ಮೈಸೂರು: ರಾಜ್ಯದಾದ್ಯಂತ ವರುಣ ಅಬ್ಬರಿಸುತ್ತಿದ್ದರೂ ಜಿಲ್ಲೆಯಲ್ಲಿ ಮಾತ್ರ ಮುಂಗಾರಿನಲ್ಲಿ ಮಳೆಯ ಕೊರತೆ ಕಾಡಿದೆ. ಸದ್ಯ ಹಿಂಗಾರು ಆರಂಭ ಆಗಿದ್ದು, ಈ ಮಳೆಯಾದರೂ ಕೈ ಹಿಡಿಯಲಿ ಎನ್ನುವುದು ರೈತರ ನಿರೀಕ್ಷೆಯಾಗಿದೆ.
ಜೂನ್ನಲ್ಲಿ ಆರಂಭಗೊಂಡು ಸೆಪ್ಟೆಂಬರ್ ಅಂತ್ಯದವರೆಗೆ ಮುಂಗಾರು ಮಳೆಯಾಗುತ್ತದೆ. ಈ ಅವಧಿಯಲ್ಲಿ ಈ ವರ್ಷ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 23ರಷ್ಟು ಕಡಿಮೆ ಮಳೆಯಾಗಿದೆ. ಇದರಿಂದಾಗಿ ಹಲವು ತಾಲ್ಲೂಕುಗಳಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆ ಆಗಿದ್ದು, ಉತ್ಪಾದನೆಯೂ ತಗ್ಗುವ ಸಾಧ್ಯತೆ ಇದೆ.
‘ಜಿಲ್ಲೆಯಲ್ಲಿ ಇಡೀ ಮುಂಗಾರಿನಲ್ಲಿ ಮಳೆಯ ಕೊರತೆಯಾಗಿದ್ದು, ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಶೇ 55ರಷ್ಟು ಕಡಿಮೆ ಮಳೆಯಾಗಿದೆ. ಮುಂಗಾರಿನಲ್ಲಿ ಶೇ 94ರಷ್ಟು ಜಮೀನಿನಲ್ಲಿ ಬಿತ್ತನೆಯಾಗಿತ್ತು. ಸದ್ಯ ಮಳೆ ಕೊರತೆ ಕಾರಣಕ್ಕೆ ಹುರುಳಿ ಬಿತ್ತನೆ ಕಡಿಮೆಯಾಗಿದೆ. ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದ್ದರೂ ಹೆಚ್ಚು ಅನುಕೂಲ ಆಗಿಲ್ಲ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ರವಿ.
ಎಲ್ಲೆಲ್ಲಿ ಕಡಿಮೆ: ಎಚ್.ಡಿ.ಕೋಟೆ ತಾಲ್ಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ ಎಲ್ಲ ತಾಲ್ಲೂಕುಗಳೂ ಈ ಮುಂಗಾರಿನಲ್ಲಿ ಮಳೆ ಕೊರತೆ ಕಂಡಿವೆ.
ಭತ್ತದ ನಾಡು ಕೆ.ಆರ್. ನಗರದಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ವಾಡಿಕೆಗಿಂತ ಶೇ 37ರಷ್ಟು ಕಡಿಮೆ ಮಳೆಯಾಗಿದೆ. ಹುಣಸೂರು, ಸಾಲಿಗ್ರಾಮ ತಾಲ್ಲೂಕುಗಳೂ ವಾಡಿಕೆಗಿಂತ ಶೇ 30ರಷ್ಟು ಕಡಿಮೆ ಮಳೆ ದಾಖಲಿಸಿವೆ. ಮೈಸೂರು, ಪಿರಿಯಾಪಟ್ಟಣದಲ್ಲೂ ವರುಣ ನಿರೀಕ್ಷೆಯಷ್ಟು ವರ್ಷಧಾರೆ ಸುರಿಸಿಲ್ಲ.
ಈ ಮುಂಗಾರಿನಲ್ಲಿ ಜಿಲ್ಲೆಯಲ್ಲಿ 83430 ಹೆಕ್ಟೇರ್ನಲ್ಲಿ ಭತ್ತ ಬಿತ್ತನೆಯಾಗಿದ್ದು ಶೇ 97ರಷ್ಟು ಗುರಿ ಸಾಧನೆ ಆಗಿದೆ. 53761 ಹೆಕ್ಟೇರ್ನಲ್ಲಿ ರಾಗಿ ಬಿತ್ತನೆ ಆಗಿದ್ದು ಮಳೆ ಕೊರತೆಯಿಂದಾಗಿ ಇನ್ನೂ 8319 ಹೆಕ್ಟೇರ್ ಜಮೀನು ಹಾಗೆಯೇ ಉಳಿದಿದೆ. ಹುರುಳಿ 6500 ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಇತ್ತು. ಆದರೆ ಈವರೆಗೆ 4930 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಮುಂಗಾರಿನಲ್ಲಿ 12 ಸಾವಿರ ಹೆಕ್ಟೇರ್ನಲ್ಲಿ ಅವರೆ ಬಿತ್ತನೆ ಗುರಿ ಇತ್ತು. ಆದರೆ ಇನ್ನೂ 2748 ಹೆಕ್ಟೇರ್ನಲ್ಲಿ ಬಿತ್ತನೆ ಆಗಿಲ್ಲ. ಉದ್ದು ಹೆಸರು ಎಳ್ಳು ಸೂರ್ಯಕಾಂತಿ ಸೇರಿದಂತೆ ಏಕದಳ ದ್ವಿದಳ ಹಾಗೂ ಎಣ್ಣೆಕಾಳು ಕೃಷಿಯೂ ಈ ಬಾರಿ ಮಳೆ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.