ಪುಣ್ಯಸ್ನಾನಕ್ಕೆ ವಿಶೇಷವಾದ ಮಹತ್ವವಿದೆ. ಇಲ್ಲಿ ಪುಣ್ಯ ಸ್ನಾನ ಮಾಡುವುದರಿಂದ ಮೋಕ್ಷ ಪಡೆಯಬಹುದು. ಈ ಭಾಗದ ಭಕ್ತರು ಪ್ರಯಾಗಕ್ಕೋ, ವಾರಾಣಸಿಗೋ ಹೋಗುವುದು ಕಷ್ಟ. ಇಲ್ಲೇ ಸಿಕ್ಕಿರುವ ಅವಕಾಶ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ‘ನೂತನವಾಗಿ ನಿರ್ಮಿಸಿರುವ ಮಾದೇಶ್ವರ ದೇವಸ್ಥಾನದ ಉದ್ಘಾಟನೆಯೂ ನೆರವೇರಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಕುಂಭಮೇಳವನ್ನು ಉದ್ಘಾಟಿಸಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಥ ಸ್ವಾಮೀಜಿ ನೇತೃತ್ವದಲ್ಲಿ ಕುಂಭಮೇಳ ಆಯೋಜಿಸಲಾಗಿದೆ. 15ರಂದು ಧಾರ್ಮಿಕ ಸಭೆ ಹಾಗೂ 16ರಂದು ಪುಣ್ಯಸ್ನಾನ ಕಾರ್ಯಕ್ರಮ ನಡೆಯಲಿದೆ’ ಎಂದು ವಿವರಿಸಿದರು.

ರಾಜಕೀಯ ಕಾರ್ಯಕ್ರಮವಲ್ಲ:‘ಸ್ವಾಮೀಜಿಗಳು, ಸಾಧು–ಸಂತರಿಗೆ ಪ್ರತ್ಯೇಕ ಸ್ನಾನಘಟ್ಟ ನಿರ್ಮಿಸಲಾಗಿದೆ. 200ಕ್ಕೂ ಹೆಚ್ಚು ಮೊಬೈಲ್‌ ಶೌಚಾಲಯ ಒದಗಿಸಲಾಗಿದೆ. 200 ಮಂದಿ ಸಾಧುಗಳ ವಾಸ್ತವ್ಯಕ್ಕೆ ಟೆಂಟ್‌ ವ್ಯವಸ್ಥೆ ಮಾಡಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು, ನುರಿತ ಈಜುಗಾರರನ್ನೂ ಸ್ಥಳದಲ್ಲಿ ನಿಯೋಜಿಸಲಾಗುವುದು’ ಎಂದು ಹೇಳಿದರು.

‘ಕುಂಭ ಮೇಳಕ್ಕೆ ಹೋದ ಬಾರಿ ₹ 50 ಲಕ್ಷ ಖರ್ಚಾಗಿತ್ತು. ಈ ಬಾರಿ ಸರ್ಕಾರದಿಂದ ₹ 4 ಕೋಟಿ ಬಿಡುಗಡೆಯಾಗಿದೆ. ಸಾವಿರ ಕ್ವಿಂಟಲ್ ಅಕ್ಕಿಯು ದಾನಿಗಳಿಂದಲೇ ಸಂಗ್ರಹವಾಗಿದೆ. ಸಂಗಮ ಸ್ಥಳದ ದೇಗುಲದಲ್ಲಿ ಪ್ರತಿ ಪೌರ್ಣಿಮೆ, ಅಮಾವಾಸ್ಯೆಯಂದು ವಿಶೇಷ ಪೂಜೆ ಹಾಗೂ ದಾಸೋಹ ನಡೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಮುಂದೆ ಕುಂಭಮೇಳವನ್ನು ಎಷ್ಟು ವರ್ಷಗಳಿಗೊಮ್ಮೆ ನಡೆಸಬೇಕು ಎನ್ನುವುದನ್ನು ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ಇದು ರಾಜಕೀಯ ಕಾರ್ಯಕ್ರಮವಲ್ಲ. ನನ್ನ ಉತ್ಸವವೂ ಏನಲ್ಲ. ಜನರ ಕಾರ್ಯಕ್ರಮವಿದು. ನಾನೊಬ್ಬ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿರುವ ದೇವಸ್ಥಾನದ ಪುನರುಜ್ಜೀವನನ್ನೂ ಮಾಡುತ್ತೇವೆ. ರಥವನ್ನೂ ಸಿದ್ಧಪಡಿಸಲಾಗುವುದು. ₹ 4 ಕೋಟಿಯನ್ನು ಕುಂಭಮೇಳಕ್ಕಾಗಿಯೇ ಬಳಸುತ್ತಿಲ್ಲ. ಅಲ್ಲಿನ ಅಭಿವೃದ್ಧಿ ಕಾರ್ಯವೂ ನಡೆಯುತ್ತಿದೆ. ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲಾಗಿದೆ’ ಎಂದು ಸಚಿವ ನಾರಾಯಣಗೌಡ ಉತ್ತರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಸಂಸದ ಪ್ರತಾಪ ಸಿಂಹ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.