ಮೈಸೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಪರೀಕ್ಷೆಯಲ್ಲಿ 263ನೇ ರ್ಯಾಂಕ್ ಗಳಿಸಿದ ಗ್ರಾಮೀಣ ಪ್ರತಿಭೆ ಪ್ರೀತಿ ಎ.ಸಿ. ಅವರನ್ನು ಇಲ್ಲಿನ ಬಿಜಿಎಸ್ ಬಿ.ಇಡಿ ಕಾಲೇಜಿನಲ್ಲಿ ಶನಿವಾರ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಅವರು, ‘ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದುದು. ನನ್ನ ಯಶಸ್ಸಿಗೆ ಶಿಕ್ಷಕರ ಸಲಹೆ– ಮಾರ್ಗದರ್ಶನ ಕಾರಣವಾಯಿತು. ಅವರಿಗೆ ನಾನು ಸದಾ ಋಣಿಯಾಗಿದ್ದೇನೆ’ ಎಂದರು.
‘ಕೃಷಿಕ ಕುಟುಂಬದಿಂದ ಬಂದ ನಾನು, ತಂದೆಯ ಪ್ರೇರಣೆಯಿಂದ ಯುಪಿಎಸ್ಸಿಯಲ್ಲಿ ಯಶಸ್ಸು ಸಾಧಿಸಿದ್ದೇನೆ. ಅವರು ಅಡುಗೆ ಕೆಲಸ ಮಾಡುತ್ತಾರೆ. ಇದು ನನಗೆ ಹೆಮ್ಮೆಯ ಸಂಗತಿ. ಓದುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದುದು ನಮ್ಮ ವ್ಯಕ್ತಿತ್ವ ಉಳಿಸಿಕೊಳ್ಳುವುದು. ಏಕೆಂದರೆ ಅಪ್ಪ– ಅಮ್ಮ ನಮ್ಮನ್ನು ನಂಬಿ ಶಾಲಾ –ಕಾಲೇಜುಗಳಿಗೆ ಕಳುಹಿಸುತ್ತಾರೆ. ಪೋಷಕರ ಗೌರವಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳುವುದು ಬಹಳ ಮುಖ್ಯ’ ಎಂದು ತಿಳಿಸಿದರು.
ಚಿಂತಕ ಶಂಕರ ದೇವನೂರು ಮಾತನಾಡಿ, ‘ಜ್ಯೋತಿ ಎಂಬುದು ನಮ್ಮ ಪರಂಪರೆಯ ಬೆಳಕಿನ ಸಂಕೇತ. ಅದು ಬದುಕನ್ನು ಬೆಳಗಬೇಕು. ಆದರೆ, ಇಂದು ದ್ವೇಷದ ದಳ್ಳೂರಿಯಲ್ಲಿ ಜಗತ್ತು ಬೇಯುತ್ತಿದೆ’ ಎಂದು ವಿಷಾದಿಸಿದರು.
‘ವಿದ್ಯೆ ಎಂಬುದು ಅಭ್ಯಸಿಸುವವರ ಸ್ವತ್ತಾದರೆ, ಜ್ಞಾನ ಎಂಬುದು ಸಾಧಕನ ಸ್ವತ್ತು. ನೀರಿನಲ್ಲಿ ಈಜುವ ಮೀನು ಹಾರಲು ಯತ್ನಿಸಿದರೆ ಹಕ್ಕಿಗೆ ಆಹಾರವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಾಮರ್ಥ್ಯಕ್ಕೆ ತಕ್ಕಂತೆ ಸಾಧನೆಗೆ ಅಣಿಯಾಗಬೇಕು. ಶಿಕ್ಷಣವೆಂಬ ಅಸ್ತ್ರವನ್ನು ಸಾಧನೆಗೆ ಪೂರಕ ಸಾಧನವಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಉದ್ಘಾಟಿಸಿದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಇಲಾಖೆ ನಿವೃತ್ತ ಪ್ರಧಾನ ಆಯುಕ್ತ ಜಿ.ನಾರಾಯಣಸ್ವಾಮಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮೈಸೂರು ಶಾಖೆಯ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ, ‘ಗುರಿ ಮುಟ್ಟುವಾಗ ತೊಂದರೆಗಳು ಎದುರಾಗುತ್ತವೆ. ಅವುಗಳನ್ನು ಮೆಟ್ಟಿ ನಿಂತಾಗ ಗುರಿ ಸಾಸಬಹುದು’ ಎಂದರು.
ಕಾಲೇಜಿನ ಪ್ರಾಂಶುಪಾಲ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಯಶೋಧಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.